AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hosadurga Election 2023 Winner: ಹೊಸದುರ್ಗದಲ್ಲಿ ಕಾಂಗ್ರೆಸ್​ಗೆ ಗೆಲುವು, ಬಿಜೆಪಿಗೆ ಸೋಲು

ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಬಹಿರಂಗಗೊಂಡಿದ್ದು, ಹೊಸದುರ್ಗ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಜೆಡಿಎಸ್ ಐದನೇ ಸ್ಥಾನಕ್ಕೆ ಕುಸಿದಿದೆ.

Hosadurga Election 2023 Winner: ಹೊಸದುರ್ಗದಲ್ಲಿ ಕಾಂಗ್ರೆಸ್​ಗೆ ಗೆಲುವು, ಬಿಜೆಪಿಗೆ ಸೋಲು
ಹೊಸದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಜೆ ಗೋವಿಂದಪ್ಪ ಅವರಿಗೆ ಗೆಲುವು
Rakesh Nayak Manchi
|

Updated on: May 13, 2023 | 8:21 PM

Share

Hosadurga Assembly Election Results 2023, ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಬಹಿರಂಗಗೊಂಡಿದ್ದು, ಹೊಸದುರ್ಗ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಜೆಡಿಎಸ್ ಐದನೇ ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್​ನ ಬಿಜಿ ಗೋವಿಂದಪ್ಪ (BG Govindappa) ಅವರು ಬಿಜೆಪಿಯ ಎಸ್ ಲಿಂಗಮೂರ್ತಿ (S Lingamurthy) ಅವರ ವಿರುದ್ಧ 32,816 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಗೋವಿಂದಪ್ಪ ಅವರು ಶೇ 48.4ರಷ್ಟು ಮತಗಳನ್ನು ಪಡೆದಿದ್ದು, ಲಿಂಗಮೂರ್ತಿ ಅವರು ಶೇ 28.8ರಷ್ಟು ಮತಗಳನ್ನು ಪಡೆದಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸಿದ ಟಿ ಮಂಜನಾಥ ಮತ್ತು ಗೂಳಿಹಟ್ಟಿ ಡಿ ಶೇಖರ್ ಕ್ರಮವಾಗಿ ಶೇ. 12.4 ಮತ್ತು ಶೇ. 6.2ರಷ್ಟು ಮತಗಳನ್ನು ಪಡೆದಿದ್ದಾರೆ. ಇನ್ನು, ಜೆಡಿಎಸ್ ಅಭ್ಯರ್ಥಿ ಎಂ ತಿಪ್ಪೇಸ್ವಾಮಿ ಅವರು ಶೇ. 1.1ರಷ್ಟು ಮತಗಳನ್ನು ಪಡೆದಿದ್ದಾರೆ.

ರಾಷ್ಟ್ರ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅಂತವರಿಗೆ ಸೋಲಿನ ರುಚಿ ಉಣಿಸಿದ ಕ್ಷೇತ್ರವಿದು. ಪಕ್ಷೇತರರಿಗೆ ಮಣೆ ಹಾಕಿದ ಖ್ಯಾತಿಯ ಈ ಕ್ಷೇತ್ರದಲ್ಲಿ ಒಂದು ಸಲ ಗೆದ್ದವರು ಮತ್ತೆ ಎರಡನೇ ಸಲ ಶಾಸಕರಾಗಿದ್ದು ವಿರಳ. ಲಿಂಗಾಯತರು, ದೇವಾಂಗ, ಕುರುಬ, ಬೋವಿ ಸೇರಿದಂತೆ ಇತರೆ ಸಮುದಾಯಗಳು ನಿರ್ಣಾಯಕವಾಗಿರುವ ಕ್ಷೇತ್ರವೂ ಇದಾಗಿದೆ.

ಇದನ್ನೂ ಓದಿ: Holalkere Election 2023 Winner: ಹೊಳಲ್ಕೆರೆಯಲ್ಲಿ ಅರಳಿದ ಕಮಲ, ಎಂ ಚಂದ್ರಪ್ಪಗೆ ಗೆಲುವು, ಆಂಜನೇಯಗೆ ಸೋಲು

1999ರಲ್ಲಿ ಪಕ್ಷೇತರರಾಗಿ ಗೆದ್ದಿದ್ದ (ಕುರುಬ ಸಮುದಾಯದ) ಬಿ.ಜಿ.ಗೋವಿಂದಪ್ಪ 2004ರಲ್ಲಿ ಕಾಂಗ್ರೆಸ್​ನಿಂದ ಗೆಲುವು ಸಾಧಿಸಿದ್ದರು. 2008ರಲ್ಲಿ (ಬೋವಿ ಸಮುದಾಯ) ಗೂಳಿಹಟ್ಟಿ ಡಿ.ಶೇಖರ್ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಕೂಡ ಆಗಿದ್ದರು. ಬಳಿಕ ಬಿಜೆಪಿ ವಿರುದ್ಧ ಬಂಡೆದಿದ್ದ ಗೂಳಿಹಟ್ಟಿ ಶೇಖರ್ 2013ರಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಆದರೆ, ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಬಿ.ಜಿ.ಗೋವಿಂದಪ್ಪ ಗೆಲುವು ಸಾಧಿಸಿದ್ದರು. 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಗೂಳಿಹಟ್ಟಿ ಶೇಖರ್ ಗೆಲುವು ಸಾಧಿಸಿದ್ದರು.

ಆದರೆ ಪ್ರಸಕ್ತ ಚುನಾವಣೆಯಲ್ಲಿ ಗೂಳಿಹಟ್ಟಿ ಶೇಖರ್​ ಬದಲು ಕ್ಷೇತ್ರದಲ್ಲಿ ಲಿಂಗಮೂರ್ತಿಗೆ ಬಿಜೆಪಿ ಮಣೆಹಾಕಿತ್ತು. ಕಾಂಗ್ರೆಸ್​ನಿಂದ ಬಿ.ಜಿ.ಗೋವಿಂದಪ್ಪ, ಜೆಡಿಎಸ್ ಪಕ್ಷದಿಂದ ಎಂ.ತಿಪ್ಪೇಸ್ವಾಮಿ, ಪಕ್ಷೇತರ ಅಬ್ಯರ್ಥಿಯಾಗಿ ಮಂಜುನಾಥ್ ಕಣಕ್ಕಿಳಿದಿದ್ದರು. ಪಕ್ಷೇತರರನ್ನು ಗೆಲ್ಲಿಸುವ ಹಿನ್ನೆಲೆಯಿರುವ ಕ್ಷೇತ್ರದಲ್ಲಿ ಮಂಜುನಾಥ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ