Karnataka Elections: ಪದ್ಮನಾಭನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗುರಪ್ಪ ನಾಯ್ಡು ಮನೆ ಮೇಲೆ ಐಟಿ ದಾಳಿ

|

Updated on: Apr 05, 2023 | 9:11 PM

ನಾಳೆಯಿಂದ ಕರ್ನಾಟಕದಲ್ಲಿ ಇಡಿ, ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ನಿನ್ನೆಯಷ್ಟೇ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ಅದರಂತೆ ಇಂದು ಬೆಂಗಳೂರಿನ ಕೈ ಟಿಕೆಟ್ ಆಕಾಂಕ್ಷಿ ಮನೆ ಮೇಲೆ ಐಟಿ ದಾಳಿ ನಡೆದಿದೆ.

Karnataka Elections: ಪದ್ಮನಾಭನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗುರಪ್ಪ ನಾಯ್ಡು ಮನೆ ಮೇಲೆ ಐಟಿ ದಾಳಿ
ಬೆಂಗಳೂರಿನ ಪದ್ಮನಾಭನಗರದ ಕಾಂಗ್ರೆಸ್ ಮುಖಂಡನ ಮನೆ ಮೇಲೆ ಐಟಿ ದಾಳಿ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆಯ ನಡುವೆ ಚುನಾವಣಾ ಅಧಿಕಾರಿಗಳು, ಪೊಲೀಸರು ಮಾತ್ರವಲ್ಲ, ಇದೀಗ ಇಡಿ, ಐಟಿ ಕೂಡ ಎಂಟ್ರಿ ಕೊಟ್ಟಿದೆ. ನಾಳೆಯಿಂದ ಕರ್ನಾಟಕದಲ್ಲಿ ಇಡಿ, ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ನಿನ್ನೆಯಷ್ಟೇ (ಏಪ್ರಿಲ್ 4) ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ (Randeep Singh Surjewala), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು (ಏಪ್ರಿಲ್ 5) ಬೆಳ್ಳಂಬೆಳಗ್ಗೆ ಬೆಂಗಳೂರಿನ ಕಾಂಗ್ರೆಸ್​ ಮುಖಂಡರೊಬ್ಬರ ಮನೆ ಬಾಗಿಲು ತಟ್ಟುವ ಮೂಲಕ ಐಟಿ ಶಾಕ್ (Income Tax Raid) ನೀಡಿದೆ.

ಚುನಾವಣೆ ಸಮಯದಲ್ಲೇ ಬೆಂಗಳೂರು ನಗರದ ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ಕಾಂಗ್ರೆಸ್​ ಮುಖಂಡ ಗುರಪ್ಪನಾಯ್ಡು ಮನೆ ಮೇಲೆ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂರು ವಾಹನಗಳಲ್ಲಿ ಬನಶಂಕರಿ 2ನೇ ಹಂತಕ್ಕೆ ಬಂದ ಐಟಿ ಅಧಿಕಾರಿಗಳು ಗುರಪ್ಪನಾಯ್ಡು ನಿವಾಸ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪರ ಪ್ರಚಾರಕ್ಕಿಳಿದ ಕಿಚ್ಚ ಸುದೀಪ್: ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಡ್ಯಾಮೇಜ್!

ಇದೇ ವೇಳೆಯಲ್ಲಿ ಗುರಪ್ಪ ನಾಯ್ಡು ಜೊತೆ ಗುರುತಿಸಿಕೊಂಡವರ ಮನೆ ಮೇಲೂ ಐಟಿ ರೈಡ್ ಆಗಿದೆ. ಗುರಪ್ಪ ನಾಯ್ಡು ಜೊತೆ ಗುರುತಿಸಿಕೊಂಡಿದ್ದ ಬಸಪ್ಪ ಎಂಬುವರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಸಪ್ಪ ಅವರು ಅವೆನ್ಯೂ ರಸ್ತೆಯಲ್ಲಿ ಜುವೆಲ್ಲರಿ ಶಾಪ್ ಹೊಂದಿದ್ದಾರೆ. ಸದ್ಯ ಗುರಪ್ಪ ಹಾಗೂ ಬಸಪ್ಪ ಮನೆ, ಕಚೇರಿಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿದಿದೆ.

ಕರ್ನಾಟಕದಲ್ಲಿ ಐಟಿ, ಇಡಿ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್

ರಾಜ್ಯ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ನಾಳೆಯಿಂದ ಕರ್ನಾಟಕದಲ್ಲಿ ಇ.ಡಿ, ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ನಿನ್ನೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದರು. ಶಾಸಕರು, ಎಂಎಲ್​ಸಿಗಳು ಸೇರಿದಂತೆ ಬಿಜೆಪಿಯ ಹಲವರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಿಂದ ಆ ಪಕ್ಷಕ್ಕೆ ಸೋಲುವ ಭೀತಿ ಎದುರಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಶಸ್ತ್ರಾಗಾರದಲ್ಲಿ ಅಂತಿಮ ಆಯುಧಗಳನ್ನು ಬಳಸಲು ನಿರ್ಧರಿಸಿದ್ದಾರೆ. ಆದರೆ ಅದು ಕೂಡ ವಿಫಲಗೊಳ್ಳಲಿದೆ ಎಂದು ಹೇಳಿದ್ದರು.

ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಅಭ್ಯರ್ಥಿಗಳು, ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ರಾಜ್ಯಾದ್ಯಂತ ದಾಳಿ ನಡೆಸಲು ನೂರಾರು ಐಟಿ ಮತ್ತು ಇಡಿ ಅಧಿಕಾರಿಗಳನ್ನು ಕರ್ನಾಟಕಕ್ಕೆ ಕಳುಹಿಸಲಾಗಿದೆ ಎಂಬ ಮಾಹಿತಿ ನಮ್ಮಲ್ಲಿದೆ. ಆದರೆ ಅವರ ಮೋಸದ ದಾಳಿಗಳು ಅಧಿಕಾರಕ್ಕೆ ಬರುವ ಹೊಸ್ತಿಲಲ್ಲಿರುವ ಕಾಂಗ್ರೆಸ್‌ಗೆ ಏನೂ ಮಾಡಲಾರವು ಎಂಬುದನ್ನು ಪ್ರಧಾನಿ ಮೋದಿ ಮತ್ತು ಅವರ ಇ.ಡಿ ಮತ್ತು ಐಟಿ ತಿಳಿದಿರಬೇಕು ಎಂದು ಸುರ್ಜೇವಾಲ ಹೇಳಿದ್ದರು. ಈಗಾಗಲೇ ಇ.ಡಿ ಮತ್ತು ಐಟಿಯ ಸಾವಿರಾರು ಅಧಿಕಾರಿಗಳು ದೆಹಲಿಯಿಂದ ಕರ್ನಾಟಕದತ್ತ ಹೊರಟಿದ್ದಾರೆ. ನಮಗೆ ಸಹಾಯ ಮಾಡದಂತೆ ಹಿತೈಷಿಗಳನ್ನು ಹೆದರಿಸುತ್ತಿದ್ದಾರೆ. ಸೋಲುವ ಭೀತಿಯಲ್ಲಿ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳ ದುರ್ಬಳಕೆಗೆ ಯತ್ನಿಸುತ್ತಿದೆ ಎಂದು ಡಿಕೆ ಶಿವಕುಮಾರ್‌ ಆರೋಪಿಸಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Wed, 5 April 23