AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದ ನಿರ್ಮಲಾನಂದನಾಥಶ್ರೀ, ನಂಜಾವಧೂತಶ್ರೀ

ಡಿ.ಕೆ ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಪಕ್ಷ ಸಂಘಟನೆ ಮಾಡಿದ್ದಾರೆ. ಮುಖ್ಯಮಂತ್ರಿ ಆಗುವುದಕ್ಕೆ ಡಿ.ಕೆ.ಶಿವಕುಮಾರ್​ ಅರ್ಹರಾಗಿದ್ದಾರೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಶ್ರೀ ಹೇಳಿದರು.

Follow us
ಗಂಗಾಧರ​ ಬ. ಸಾಬೋಜಿ
|

Updated on:May 14, 2023 | 7:54 PM

ಬೆಂಗಳೂರು: ಡಿ.ಕೆ ಶಿವಕುಮಾರ್ (DK Shivakumar)​ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಪಕ್ಷ ಸಂಘಟನೆ ಮಾಡಿದ್ದಾರೆ. ಮುಖ್ಯಮಂತ್ರಿ ಆಗುವುದಕ್ಕೆ ಡಿ.ಕೆ.ಶಿವಕುಮಾರ್​ ಅರ್ಹರಾಗಿದ್ದಾರೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಶ್ರೀ ಹೇಳಿದರು. ಡಿಕೆ ಶಿವಕುಮಾರ್​ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿ ಭಾನುವಾರ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಸಭೆ ಮಾಡಲಾಯಿತು. ಸಭೆಯಲ್ಲಿ ಮಾತನಾಡಿದ ಅವರು, ಫಲ ಸಿಕ್ಕಿದೆ ಅಂದರೆ ಅದರ ಹಿಂದೆ ಶ್ರಮ ಇದ್ದೇ ಇರುತ್ತೆ. ಒಕ್ಕಲಿಗ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿದೆ. ಸಿಎಂ ಸ್ಥಾನ ನೀಡುವ ಮೂಲಕ ಡಿಕೆ ಶಿವಕುಮಾರ್​ ಹುಟ್ಟುಹಬ್ಬ ಆಚರಿಸಲಿ ಎಂದು ಹೇಳಿದರು.

2 ಬಾರಿ ಸಿಎಂ ಆಗಿದ್ದಾಗಲೂ ಹೆಚ್​​ಡಿ ಕುಮಾರಸ್ವಾಮಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಡಿಕೆ ಶಿವಕುಮಾರ್​​ ಶಕ್ತಿಯನ್ನು ಉಪಯೋಗಿಸಿಕೊಳ್ಳುವ ಕೆಲಸವನ್ನು ಪಕ್ಷ ಮಾಡಲಿ. ಸೋನಿಯಾ, ಖರ್ಗೆ, ಸಿದ್ದರಾಮಯ್ಯ ಎನ್ನಲರೂ ಡಿಕೆ ಶಿವಕುಮಾರ್​ಗೆ​ ಬೆಂಬಲ ನೀಡುತ್ತಾರೆ ಎಂಬ ಭಾವನೆ ಇದೆ. ಅಧ್ಯಕ್ಷರಾದವರನ್ನ ಸಿಎಂ ಮಾಡುತ್ತಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ನಮ್ಮ ನಿರ್ಣಯ ಕಾಂಗ್ರೆಸ್​ಗೆ ಮುಟ್ಟಬೇಕು: ನಂಜಾವಧೂತಶ್ರೀ  

ಸಭೆಯಲ್ಲಿ ಸ್ಫಟಿಕಪುರಿ ಮಹಾಸಂಸ್ಥಾನದ ನಂಜಾವಧೂತಶ್ರೀ ಮಾತನಾಡಿ, ಡಿ.ಕೆ ಶಿವಕುಮಾರ್‌ ಸಿಎಂ ಹುದ್ದೆ ಕೇಳಲು ಅರ್ಹರಿದ್ದಾರೆ. ನಾವು ನಮ್ಮ ಸಮುದಾಯದ ನಿರ್ಣಯವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುಟ್ಟಿಸಬೇಕು. ಹೀಗಾಗಿಯೇ ಶಾಸಕ ಬಾಲಕೃಷ್ಣರನ್ನು ಸಭೆಗೆ ಕರೆಸಲಾಗಿದೆ. ನಮ್ಮ ನಿರ್ಧಾರವನ್ನು ಸಿಎಲ್‌ಪಿ ಸಭೆಗೆ ತಿಳಿಸುತ್ತಾರೆಂಬ ವಿಶ್ವಾಸವಿದೆ ಎಂದರು.

5 ವರ್ಷ ಪೂರ್ಣ ಅವಧಿ ನಮ್ಮ ಸಮುದಾಯದವರಿಗೆ ಸಿಕ್ಕಿಲ್ಲ

ಒಕ್ಕಲಿಗ ಸಿಎಂಗಳು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಸಿಎಂ ಆಗಿದ್ದ ನಮ್ಮ ಸಮುದಾಯದವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವರಿಗೆ 5 ವರ್ಷ ಪೂರ್ಣ ಅವಧಿ ಸಿಕ್ಕಿಲ್ಲ. ಸಿಕ್ಕ ಸಮಯದಲ್ಲೇ ಹಲವು ಜನಪರ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಎಸ್‌.ಎಂ.ಕೃಷ್ಣ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಆಗಿತ್ತು. ಬೆಂಗಳೂರನ್ನು ಸಿಲಿಕಾನ್‌ ವ್ಯಾಲಿ ಮಾಡಿದ ಕೀರ್ತಿ ಎಸ್‌ಎಂ ಕೃಷ್ಣ ಅವರಿಗೆ ಸಲುತ್ತೆ. ಬಿಸಿಯೂಟ ಯೋಜನೆ, ಸ್ತ್ರೀಶಕ್ತಿ ಸಂಘಗಳನ್ನು ಸ್ಥಾಪಿಸಿದ್ದರು ಎಂದು ಹೇಳಿದರು.

ಡಿ.ಕೆ.ಶಿವಕುಮಾರ್‌ಗೆ ಸಿಎಂ ಆಗಲು ಅವಕಾಶ ನೀಡಲಿ

ಪಕ್ಷದ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗಲಿ. ಅದೇ ರೀತಿ ಡಿಕೆ ಶಿವಕುಮಾರ್​ ಮುಖ್ಯಮಂತ್ರಿ ಆಗಲಿ. ಸಾಕಷ್ಟು ಸಂಕಷ್ಟಗಳ ನಡುವೆಯೂ ಪಕ್ಷ ಸಂಘಟಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದರು. ಸಿಎಂ ಆಗಿದ್ದ ವೇಳೆ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದಾರೆ. ಈ ಸಲ ಡಿ.ಕೆ.ಶಿವಕುಮಾರ್‌ಗೆ ಸಿಎಂ ಆಗಲು ಅವಕಾಶ ನೀಡಲಿ ಎಂದರು.

ಖರ್ಗೆ, ಸಿದ್ದರಾಮಯ್ಯ ಎಲ್ಲರೂ ಸೇರಿ ಡಿಕೆಶಿರನ್ನು ಸಿಎಂ ಮಾಡಲಿ. ಇದು ಒಕ್ಕಲಿಗರ ಸಮುದಾಯದ ತೀರ್ಮಾನ. ಡಿಕೆಶಿ ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕಾಗಿ ಶ್ರಮಿಸಿದ ಡಿಕೆಶಿರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೇ ಸಿಎಂ ಎಂದು ಘೋಷಿಸಲಿ ಎಂದು ಒತ್ತಾಯಿಸಿದರು.

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:50 pm, Sun, 14 May 23