Fact Check: ಬಿಜೆಪಿ ವ್ಯಾನ್ ಧ್ವಂಸಗೊಳಿಸಿ ಜನಾಕ್ರೋಶ; ವೈರಲ್ ವಿಡಿಯೊ ಕರ್ನಾಟಕದ್ದಲ್ಲ

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡ್ ವಿಧಾನಸಭಾ ಕ್ಷೇತ್ರದಲ್ಲಿ ಹುಜೂರಾಬಾದ್ ಶಾಸಕ ಈಟಾಲ ರಾಜೇಂದ್ರ ಅವರ ಬೆಂಗಾವಲು ವಾಹನದ ಮೇಲೆ ಹಲ್ಲೆ ನಡೆಸಿರುವ ವಿಡಿಯೊವನ್ನು ಕರ್ನಾಟಕದಲ್ಲಿ ನಡೆದ ಘಟನೆ ಎಂದು ಹೇಳಿ ವೈರಲ್ ಮಾಡಲಾಗಿದೆ

Fact Check: ಬಿಜೆಪಿ ವ್ಯಾನ್ ಧ್ವಂಸಗೊಳಿಸಿ ಜನಾಕ್ರೋಶ; ವೈರಲ್ ವಿಡಿಯೊ ಕರ್ನಾಟಕದ್ದಲ್ಲ
ಬಿಜೆಪಿ ಪ್ರಚಾರ ವ್ಯಾನ್ ಮೇಲೆ ದಾಳಿ( ವೈರಲ್ ವಿಡಿಯೊ ಚಿತ್ರ)
ರಶ್ಮಿ ಕಲ್ಲಕಟ್ಟ

Updated on: Apr 25, 2023 | 7:01 PM

ಕರ್ನಾಟಕ ವಿಧಾನಸಭಾ ಚುನಾವಣೆಯು (Karnataka Assembly election) ಮೇ 10 ರಂದು ನಿಗದಿಯಾಗಿದ್ದು, ಆಡಳಿತಾರೂಢ ಬಿಜೆಪಿ (BJP) ಅಬ್ಬರದ ಪ್ರಚಾರ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮುಂತಾದ ಪ್ರಮುಖ ನಾಯಕರು ಪ್ರಚಾರದಲ್ಲಿದ್ದಾರೆ. ಚುನಾವಣಾ ಕಣದಲ್ಲಿರುವ ಪಕ್ಷಗಳ ಪ್ರಚಾರದ ನಡುವೆಯೇ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ, ಕರ್ನಾಟಕ ಕಾಂಗ್ರೆಸ್‌ನ  (Congress) ಅಧಿಕೃತ ಖಾತೆಗಳು ಬಿಜೆಪಿ ಪ್ರಚಾರ ವಾಹನವನ್ನು ಗುಂಪೊಂದು ಧ್ವಂಸಗೊಳಿಸಿದ ವಿಡಿಯೊವನ್ನು ಹಂಚಿಕೊಂಡಿದೆ. ಬಿಜೆಪಿ ಅಭ್ಯರ್ಥಿಗಳನ್ನು ಮಾತ್ರವಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ನೋಡಿಯೂ ಜನರು ಅಸಹ್ಯ ಮತ್ತು ಆಕ್ರೋಶಗೊಂಡಿದ್ದಾರೆ ಎಂಬ ಬರಹದೊಂದಿಗೆ ಈ ವಿಡಿಯೊ ಶೇರ್ ಆಗಿದೆ.

ವೈರಲ್ ವಿಡಿಯೊದ ಫ್ಯಾಕ್ಟ್ ಚೆಕ್ ನಡೆಸಿದ ಇಂಡಿಯಾ ಟುಡೇ ಈ ವಿಡಿಯೋ ಇತ್ತೀಚಿನದ್ದಲ್ಲ. ಇದು ಕರ್ನಾಟಕದ್ದೂ ಅಲ್ಲ ಎಂದು ಹೇಳಿದೆ.

ಫ್ಯಾಕ್ಟ್ ಚೆಕ್

ವೈರಲ್ ವಿಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನವೆಂಬರ್ 1, 2023 ರಂದು ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ ವಿಡಿಯೊ ಇದಾಗಿದೆ. ಈ ಪೋಸ್ಟ್‌ನ ಪ್ರಕಾರ, ವಿಡಿಯೊ ತೆಲಂಗಾಣದ್ದು. ತೆಲುಗಿನ ಕೀವರ್ಡ್‌ಗಳ ಸಹಾಯದಿಂದ ಫೇಸ್‌ಬುಕ್‌ನಲ್ಲಿ ಮತ್ತಷ್ಟು ಹುಡುಕಾಡಿದಾಗ ಅದೇ ದಿನಾಂಕದಂದು ಫೇಸ್‌ಬುಕ್ ಬಳಕೆದಾರರೊಬ್ಬರು ಇದರ ಪೂರ್ತಿ ವಿಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿದೆ. ಈ ಪೋಸ್ಟ್‌ ಪ್ರಕಾರ, ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡ್ ವಿಧಾನಸಭಾ ಕ್ಷೇತ್ರದಲ್ಲಿ ಹುಜೂರಾಬಾದ್ ಶಾಸಕ ಈಟಾಲ ರಾಜೇಂದ್ರ ಅವರ ಬೆಂಗಾವಲು ವಾಹನದ ಮೇಲೆ ಹಲ್ಲೆ ನಡೆಸಿರುವ ವಿಡಿಯೊ ಇದು ಎಂದು ತೋರಿಸಲಾಗಿದೆ.


ಟ್ವಿಟರ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ ವಿಭಿನ್ನ ವಿಡಿಯೊಗಳನ್ನು ಬಿಜೆಪಿ ತೆಲಂಗಾಣ, ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಜಿ ಕಿಶನ್ ರೆಡ್ಡಿ ಮತ್ತು ಬಿಜೆಪಿ ನಾಯಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಅವರ ಅಧಿಕೃತ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.


ಈ ಟ್ವೀಟ್‌ಗಳ ಪ್ರಕಾರ, ಮುನುಗೋಡು ಉಪಚುನಾವಣೆಗೂ ಮುನ್ನ ಚುನಾವಣಾ ಪ್ರಚಾರದ ವೇಳೆ ದಾಳಿ ನಡೆದಿದೆ.

ಇದನ್ನೂ ಓದಿ: CT Ravi: ಸಿಟಿ ರವಿ ಮುಂದಿನ ಮುಖ್ಯಮಂತ್ರಿ ಆಗಲಿ ಎಂದ ಕೆಎಸ್ ಈಶ್ವರಪ್ಪ

ಹಲವಾರು ಮಾಧ್ಯಮ ಸಂಸ್ಥೆಗಳು 2022 ರಲ್ಲಿ ಈ ಘಟನೆಯನ್ನು ವರದಿ ಮಾಡಿವೆ. ವರದಿಗಳ ಪ್ರಕಾರ, ಮುನುಗೋಡಿನ ಪಲಿವೇಲ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಗಳು ರಾಜೇಂದರ್ ಅವರ ಬೆಂಗಾವಲು ಪಡೆಯ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಈ ಘಟನೆ ನಡೆದಿದೆ. ಈ ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ ಎಂದು ಕರೆಯಲಾಗುತ್ತಿದ್ದ ಭಾರತ್ ರಾಷ್ಟ್ರ ಸಮಿತಿಯ ಸದಸ್ಯರು ಈ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮತ್ತೊಂದೆಡೆ, ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರ ರೋಡ್‌ಶೋನಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದೆ ಎಂದು ಬಿಆರ್‌ಎಸ್ ಆರೋಪಿಸಿದೆ.

ಮತ್ತಷ್ಟು ಫ್ಯಾಕ್ಟ್​​ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Tue, 25 April 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us