ಬಿಜೆಪಿ ಸೇರಿಸಿದ್ದಕ್ಕೆ ಧನ್ಯವಾದ! ಕಾಂಗ್ರೆಸ್ ಸೇರ್ಪಡೆ ವೇಳೆ ಸವದಿ ಯಡವಟ್ಟು; ನಂತರ ಕೊಟ್ಟ ಸಮಜಾಯಿಷಿ ಇಲ್ಲಿದೆ
ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸವದಿ, ‘ಭಾರತೀಯ ಜನತಾ ಪಕ್ಷಕ್ಕೆ ನನ್ನನ್ನು ಬರಮಾಡಿಕೊಂಡಿದ್ದಕ್ಕೆ ನಿಮಗೆಲ್ಲ ಧನ್ಯವಾದ’ ಎಂದು ಹೇಳಿದ್ದಾರೆ. ತಕ್ಷಣವೇ ವೇದಿಕೆಯಲ್ಲಿದ್ದ ಮುಖಂಡರು ‘ಕಾಂಗ್ರೆಸ್ ಕಾಂಗ್ರೆಸ್’ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು: ಬಿಜೆಪಿ ಹಿರಿಯ ನಾಯಕರಾಗಿದ್ದ ಲಕ್ಷ್ಮಣ ಸವದಿ (Laxman Savadi) ವಿಧಾನಸಭೆ ಚುನಾವಣೆಗೆ ಟಿಕೆಟ್ ದೊರೆಯದ ಕಾರಣ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗೂ ಇತರ ನಾಯಕರ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸವದಿ, ‘ಭಾರತೀಯ ಜನತಾ ಪಕ್ಷಕ್ಕೆ ನನ್ನನ್ನು ಬರಮಾಡಿಕೊಂಡಿದ್ದಕ್ಕೆ ನಿಮಗೆಲ್ಲ ಧನ್ಯವಾದ’ ಎಂದು ಹೇಳಿದ್ದಾರೆ. ತಕ್ಷಣವೇ ವೇದಿಕೆಯಲ್ಲಿದ್ದ ಮುಖಂಡರು ‘ಕಾಂಗ್ರೆಸ್ ಕಾಂಗ್ರೆಸ್’ ಎಂದು ಎಚ್ಚರಿಸಿದ್ದಾರೆ. ಕೂಡಲೇ ಹಣೆಚಚ್ಚಿಕೊಂಡ ಸವದಿ, ಮಾತನ್ನು ತಿದ್ದಿಕೊಂಡು ಸಮಜಾಯಿಷಿ ಕೊಟ್ಟು ಮಾತು ಮುಂದುವರಿಸಿದ್ದಾರೆ.
ಲಕ್ಷ್ಮಣ ಸವದಿ ಹೇಳಿದ್ದೇನು?
ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸವದಿ, ‘ಲಕ್ಷ್ಮಣ ಸವದಿ ಎಲ್ಲಿರುತ್ತಾನೋ ಅಲ್ಲಿ ನಿಷ್ಠೆ ಮತ್ತು ಶ್ರದ್ಧೆ ಖಂಡಿತವಾಗಿ ಇರುತ್ತದೆ. ನನಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ಒಂದು ಪಕ್ಷದಲ್ಲಿ ಇದ್ದುಕೊಂಡು ಮತ್ತೊಂದು ಪಕ್ಷದ ಪರ ಕೆಲಸ ಮಾಡಲು ನನಗೆ ತಿಳಿದಿಲ್ಲ. ಇಂದಿನವರೆಗೆ ಬಿಜೆಪಿಯಲ್ಲಿ ಹೇಗೆ ನಿಷ್ಠೆಯಿಂದ ಇದ್ದೆನೋ ಅದಕ್ಕಿಂತ ಹೆಚ್ಚು ನಿಯತ್ತಿನಿಂದ ಕಾಂಗ್ರೆಸ್ ಪಕ್ಷದಲ್ಲಿ ಜೀವನದ ಕೊನೆಯ ವರೆಗೆ ಇರಲಿದ್ದೇನೆ. ಅನೇಕ ಹಿರಿಯ ಮುಖಂಡರು ನೀವೆಲ್ಲ ಸೇರಿ ನನ್ನನ್ನು ‘ಭಾರತೀಯ ಜನತಾ ಪಕ್ಷಕ್ಕೆ’ ಬರಮಾಡಿಕೊಂಡಿದ್ದೀರಿ’ ಎಂದರು. ತಕ್ಷಣವೇ ಅಲ್ಲಿದ್ದ ಇತರ ನಾಯಕರು ‘ಕಾಂಗ್ರೆಸ್, ಕಾಂಗ್ರೆಸ್’ ಎಂದರು. ಹಣೆಚಚ್ಚಿಕೊಂಡ ಸವದಿ ಮಾತನ್ನು ತಿದ್ದಿಕೊಂಡರು.
ಇದೇ ವೇಳೆ ಸುರ್ಜೇವಾಲ ಮತ್ತು ಡಿಕೆ ಶಿವಕುಮಾರ್ ಅವರು ಮುಸಿಮುಸಿ ನಕ್ಕರು. ‘ಇಟ್ಸ್ ಒಕೆ, ಹ್ಯಾಪನ್ಸ್ (ಪರವಾಗಿಲ್ಲ ಹೀಗೆಲ್ಲ ಆಗುತ್ತದೆ ಒಮ್ಮೊಮ್ಮೆ)’ ಪರವಾಗಿಲ್ಲ ಮಾತು ಮುಂದುವರಿಸಿ ಎಂಬಂತೆ ಸವದಿಗೆ ಸುರ್ಜೇವಾಲ ಧೈರ್ಯ ತುಂಬಿದರು.
ಇದನ್ನೂ ಓದಿ: Karnataka Polls: ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗಲ್ಲ; ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಲಕ್ಷ್ಮಣ ಸವದಿ
ಮಾತು ಮುಂದುವರಿಸಿದ ಸವದಿ, ಈ ಕರ್ಪೂರದ ಡಬ್ಬ ಏನಿದೆ ನೋಡಿ, ಅದರಿಂದ ಕರ್ಪೂರ ಎಲ್ಲ ತೆಗೆದರೂ ಕೆಲವೊಂದು ದಿನಗಳ ಕಾಲ ಅದರ ವಾಸನೆ ಇರುತ್ತದೆ. ಅದೇ ರೀತಿ ಆಯಿತು. ಇನ್ನೊಂದು ಸ್ವಲ್ಪ ದಿವಸ ಬೇಕಾಗುತ್ತದೆ. ಯಾಕೆಂದರೆ ಕ್ಯಾಸೆಟ್ ಒಳಗೆ ರೆಕಾರ್ಡ್ ಆಗಿರುತ್ತದಲ್ಲ. ಅದನ್ನು ಡಿಲೀಟ್ ಮಾಡಬೇಕಿದೆ. ಡಿಲೀಟ್ ಆದ್ಮೇಲೆ ಅದನ್ನೆಲ್ಲ ವಾಷ್ ಮಾಡಿಕೊಂಡು ಹೊಸ ಕ್ಯಾಸೆಟ್ ಹಾಕೊಂಡು ಶುರು ಮಾಡುತ್ತೇನೆ. ಧನ್ಯವಾದಗಳು ಎಂದು ನಗುನಗುತ್ತಾ ಹೇಳಿ ಸುಧಾರಿಸಿಕೊಂಡರು. ಡಿಕೆ ಶಿವಕುಮಾರ್, ಸುರ್ಜೇವಾಲ ಹಾಗೂ ಇತರ ನಾಯಕರೂ ನಗಾಡಿ ಪರಿಸ್ಥಿತಿ ತಿಳಿಗೊಳಿಸಿದರು.
‘ಹೆಣ ಕೂಡ ಬಿಜೆಪಿ ಕಚೇರಿ ಎದುರು ಹೋಗಲ್ಲ’
ಕಾಂಗ್ರೆಸ್ ಸೇರ್ಪಡೆಗೂ ಮುನ್ನ ಮಾತನಾಡಿದ್ದ ಸವದಿ, ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗಲ್ಲ. ರಾಹುಲ್ ಗಾಂಧಿಯನ್ನು ಭೇಟಿಯಾಗುವ ಅಗತ್ಯವಿಲ್ಲ. ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಮಾಜಿ ಸವದಿ ಹೇಳಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸವದಿ ಅವರು ಭಾವುಕರಾಗಿದ್ದಾರೆ. ಅದರಿಂದ ಹಾಗೆ ಹೇಳಿರಬಹುದು. ಸವದಿ ಅವರು ಕಾಂಗ್ರೆಸ್ ಸೇರಬಾರದಿತ್ತು ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ