ನನ್ನನ್ನು ಯಾವ ಮುಸ್ಲಿಮರೂ ಸಾಯಿಸಲಿಲ್ಲ: ಹೆಚ್​ಡಿ ದೇವೇಗೌಡ

ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಹೆಚ್​.ಡಿ.ದೇವೇಗೌಡ ಅವರು, ಮುಸ್ಲಿಂ ಮೀಸಲಾತಿ ಕುರಿತಾಗಿ ಹಾಗೂ ಮಂಡ್ಯದಲ್ಲಿ ಜೆಡಿಎಸ್ ಮಾಡಿದ ಅಭಿವೃದ್ಧಿ ಕುರಿತಾಗಿ ಮಾತನಾಡಿದರು.

ನನ್ನನ್ನು ಯಾವ ಮುಸ್ಲಿಮರೂ ಸಾಯಿಸಲಿಲ್ಲ: ಹೆಚ್​ಡಿ ದೇವೇಗೌಡ
ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಹೆಚ್​ಡಿ ದೇವೇಗೌಡ ಭಾಷಣ
Rakesh Nayak Manchi

Updated on: May 05, 2023 | 3:43 PM

ಮಂಡ್ಯ: ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ (Muslim Reservation) ನೀಡಿದ್ದು ನಾನೇ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ (HD Deve Gowda) ಹೇಳಿದರು. ಜಿಲ್ಲೆಯ ಕೆ.ಆರ್​.ಪೇಟೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆಗೆ ನೀರು ತಂದು ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದರು. ಅಲ್ಲದೆ, ಜೆಡಿಎಸ್ (JDS)​ ಮುಗಿದು ಹೋಗಿದೆ ಅಂತಾ ಹೇಳಿದವರಿಗೂ ಟಾಂಗ್ ಕೊಟ್ಟರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಮಂಡ್ಯದ ಎಲ್ಲಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿವುಸುವಂತೆ ಮನವಿ ಮಾಡಿದರು.

ಕಾಶ್ಮೀರಕ್ಕೆ ಹೋಗಬಾರದು ಎಂದು ಹೇಳಿದ್ದರೂ ನಾನು 3 ಬಾರಿ ಹೋಗಿದ್ದೆ. ಆದರೆ ನನ್ನನ್ನು ಯಾವ ಮುಸ್ಲಿಮರೂ ಸಾಯಿಸಲಿಲ್ಲ. ಮುಸ್ಲಿಂ ಬಾಂಧವರು ಯಾವಾಗಲೂ ನನ್ನ ಜೊತೆಯೇ ಇದ್ದಾರೆ ಎಂದು ದೇವೇಗೌಡ ಹೇಳಿದರು. ಬಿಜೆಪಿಯ ಕೆಸಿ ನಾರಾಯಣಗೌಡ ಅವರಿಗೆ ವಲಸೆ ರಾಜಕಾರಣಿ ಎಂದು ಟಾಂಗ್ ಕೊಟ್ಟ ದಳಪತಿ, ಜೆಡಿಎಸ್ ಮುಗಿದೆ ಹೋಯ್ತು ಅಂತ ಇತ್ತೀಚೆಗೆ ಒಬ್ಬರು ಹೇಳುತ್ತಿದ್ದರು. ಅವರ ಮಾತನ್ನ ಕೇಳಿದರೆ ನನ್ನ ರಕ್ತ ಕುದಿಯುತ್ತದೆ. ಏನು ಜೆಡಿಎಸ್ ಮುಗಿದೆ ಹೋಯಿತೇ? ನನ್ನ ಮಂಡ್ಯ ಜಿಲ್ಲೆಯಲ್ಲಿ 7 ಸ್ಥಾನದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲೇಬೇಕು ಕುಮಾರಣ್ಣ ಮುಖ್ಯಮಂತ್ರಿ ಆಗಲೇ ಬೇಕು ಎಂದರು.

ಇದನ್ನೂ ಓದಿ: ಕಾಂಗ್ರೆಸ್​ನ ಗ್ಯಾರಂಟಿ ಘೋಷಣೆಗಳನ್ನು ಕುಮಾರಸ್ವಾಮಿ ಈಗಾಗಲೇ ಮಾಡಿ ತೋರಿಸಿದ್ದಾರೆ: ಹೆಚ್​ಡಿ ದೇವೇಗೌಡ

ವೇದಿಕೆ ಮೇಲೆ ಕುಮಾರಸ್ವಾಮಿ ಯಾಕೆ ಮುಖ್ಯಮಂತ್ರಿ ಆಗಬೇಕೆಂದು ವಿವರಣೆ ನೀಡಿದ ದೇವೆಗೌಡರು, ಹಾಸನಕ್ಕೆ ಸ್ವರೂಪ್ ಗೌಡಗೆ ಟಿಕೆಟ್ ನೀಡಿದ ವಿಚಾರವನ್ನ ಸಹ ಪ್ರಸ್ಥಾಪಿಸಿದರು. ಇದೇ ವೇಳೆ, ಜೆಡಿಎಸ್ ಕಾರ್ಯಕರ್ತರಿಗೆ ಕೈ ಮುಗಿದು ದೇವೆಗೌಡರು, ಅಭ್ಯರ್ಥಿ ಹೆಚ್.ಟಿ ಮಂಜು ಪರ ಮತ ಹಾಕುವಂತೆ ಮನವಿ ಮಾಡಿದರು.

ತಮ್ಮ ಹಳೆಯ ನೆನಪುಗಳನ್ನ ಮೆಲುಕು ಹಾಕಿದ ಹೆಚ್.ಡಿ ದೇವೆಗೌಡ

ತಮ್ಮ ಹಳೆಯ ನೆನಪುಗಳನ್ನ ಮೆಲುಕು ಹಾಕಿದ ಹೆಚ್.ಡಿ ದೇವೆಗೌಡ, 1982 ರಲ್ಲಿ ಕೆ.ಆರ್ ಪೇಟೆಯ ಕೆರೆ ಹೊಡೆದು ಹೋಗಿತ್ತು. ಬೆಳೆದ ಫಸಲುಗಳು ಮಣ್ಣು ಪಾಲಾಗಿ ಹೋಯ್ತು. ರಾತ್ರಿ 8 ಗಂಟೆಗೆ ದೆಹಲಿಯಿಂದ ಓಡೋಡಿ ಬಂದೆ. ಕೆ.ಆರ್ ಪೇಟೆಯಲ್ಲಿ ಒಂದು ಬ್ರಿಡ್ಜ್ ಕಟ್ಟಲು ನಾನೇ ಬೇಕಾಯ್ತು ಎಂದು ಹೇಳುವ ಮೂಲಕ ಹೆಸರು ಪ್ರಸ್ಥಾಪಿಸಿದೆ ಬಿ.ಎಸ್ ಯಡಿಯೂರಪ್ಪ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೆ ಆರ್ ಪೇಟೆಯ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಹೆಚ್.ಡಿ ದೇವೆಗೌಡರ ಅಬ್ಬರದ ಭಾಷಣ ಕೇಳಿದ ಕಾರ್ಯಕರ್ತರು ಫುಲ್ ಖಷ್ ಆಗಿದ್ದಾರೆ. ದಳಪತಿಯ ಪ್ರತಿ ಮಾತಿಗೂ ಶಿಳ್ಳೆ ಚಪ್ಪಾಳೆ ಹೊಡೆದ ಕಾರ್ಯಕರ್ತರು ಕುಣಿದಾಡಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us