AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಂಗಾಯತರ ಕ್ಷಮೆ ಕೋರಿದ್ರಾ ಸಿದ್ದರಾಮಯ್ಯ? ವರುಣಾದಲ್ಲಿ ಮಾಜಿ ಸಿಎಂಗೆ ಶುರುವಾಗಿದೆಯಾ ಈ ಒಂದು ಭಯ?

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಾಡುತ್ತಿದ್ಯಾ ಲಿಂಗಾಯಿತ ಸಮುದಾಯದ ಆಕ್ರೋಶದ ಭಯ ? ಲಿಂಗಾಯತ ಸಮುದಾಯದ ಆಕ್ರೋಶವನ್ನು ತಣ್ಣಗಾಗಿಸಲು ಮುಂದಾದರಾ ಸಿದ್ದು ? ಸಣ್ಣ ನೆಪ‌ ಹುಡುಕಿ ಲಿಂಗಾಯತರ ಕ್ಷಮೆ ಕೋರಿದ್ರಾ ? ಇಂಥದೊಂದು ಅನುಮಾನಕ್ಕೆ ಕಾರಣವಾಗಿದ್ದು ಸಿದ್ದರಾಮಯ್ಯ ನೆನ್ನೆ ವರುಣ ಕ್ಷೇತ್ರದಲ್ಲಿ ನಡೆಸಿದ ರೋಡ್ ಶೋನಲ್ಲಿ ಆಡಿದ ಮಾತುಗಳು.

ಲಿಂಗಾಯತರ ಕ್ಷಮೆ ಕೋರಿದ್ರಾ ಸಿದ್ದರಾಮಯ್ಯ? ವರುಣಾದಲ್ಲಿ ಮಾಜಿ ಸಿಎಂಗೆ ಶುರುವಾಗಿದೆಯಾ ಈ ಒಂದು ಭಯ?
Follow us
ರಮೇಶ್ ಬಿ. ಜವಳಗೇರಾ
|

Updated on: May 05, 2023 | 9:53 AM

ಮೈಸೂರು:  ಲಿಂಗಾಯತ ಸಮಾಜ ಕ್ಷಮಿಸಬೇಕು.. ಕ್ಷಮಿಸಬೇಕು..,ಕ್ಷಮಿಸಬೇಕು ಎಂದು ವರುಣಾ ವಿಧಾನಸಭಾ ಕ್ಷೇತ್ರದ ರಾಂಪುರದಲ್ಲಿ ಸಿದ್ದರಾಮಯ್ಯ ಆಡಿದ ಮಾತುಗಳು.‌ ಸಿದ್ದರಾಮಯ್ಯ ಇಲ್ಲಿ ಈ ರೀತಿ ಮೂರು ಮೂರು ಬಾರಿ ಲಿಂಗಾಯತ ಸಮಾಜವನ್ನು ಕ್ಷಮೆ ಕೇಳಿದ್ದಕ್ಕೆ ಕಾರಣ ತಾನು ಎಲ್ಲರ ಬೀದಿಗಳಿಗೆ ಪ್ರಚಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎನ್ನುವುದು. ಅಸಲಿಗೆ ಸಿದ್ದರಾಮಯ್ಯ ಈ ರೀತಿ ಮೂರು ಮೂರು ಬಾರಿ ಲಿಂಗಾಯತ ಸಮುದಾಯದ ಕ್ಷಮೆ ಕೇಳುವುದರ ಹಿಂದೆ ಬೇರೆಯದೇ ಲೆಕ್ಕಾಚಾರ ಇದೆ ಎನ್ನಲಾಗುತ್ತಿದೆ. ಈ ಹಿಂದೆ ಲಿಂಗಾಯತ ಸಿಎಂಗಳೇ ಈ ರಾಜ್ಯವನ್ನೇ ಹಾಳು ಮಾಡಿರುವುದು, ಭ್ರಷ್ಟಚಾರ ಮಾಡಿರುವುದು ಎಂದು ಹೇಳಿ ಸಿದ್ದರಾಮಯ್ಯ ವಿವಾದಕ್ಕೆ ಗುರಿಯಾಗಿದ್ದರು.

ಲಿಂಗಾಯತರ ಕೋಪ ತಣ್ಣಗಾಗಿಸಲು ಕ್ಷಮೆ ಕೇಳಿದ್ರಾ?

ಲಿಂಗಾಯತರ ಕೋಪಕ್ಕೆ ಸಿದ್ದರಾಮಯ್ಯ ಗುರಿಯಾದ ಮಾತು ಕೇಳಿಬಂದಿತ್ತು. ಲಿಂಗಾಯತರೇ ಅಧಿಕ ಸಂಖ್ಯೆಯಲ್ಲಿರುವ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಲಿಂಗಾಯತ ಮತಗಳು ಕೈತಪ್ಪುವ ಭೀತಿ ಎದುರಾಗಿತ್ತು. ಹೀಗಾಗಿಯೇ ಇದೀಗ ವೀರಶೈವ-ಲಿಂಗಾಯತ ಸಮುದಾಯದ ಕೋಪವನ್ನು ತಣ್ಣಗಾಗಿಸಲು ಸಿದ್ದರಾಮಯ್ಯ ಈ ರೀತಿ ಕ್ಷಮೆಯಾಚಿಸಿದ್ರಾ ಎನ್ನುವ ಚರ್ಚೆ ಗ್ರಾಸವಾಗಿದೆ.

ನಿಮಗೆಲ್ಲ ಕೈಮುಗಿದು ಹೋಗಲು ಬಂದಿದ್ದೇನೆ ಎಂದ ಮಾಜಿ ಸಿಎಂ

ವರುಣಾ ಕ್ಷೇತ್ರದ ರಾಂಪುರದಲ್ಲಿ ಪ್ರಚಾರಕ್ಕೆ ಬರಲು ತಡವಾಗಿದ್ದಕ್ಕೆ ಸಿದ್ದರಾಮಯ್ಯ ನಾನು ವರುಣ ಕ್ಷೇತ್ರಕ್ಕೆ ಎರಡು ದಿನ ಮಾತ್ರ ಬಂದಿರತಕ್ಕಂತದ್ದು, ಬೀದಿ ಬೀದಿಗೆಲ್ಲ ಹೋಗುವುದಕ್ಕೆ ಆಗಲ್ಲ. ನಿಮಗೆಲ್ಲ ಕೈಮುಗಿದು ಹೋಗೋಣ ಎಂದು ಬಂದಿದ್ದೇನೆ ಕ್ಷಮಿಸಿ ಎಂದು ಹೇಳಿದ್ದಾರೆ.

ಲಿಂಗಾಯತ ಸಮಾಜದವರು ಕ್ಷಮಿಸಬೇಕು. ಯಾಕಂದ್ರೆ, ನಾನು ಎರಡೇ ದಿನ ಮಾತ್ರ ವರುಣಾ ಕ್ಷೇತ್ರಕ್ಕೆ ಬಂದಿರತಕ್ಕಂತದ್ದು. ನಿಮಗೆಲ್ಲ ಕೈ ಮುಗಿದು ಹೋಗೋಣ ಅಂತಾ ಬಂದಿದ್ದೇನೆ. ಕ್ಷಮಿಸಿ,, ಅದ್ರಿಂದ ಬೀದಿ ಬೀದಿಗೆಲ್ಲ ಹೋಗೋಕೆ ಆಗಲ್ಲ. ದೇವಸ್ಥಾನಗಳಿಗೆಲ್ಲ ಹೋಗೋಕೆ ಆಗಲ್ಲ. ಇದು ಮೊದಲನೇ ಊರು ಅಂತೇಳಿ ಕೆಲವು ದೇವಸ್ಥಾನಗಳಿಗೆ ಹೋಗಿದ್ದೇನೆ. ಮತ್ತೊಮ್ಮೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಅಪಪ್ರಚಾರಕ್ಕೆ ಕಿವಿಕೊಡಬೇಡಿ ಎಂದ ಸಿದ್ದರಾಮಯ್ಯ

ವರುಣಾ ಕ್ಷೇತ್ರದ ರಾಂಪುರ ಗ್ರಾಮದಲ್ಲಿ ಮೂರು ಮೂರು ಬಾರಿ ಲಿಂಗಾಯತ ಸಮುದಾಯದ ಕ್ಷಮೆ ಕೋರಿದ ಸಿದ್ದರಾಮಯ್ಯ, ಲಿಂಗಾಯತರ ಪ್ರಾಬಲ್ಯವಿರುವ ಹದಿನಾರು ಗ್ರಾಮದಲ್ಲೂ ತಾವು ಲಿಂಗಾಯತ ವಿರೋಧಿಯಲ್ಲ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ. ನನ್ನನ್ನ ವಿರಶೈವ ಲಿಂಗಾಯತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಬಸವಣ್ಣನ ಅಭಿಮಾನಿ, ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಬಸವಣ್ಣನ ಪೋಟೋ ಇಡಲು ಆದೇಶ ಮಾಡಿದವನು. ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದವರೆಗೂ ಕಡ್ಡಾಯ ಭಾವಚಿತ್ರ ಅಳವಡಿಕೆಗೆ ಆದೇಶ ನೀಡಿದೆ. ನಂಜನಗೂಡಿನಲ್ಲಿ 10 ಕೋಟಿ ರೂ. ಬಸವ ಭವನಕ್ಕೆ ಹಣ ಕೊಟ್ಟಿದ್ದೇನೆ. ಅಪಪ್ರಚಾರಕ್ಕೆ ಕಿವಿ ಕೊಡಬೇಡಿ ಅಂತಾ ಮನವಿ ಮಾಡಿದ್ದಾರೆ.

ವರುಣಾದಲ್ಲಿ ಸಿದ್ದರಾಮಯ್ಯ ಎದುರಾಳಿ ವಿ ಸೋಮಣ್ಣ ಕೂಡ ಲಿಂಗಾಯತರೇ ಆಗಿರುವುದರಿಂದ, ಈ ಬಾರಿ ಟಫ್ ಫೈಟ್ ಎದುರಾಗಿದೆ. ಲಿಂಗಾಯತರ ಆಶೀರ್ವಾದ ಇಲ್ಲದಿದ್ದರೆ ವರುಣಾ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಗೆ ಗೆಲುವು ಕಷ್ಟ. ಇದನ್ನು ಅರಿತೇ ಸಿದ್ದರಾಮಯ್ಯ ಕೊನೆ ಕ್ಷಣದಲ್ಲಿ ವೀರಶೈವ-ಲಿಂಗಾಯತರ ಓಲೈಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ವರುಣಾ ಕಬ್ಬಿನದ ಕಡಲೆಯಾಗುತ್ತಿದೆಯಾ ? ಚಾಮುಂಡೇಶ್ವರಿಯಂತೆ ಇಲ್ಲೂ ಸಿದ್ದು ಹಣಿಯಲು ಖೆಡ್ಡಾ ರೆಡಿಯಾಗಿದೆಯಾ? ಮತ್ತೆ ರಾಹು ಕೇತು ಶನಿ ಸಿದ್ದರಾಮಯ್ಯ ಅವರನ್ನು ಕಾಡುತ್ತಿದ್ದಾರಾ? ಈ ರೀತಿಯ ಅನುಮಾನಗಳಿಗೆ ಕಾರಣವಾಗಿರೋದು‌ ಖುದ್ದು ಸಿದು ನಡೆ. ಪ್ರಚಾರವನ್ನೇ ಮಾಡಲ್ಲ ಅಂದಿದ್ದ ಸಿದ್ದರಾಮಯ್ಯ ಬ್ಯಾಕ್ ಟೂ ಬ್ಯಾಕ್ ವರುಣಾ ಅಖಾಡದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಸ್ಟಾರ್ ನಟ, ನಟಿಯರನ್ನು ಕರೆದು ತಂದು ರೋಡ್ ಶೋ ನಡೆಸುತ್ತಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ