ಜಗದೀಶ್​ ಶೆಟ್ಟರ ಮನೆಗೆ ಪರಮೇಶ್ವರ್​, ದಿನೇಶ್ ಗುಂಡೂರಾವ್ ಭೇಟಿ: ಸೌಹಾರ್ದ ಭೇಟಿ ಎಂದ ಮಾಜಿ ಸಿಎಂ

|

Updated on: May 16, 2023 | 2:59 PM

ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​​ ಅವರ ಸದಾಶಿವನಗರ ನಿವಾಸಕ್ಕೆ ಇಂದು (ಮೇ.16) ಹೈಕಮಾಂಡ್​​​ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ದಿನೇಶ್ ಗುಂಡೂರಾವ್ ಭೇಟಿ ನೀಡಿ ಧನ್ಯವಾದ ಸಮರ್ಪಿಸಿದ್ದಾರೆ. ಈ ವೇಳೆ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.

ಜಗದೀಶ್​ ಶೆಟ್ಟರ ಮನೆಗೆ ಪರಮೇಶ್ವರ್​, ದಿನೇಶ್ ಗುಂಡೂರಾವ್ ಭೇಟಿ: ಸೌಹಾರ್ದ ಭೇಟಿ ಎಂದ ಮಾಜಿ ಸಿಎಂ
ಜಗದೀಶ್​ ಶೆಟ್ಟರ್​ ಮನೆಗೆ ದಿನೇಶ್​ ಗುಂಡೂರಾವ್​, ಜಿ ಪರಮೇಶ್ವರ ಭೇಟಿ
Follow us on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​​ (Jagadish Shettar) ಅವರ ಸದಾಶಿವನಗರ ನಿವಾಸಕ್ಕೆ ಇಂದು (ಮೇ.16) ಹೈಕಮಾಂಡ್​​​ ಸೂಚನೆ ಮೇರೆಗೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ (G Parmeshwara), ಕಾಂಗ್ರೆಸ್​ ನಾಯಕ ದಿನೇಶ್ ಗುಂಡೂರಾವ್ (Dinesh Gundurao) ಭೇಟಿ ನೀಡಿ ಧನ್ಯವಾದ ಸಮರ್ಪಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್​ (Congress) ನಾಯಕ ಜಗದೀಶ್​ ಶೆಟ್ಟರ್​ ಸೌಹಾರ್ದಯುತವಾಗಿ ಕಾಂಗ್ರೆಸ್​​ ನಾಯಕರು ಭೇಟಿ ಮಾಡಿದ್ದರು. ಕಾಂಗ್ರೆಸ್ ಸೇರಿದ ಮೇಲೆ 15 ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದೆ ಎಂದು ಸ್ಪಷ್ಟನೆ ನೀಡಿದರು.

ಸದಾಶಿವನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲಿಂಗಾಯತರನ್ನು (Lingayat) ಅವಮಾನಿಸಿದ್ದಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಬಿಎಸ್​ ಯಡಿಯೂರಪ್ಪ ಅವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು ಅಂತಾ ಹೇಳಬೇಕಲ್ವಾ? ಬಿಎಸ್​ ಯಡಿಯೂರಪ್ಪ ಕಣ್ಣೀರು ಹಾಕಿದರು. ನನಗೆ ಟಿಕೆಟ್ ಕೊಡದೆ ಅವಮಾನಿಸಿದ್ದರು. ಇದೆಲ್ಲವೂ ಬಿಜೆಪಿ ಹೀನಾಯವಾಗಿ ಸೋಲಲು ಕಾರಣವಾಯಿತು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯದಲ್ಲಿ ಅಧಿಕಾರಕ್ಕಾಗಿ ಸಹಜವಾಗಿ ಗಲಾಟೆ ನಡೆಯುತ್ತೆ

ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿರುವ ವಿಚಾರವಾಗಿ ಮಾತನಾಡಿದ ಅವರು ಈ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನಿಸುತ್ತೆ. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಸಹಜವಾಗಿ ಗಲಾಟೆ ನಡೆಯುತ್ತೆ. ಪೂರ್ಣ ಬಹುಮತ ಬಂದಿದೆ, ಉತ್ತಮ ಆಡಳಿತ ಕೊಡಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ಒಳ್ಳೆ ನಾಯಕರು. ಯಾವುದೇ ಗೊಂದಲವಿಲ್ಲದೆ ನಾಯಕರು ಬಗೆಹರಿಸಿಕೊಳ್ಳಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಕೆಲವು ನಿಖರ ಕಾರಣಗಳನ್ನು ಹುಡುಕಿದ ಬಿಜೆಪಿ: ಅವು ಇಲ್ಲಿವೆ

ಆದಷ್ಟು ಬೇಗ ಸಿಎಂ ಯಾರು ಆಗುತ್ತಾರೆ ಅಂತ ಬಗೆ ಹರಿಯಬೇಕು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಇಬ್ಬರು ಅರ್ಹರು ಇದ್ದಾರೆ. ಪಾರ್ಟಿ ದೃಷ್ಟಿಯಿಂದ ಇಬ್ಬರು ಕುಳಿತು ಮಾತಾಡಿ ಅವರೇ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು. ಇದು ಪಾರ್ಟಿ ಹಾಗೂ ದೇಶಕ್ಕೆ ಒಳ್ಳೆಯದು ಎಂದು ಸಲಹೆ ನೀಡಿದರು.

ಇನ್ನು ಬಿಎಲ್​ ಸಂತೋಷ್ ಪಕ್ಷವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ನನ್ನನ್ನು ಟಾರ್ಗೆಟ್ ಮಾಡಿದ್ದರು. ನಮ್ಮ ಕಡೆ ಬಂದವರನ್ನು ಜಗದೀಶ್​ ಶೆಟ್ಟರ್ ಅವರನ್ನು ಸೋಲಿಸಿ ಅಂತ ಪ್ರಚಾರ ಮಾಡಿದರು. ನನ್ನನ್ನು ಟಾರ್ಗೆಟ್ ಮಾಡಿ ಬಿಜೆಪಿಯವರು ಸೋಲಿಸಿದರು. ಬಿಜೆಪಿಯ ಇವತ್ತಿನ ಪರಿಸ್ಥಿತಿಗೆ ಕೆಲವರ ದುರಹಂಕಾರವೆ ಕಾರಣ. ಅನೇಕರಿಗೆ ದುರಹಂಕಾರ ಬಂದಿದೆ, ಹೀಗಾಗಿ ಪಕ್ಷಕ್ಕೆ ಈ ಗತಿ ಬಂದಿದೆ ಎಂದು ಬಿಎಲ್​ ಸಂತೋಷ್​ ವಿರುದ್ಧ ವಾಗ್ದಾಳಿ ಮಾಡಿದರು.

ಲಿಂಗಾಯತರು ಕಾಂಗ್ರೆಸ್ ಕಡೆ ಬಂದಿದ್ದಾರೆ. ಇನ್ಮುಂದೆಯೂ ಕಾಂಗ್ರೆಸ್​ ಪಕ್ಷಕ್ಕೆ ಬೆಂಬಲ ಮುಂದುವರಿಯುತ್ತೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರ್ಯಾಯ ಶಕ್ತಿ ರಚನೆ ಆಗುತ್ತಿದೆ. ಅದರ ಮುಂದಾಳತ್ವ ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ನಿಮಗೆ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನ

ಇನ್ನು ದಿನೇಶ್​ ಗುಂಡೂರಾವ್​ ಮತ್ತು ಡಾ. ಜಿ ಪರಮೇಶ್ವರ ಭೇಟಿ ವೇಳೆ ಮಹತ್ವದ ಮಹತ್ವ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್​ಗೆ ಬಂದ ಮೇಲೆ ಸಕ್ರಿಯರಾಗಿ ಕೆಲಸ ಮಾಡಿದ್ದೀರಿ. 136 ಸ್ಥಾನ ಬರುವಲ್ಲಿ ನಿಮ್ಮ ಪಾತ್ರನು ಇದೆ. ಮುಂದಿನ ಲೋಕಸಭಾ ಎಲೆಕ್ಷನ್ ಹಿನ್ನೆಲೆ ಸಹಕಾರ ಮುಂದುವರೆಯಲಿ. ನಿಮಗೆ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಉನ್ನತ ಸ್ಥಾನ ನೀಡುವ ಇಚ್ಛೆ ಹೈಕಮಾಂಡ್​​ಗೆ ಇದೆ. ಇನ್ಮುಂದೆ ಕಾಂಗ್ರೆಸ್ ಗುರಿ ಲೋಕಸಭಾ ಚುನಾವಣೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಇಬ್ಬರು ನಾಯಕರು ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ