AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಬಿಜೆಪಿ ಬಂಡಾಯ ಶಮನಕ್ಕೆ ಹೈಕಮಾಂಡ್ ಎಂಟ್ರಿ; ಅತೃಪ್ತರ ಜತೆ ಧರ್ಮೇಂದ್ರ ಪ್ರಧಾನ್ ಸಭೆ

ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯದಾದ್ಯಂತ ಆಕಾಂಕ್ಷಿಗಳ ಬಂಡಾಯ ಜೋರಾಗಿದೆ. ಬೆಳಗಾವಿಯಲ್ಲಿ ಬಂಡಾಯದ ಬಿಸಿ ಜೋರಾಗಿದ್ದು, ಶಮನಗೊಳಿಸಲು ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಲಿದೆ.

ಬೆಳಗಾವಿಯಲ್ಲಿ ಬಿಜೆಪಿ ಬಂಡಾಯ ಶಮನಕ್ಕೆ ಹೈಕಮಾಂಡ್ ಎಂಟ್ರಿ; ಅತೃಪ್ತರ ಜತೆ ಧರ್ಮೇಂದ್ರ ಪ್ರಧಾನ್ ಸಭೆ
ಧರ್ಮೇಂದ್ರ ಪ್ರಧಾನ್
Follow us
Ganapathi Sharma
|

Updated on: Apr 14, 2023 | 3:48 PM

ಬೆಳಗಾವಿ: ವಿಧಾನಸಭೆ ಚುನಾವಣೆಗೆ ಬಿಜೆಪಿ (BJP) ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯದಾದ್ಯಂತ ಆಕಾಂಕ್ಷಿಗಳ ಬಂಡಾಯ ಜೋರಾಗಿದೆ. ಬೆಳಗಾವಿಯಲ್ಲಿ (Belagavi) ಬಂಡಾಯದ ಬಿಸಿ ಜೋರಾಗಿದ್ದು, ಶಮನಗೊಳಿಸಲು ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಲಿದೆ. ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಇಂದು (ಶುಕ್ರವಾರ) ಬೆಳಗಾವಿಗೆ ಆಗಮಿಸಿ ಅತೃಪ್ತ ನಾಯಕರ ಜತೆ ಸಭೆ ನಡೆಸಲಿದ್ದಾರೆ. ಬೆಳಗಾವಿಯಲ್ಲಿ ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಮತ್ತು ಟಿಕೆಟ್ ಪಡೆದ ಅಭ್ಯರ್ಥಿಗಳು ತುರ್ತು ಸಭೆಗೆ ಬರುವಂತೆ ಪ್ರಧಾನ್ ಕರೆ ನೀಡಿದ್ದಾರೆ.

ವಿಶೇಷವೆಂದರೆ, ಈಗಾಗಲೇ ಬಿ-ಫಾರ್ಮ್‌ ಪಡೆದ ನಾಯಕರು ಅದನ್ನು ತೆಗೆದುಕೊಂಡೇ ಸಭೆಗೆ ಬರುವಂತೆ ಸೂಚಿಸಲಾಗಿದೆ.

ರಾಮದುರ್ಗ ಕ್ಷೇತ್ರದ ಹಾಲಿ ಶಾಸಕ ಮಹದೇವಪ್ಪ ಯಾದವಾಡ ಮತ್ತು ಬೆಳಗಾವಿ ಉತ್ತರ ಕ್ಷೇತ್ರದ ಅನಿಲ್ ಬೆನಕೆ ಟಿಕೆಟ್ ದೊರೆಯದಿರುವುದಕ್ಕೆ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 2-3 ದಿನಗಳ ಕಾಲ ಕಾಯುವುದಾಗಿಯೂ ಪಕ್ಷವು ತಮ್ಮ ಉಮೇದುವಾರಿಕೆಯನ್ನು ಮರುಪರಿಶೀಲಿಸದಿದ್ದರೆ ಸೋಮವಾರ ರಾಮದುರ್ಗ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಾಗಿ ಯಾದವಾಡ ಶುಕ್ರವಾರ ಹೇಳಿದ್ದಾರೆ.

ಏತನ್ಮಧ್ಯೆ, ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ತನಗೆ ಆಫರ್‌ಗಳಿವೆ ಎಂದು ಬೆನಕೆ ಒಪ್ಪಿಕೊಂಡಿದ್ದಾರೆ ಮತ್ತು ಪ್ರಧಾನ್ ಅವರನ್ನು ಭೇಟಿಯಾದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: S Angara: ರಾಜಕೀಯ ನಿವೃತ್ತಿ ಹೇಳಿಕೆ ಹಿಂಪಡೆದ ಎಸ್. ಅಂಗಾರ, ಭಾಗೀರಥಿ ಮುರುಳ್ಯ ಪರ ಪ್ರಚಾರ ಮಾಡುವೆ

ಅಥಣಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಂದು ಕಾಂಗ್ರೆಸ್‌ ಸೇರುವುದಾಗಿ ಘೋಷಿಸಿದ್ದಾರೆ. ಅಥಣಿಯಲ್ಲಿ ಮಹೇಶ ಕುಮಠಳ್ಳಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಈ ಮೂರು ಸ್ಥಾನಗಳ ಹೊರತಾಗಿ ಬೈಲಹೊಂಗಲದಲ್ಲಿಯೂ ಬಂಡಾಯ ಎದ್ದಿದ್ದು, ಯಡಿಯೂರಪ್ಪನವರ ನಿಷ್ಠಾವಂತ ಡಾ. ವಿಶ್ವನಾಥ ಪಾಟೀಲ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ