Amit Shah in Karnataka: ಕರ್ನಾಟಕದಲ್ಲಿ ಅಮಿತ್ ಶಾ ಇಂದು, ನಾಳೆ ಪ್ರವಾಸ; ಮಂಡ್ಯದಲ್ಲಿ ಸಾರ್ವಜನಿಕ ಸಮಾವೇಶ, ಬಿಜೆಪಿಯಲ್ಲಿ ಚುನಾವಣೆ ಸಿದ್ಧತೆ ಚುರುಕು

TV9 Digital Desk

| Edited By: TV9 SEO

Updated on:Dec 30, 2022 | 9:46 AM

Karnataka Politics: ಮುಂದಿನ ವಿಧಾನಸಭೆ ಚುನಾವಣೆಯ ಸಿದ್ಧತೆಯನ್ನು ಬಿಜೆಪಿಯು ಈಗಾಗಲೇ ಚುರುಕುಗೊಳಿಸಿದ್ದು, ಪ್ರವಾಸದ ಮೂಲಕ ಬಿಜೆಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಲು ಅಮಿತ್ ಶಾ ಮುಂದಾಗಿದ್ದಾರೆ.

Amit Shah in Karnataka: ಕರ್ನಾಟಕದಲ್ಲಿ ಅಮಿತ್ ಶಾ ಇಂದು, ನಾಳೆ ಪ್ರವಾಸ; ಮಂಡ್ಯದಲ್ಲಿ ಸಾರ್ವಜನಿಕ ಸಮಾವೇಶ, ಬಿಜೆಪಿಯಲ್ಲಿ ಚುನಾವಣೆ ಸಿದ್ಧತೆ ಚುರುಕು
ಅಮಿತ್ ಶಾ (ಸಂಗ್ರಹ ಚಿತ್ರ)

ಬೆಂಗಳೂರು / ಮಂಡ್ಯ: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಚುನಾವಣಾ ಕಾರ್ಯತಂತ್ರ ನಿಪುಣ (Election Strategist) ಕರ್ನಾಟಕದಲ್ಲಿ ಎರಡು ದಿನ (ಡಿ 30, 31) ಪ್ರವಾಸ ನಡೆಸಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯ ಸಿದ್ಧತೆಯನ್ನು ಬಿಜೆಪಿಯು ಈಗಾಗಲೇ ಚುರುಕುಗೊಳಿಸಿದ್ದು, ಪ್ರವಾಸದ ಮೂಲಕ ಬಿಜೆಪಿ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಲು ಅಮಿತ್ ಶಾ (Amit Shah) ಮುಂದಾಗಿದ್ದಾರೆ. ಇಂದು (ಡಿ 30) ಮಧ್ಯಾಹ್ನ 12.30ಕ್ಕೆ ಅವರು ಮಂಡ್ಯದಲ್ಲಿ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಅವರು ನಾಳೆ (ಡಿ 31) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬಿಎಲ್ 2 ಮತ್ತು ಬೂತ್ ಅಧ್ಯಕ್ಷರಿಗೂ ಮೇಲ್ಪಟ್ಟ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಮಿತ್ ಶಾ ಭೇಟಿ: ಕರ್ನಾಟಕ ರಾಜಕಾರಣದಲ್ಲಿ ಸಂಚಲನ

ಮದ್ದೂರಿನ ಹಾಲು ಉತ್ಪಾದಕ ಕಟ್ಟಡ ಹಾಗೂ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಉದ್ಘಾಟಿಸಿದ ಬಳಿಕ ಮಂಡ್ಯದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಅಮಿತ್ ಶಾ ಭೇಟಿಯ ಭೇಟಿಯು ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಹುಟ್ಟಿಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್​ಗಳು ಸಹ ಅಮಿತ್​ ಶಾ ಮುಂದಿನ ಹೆಜ್ಜೆಯನ್ನು ಕುತೂಹಲದಿಂದ ಗಮನಿಸುತ್ತಿವೆ. ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಬಿಜೆಪಿಗೆ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆ ಗಳಿಸುವುದು ಅನಿವಾರ್ಯ. ಅಮಿತ್ ಶಾ ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಿಯೇ ತೀರುತ್ತೇವೆಂಬ ಶಪಥ ಮಾಡಿದ್ದಾರೆ.

ಈಗಾಗಲೇ ಈ ಸಂಬಂಧ ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಟಾಸ್ಕ್ ನೀಡಿದ್ದಾರೆ. ನೀವು ಸುಮ್ಮನಾದರೂ ನಾನು ಹಳೇ ಮೈಸೂರು ಭಾಗವನ್ನು ಬಿಡುವುದಿಲ್ಲ ಎಂದು ತಾವು ಈ ವಿಚಾರದಲ್ಲಿ ಎಷ್ಟರಮಟ್ಟಿಗೆ ಗಂಭೀರವಾಗಿದ್ದೇನೆ ಎಂಬುದನ್ನು ತೋರಿಸಿದ್ದಾರೆ. ಈಗಾಗಲೇ ಹತ್ತಾರು ರಾಜ್ಯಗಳಲ್ಲಿ ಜಿದ್ದಿಗೆ ಬಿದ್ದು ಅಖಾಡಕ್ಕೆ ಇಳಿದು ಕಮಲ ಅರಳಿಸಿರುವ ಅಮಿತ್ ಶಾ ಅವರಿಗೆ ‘ಚುನಾವಣಾ ಚಾಣಕ್ಯ’ (Election Specialist) ಎಂದೇ ಖ್ಯಾತರಾಗಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಕನಿಷ್ಠ 25 ಸ್ಥಾನ ಗೆಲ್ಲಬೇಕೆಂದು ಅವರು ಶಪಥ ಮಾಡಿದ್ದು, ಮಂಡ್ಯದ 7 ವಿಧಾನಸಭಾ ಕ್ಷೇತ್ರದಲ್ಲಿಯೂ ಪ್ರಬಲ ಸ್ಪರ್ಧಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಈಗಾಗಲೇ ಅಭ್ಯರ್ಥಿಗಳು ಬೂತ್ ಮಟ್ಟದಲ್ಲಿ ಸಂಘಟನೆ ಚುರುಕುಗೊಳಿಸಿದ್ದು, ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ತಂತ್ರ ನಡೆಸಿದ್ದಾರೆ.

ಈವರೆಗೆ ಬಿಜೆಪಿಯ ಹಿಡಿತಕ್ಕೆ ಸಿಕ್ಕದ ಮಂಡ್ಯದಲ್ಲಿ ಬಹು ಹಿಂದಿನಿಂದಲೇ ಬಿಜೆಪಿ ತನ್ನ ಕಾರ್ಯತಂತ್ರವನ್ನು ಚುರುಕುಗೊಳಿಸಿದೆ. ಹಿಂದುತ್ವ, ಹಿಜಾಬ್, ಆಜಾನ್ ವಿಚಾರಗಳು ಈಗಾಗಲೇ ಜಿಲ್ಲೆಯಲ್ಲಿ ಸದ್ದು ಮಾಡಿವೆ. ಇಂದು ನಡೆಯಲಿರುವ ಸಮಾವೇಶದಲ್ಲಿ ಅಮಿತ್ ಶಾ ನೀಡುವ ಸಂದೇಶದ ಬಗ್ಗೆ ಎಲ್ಲರ ಗಮನ ನೆಟ್ಟಿದೆ. ಈ ಕಾರ್ಯಕ್ರಮವು ಚುನಾವಣೆಯ ದಿಕ್ಸೂಚಿಯಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸಂಶೋಧನಾ ಕೇಂದ್ರಕ್ಕೆ ಭೂಮಿಪೂಜೆ

ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಲಿರುವ ಅವರು, ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದ ಬೆಟ್ಟದ ಸಮೀಪ 30 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಕೇಂದ್ರೀಯ ಪೊಲೀಸ್ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ಬ್ಯೂರೊ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ. ನಂತರ ಖಾಸಗಿ ಶಾಲೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಮಾರಂಭಕ್ಕೆ ಕೇವಲ ಅಧಿಕಾರಿಗಳ ಪ್ರವೇಶಕ್ಕೆ ಮಾತ್ರವೇ ಅವಕಾಶವಿದ್ದು, ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಆವತಿ ಸೇರಿದಂತೆ ದೇವನಹಳ್ಳಿ ಸುತ್ತಮುತ್ತ ರಾಜ್ಯ ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳ ಕಣ್ಗಾವಲು ಹೆಚ್ಚಿಸಲಾಗಿದೆ.

ಇದನ್ನೂ ಓದಿ: ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ, ಮಂಡ್ಯ ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada