ಲಿಂಗಾಯತರನ್ನು ಹಿಡಿಟ್ಟುಕೊಳ್ಳಲು ರಣತಂತ್ರ, ಯಡಿಯೂರಪ್ಪರನ್ನ ಮುಂದೆ ಬಿಟ್ಟ ಬಿಜೆಪಿ

|

Updated on: Apr 19, 2023 | 2:57 PM

ಲಿಂಗಾಯತ ಸಮುದಾಯದ ಪ್ರಮುಖರಾದ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಲಿಂಗಾಯತ ವೋಟ್ ಬ್ಯಾಂಕ್ ಡ್ಯಾಮೇಜ್ ತಡೆಗೆ ಬಿಜೆಪಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಮುಂದೆ ಬಿಟ್ಟಿದೆ.

ಲಿಂಗಾಯತರನ್ನು ಹಿಡಿಟ್ಟುಕೊಳ್ಳಲು ರಣತಂತ್ರ, ಯಡಿಯೂರಪ್ಪರನ್ನ ಮುಂದೆ ಬಿಟ್ಟ ಬಿಜೆಪಿ
ಬಿ.ಎಸ್‌.ಯಡಿಯೂರಪ್ಪ
Follow us on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಹಿನ್ನೆಲೆಯಲ್ಲಿ ಲಿಂಗಾಯತ ಮತಗಳಿಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಡ್ಯಾಮೇಜ್‌ ಕಂಟ್ರೋಲ್‌ ಗೆ ಇಳಿದಿವೆ. ಲಿಂಗಾಯತ ಸಮುದಾಯವನ್ನು ಸೆಳೆಯಲು ನಿರಂತರವಾಗಿ ಕಾಂಗ್ರೆಸ್‌ ಪ್ರಯತ್ನಿಸುತ್ತಲೇ ಬಂದಿತ್ತು. ಇದೀಗ ಶೆಟ್ಟರ್‌ ಹಾಗೂ ಸವದಿ ಸೇರ್ಪಡೆಯನ್ನು ಬಳಸಿಕೊಂಡು ಸಮುದಾಯವನ್ನು ಓಲೈಸುವ ಮೂಲಕ ಹಿಂದೆ ಆಗಿದ್ದ ಡ್ಯಾಮೇಜ್‌ ಸರಿಪಡಿಸಿಕೊಳ್ಳಲು ಸರ್ಕಸ್‌ ನಡೆಸುತ್ತಿದೆ. ಮತ್ತೊಂದೆಡೆ, ಶೆಟ್ಟರ್‌ ಹಾಗೂ ಸವದಿ ಅವರು ಪಕ್ಷ ತೊರೆದಿರುವುದರಿಂದ ಉತ್ತರ ಕರ್ನಾಟಕ ಅದರಲ್ಲೂ ವಿಶೇಷವಾಗಿ ಕಿತ್ತೂರು ಕರ್ನಾಟಕದ ಭಾಗದಲ್ಲಿ ಬಿಜೆಪಿಗೆ ನಾಯಕರ ಕೊರತೆ ಎದುರಾಗಬಹುದಾದ ಭೀತಿ ಎದುರಾಗಿದೆ. ಈ ಕೊರತೆಯನ್ನು ನೀಗಿಸಿಕೊಳ್ಳುವ ಮೂಲಕ ಲಿಂಗಾಯತರನ್ನು ಪಕ್ಷದಲ್ಲಿ ಬಲವಾಗಿ ಹಿಡಿದಿಡಲು ಬಿಜೆಪಿ ಕೂಡ ಪ್ರಯತ್ನ ನಡೆಸುತ್ತಿದೆ.

ಕರ್ನಾಟಕದ ದೊಡ್ಡ ಸಮುದಾಯವಾಗಿರುವ ವೀರಶೈವ ಲಿಂಗಾಯತ ಮತ ಬುಟ್ಟಿಯನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ರಣತಂತ್ರ ರೂಪಿಸಿದೆ. ಆಡಳಿತಾರೂಢ ಬಿಜೆಪಿ ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕಿತ್ತೂರು ಕರ್ನಾಟಕ ಭಾಗದಲ್ಲಿ ಮುಂದೆ ಬಿಟ್ಟು ಲಿಂಗಾಯತ ಸಮುದಾಯದ ಬೆಂಬಲ ಮುಂದುವರೆಸುವಂತೆ ನೋಡಿಕೊಳ್ಳುವ ತಂತ್ರ ಹೆಣೆದಿದೆ. ಇದಕ್ಕೆ ಪೂರಕವೆಂಬಂತೆ ಯಡಿಯೂರಪ್ಪ ನಿವಾಸದಲ್ಲೇ ಇಂದು (ಏಪ್ರಿಲ್ 19) ಸಂಜೆ ಲಿಂಗಾಯತ ಮುಖಂಡರ ಸಭೆ ಆಯೋಜನೆ ಮಾಡಲಾಗಿದೆ.

ಯಡಿಯೂರಪ್ಪರನ್ನು ಮುಂದೆ ಬಿಟ್ಟ ಬಿಜೆಪಿ

ಲಿಂಗಾಯತ ಸಮುದಾಯದಲ್ಲಿ ವ್ಯತಿರಿಕ್ತ ಭಾವನೆ ಸೃಷ್ಟಿಯಾಗದಂತೆ ತಡೆಯುವುದು, ಮಠಾಧಿಪತಿಗಳ ಸಂಪರ್ಕದ ಮೂಲಕ ಡ್ಯಾಮೇಜ್ ಕಂಟ್ರೋಲ್, ಲಿಂಗಾಯತ ಸಮುದಾಯದ ಯುವ ವೇದಿಕೆಗಳ ಮೂಲಕ ಡ್ಯಾಮೇಜ್ ಕಂಟ್ರೋಲ್, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಗೆ ಪಕ್ಷ ಸಾಕಷ್ಟು ಕೊಟ್ಟಿದೆ ಎಂದು ಸಮುದಾಯದೊಳಗೆ ಬಿಂಬಿಸುವುದು, ಪಕ್ಷದಿಂದ ಇಬ್ಬರಿಗೂ ಯಾವುದೇ ಅನ್ಯಾಯ ಆಗಿಲ್ಲ ಎಂದು ಸಮುದಾಯದ ಮುಖಂಡರಿಂದಲೇ ಹೇಳಿಸುವುದು ಸೇರಿದಂತೆ ಹಲವು ಈ ರೀತಿಯ ವಿಚಾರಗಳ ಬಗ್ಗೆ ಈಗಾಗಲೇ ಬಿಜೆಪಿ ಯೋಜನೆ ರೂಪಿಸಿದ್ದು, ಮೊದಲ ಹಂತವಾಗಿ ಇಂದು ನಡೆಯುವ ಸಭೆಯಲ್ಲಿ ಈ ಅಂಶಗಳ ಚರ್ಚೆ ಮಾಡಲು ಯಡಿಯೂರಪ್ಪನವರಿಗೆ ಹೈಕಮಾಂಡ್​ ಸೂಚನೆ ನೀಡಿದೆ ಎನ್ನಲಾಗಿದೆ.

ಈಗಾಗಲೇ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಿದ್ದು, ಈ ಮೂಲಕ ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಿಲ್ಲ ಎನ್ನುವ ಸಂದೇಶ ರವಾನಿಸಿದೆ.

ಕಾಂಗ್ರೆಸ್‌ ಪಕ್ಷದಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿನ ಲಿಂಗಾಯತ ನಾಯಕತ್ವದ ಕೊರತೆ ಇತ್ತು. ಎಂ.ಬಿ.ಪಾಟೀಲ್‌ ಅವರೊಬ್ಬರೇ ಮುಂಚೂಣಿಯಲ್ಲಿದ್ದರು. ಇನ್ನುಳಿದಂತೆ ವಿನಯ್‌ ಕುಲಕರ್ಣಿ ಮೊದಲಾದವರಿದ್ದಾರೆ. ಆದ್ರೆ, ಕಳೆದ ಸಿದ್ದರಾಮಯ್ಯನವರ ಅವಧಿಯಲ್ಲಿ ವೀರಶೈವ ಹಾಗೂ ಲಿಂಗಾಯತ ಎನ್ನುವ ಬೇರೆ ಧರ್ಮದ ವಿಚಾರ ಕಾಂಗ್ರೆಸ್​ಗೆ ಭಾರೀ ದೊಡ್ಡ ಹೊಡೆತ ಕೊಟ್ಟಿತ್ತು. ಅದನ್ನು ಶೆಟ್ಟರ್​ ಹಾಗೂ ಸವದಿ ಮೂಲಕ ಕಂಟ್ರೋಲ್​ಗೆ ಮುಂದಾಗಿದೆ. ಅಲ್ಲದೇ ಶೆಟ್ಟರ್‌ ಮತ್ತು ಸವದಿ ಕಾಂಗ್ರೆಸ್ಸಿನ ಲಿಂಗಾಯತ ನಾಯಕತ್ವಕ್ಕೆ ಶಕ್ತಿ ಬಂದಂತಾಗಿದೆ. ಇದು ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಈ ಕಾರಣಕ್ಕಾಗಿಯೇ ಆಡಳಿತಾರೂಢ ಬಿಜೆಪಿ ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕಿತ್ತೂರು ಕರ್ನಾಟಕ ಭಾಗದಲ್ಲಿ ಮುಂದೆ ಬಿಟ್ಟು ಲಿಂಗಾಯತ ಸಮುದಾಯದ ಬೆಂಬಲ ಮುಂದುವರೆಸುವಂತೆ ನೋಡಿಕೊಳ್ಳುವ ತಂತ್ರ ರೂಪಿಸುತ್ತಿದೆ. ಯಡಿಯೂರಪ್ಪ ಅವರಿಗೆ ಆ ಭಾಗದಲ್ಲಿ ಹಿಡಿತವಿದೆ. ಪ್ರಚಾರದ ವೇಳೆ ಮತ್ತು ರಣತಂತ್ರ ರೂಪಿಸುವಲ್ಲಿ ಯಡಿಯೂರಪ್ಪ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ.

ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕರ್ನಾಟಕ ವಿಧಾನಸಭೆ ಚುನಾವಣೆಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ