ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಪುಂಡಾಟ ಪ್ರದರ್ಶನ: ಮಹಾರಾಷ್ಟ್ರ ಪರ ಘೋಷಣೆ

|

Updated on: Apr 20, 2023 | 5:40 PM

ಜಿಲ್ಲೆಯಲ್ಲಿ ಎಂಇಎಸ್ ಮತ್ತೆ ಪುಂಡಾಟ ಪ್ರದರ್ಶನ ಮಾಡಿದ್ದು, ಜೈ ಮಹಾರಾಷ್ಟ್ರ ಎಂಬ ಫಲಕ ಹಿಡಿದು ನಾಡದ್ರೋಹಿ ಘೋಷಣೆ ಕೂಗಿತ್ತ ಮೆರವಣಿಗೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ.

ಬೆಳಗಾವಿಯಲ್ಲಿ ಎಂಇಎಸ್ ಮತ್ತೆ ಪುಂಡಾಟ ಪ್ರದರ್ಶನ: ಮಹಾರಾಷ್ಟ್ರ ಪರ ಘೋಷಣೆ
ಮೆರವಣಿಗೆಯಲ್ಲಿ ಎಂಇಎಸ್ ಬೆಂಗಲಿಗರು
Follow us on

ಬೆಳಗಾವಿ: ಜಿಲ್ಲೆಯಲ್ಲಿ ಎಂಇಎಸ್ (MES) ಮತ್ತೆ ಪುಂಡಾಟ ಪ್ರದರ್ಶನ ಮಾಡಿದ್ದು, ಜೈ ಮಹಾರಾಷ್ಟ್ರ ಎಂಬ ಫಲಕ ಹಿಡಿದು ನಾಡದ್ರೋಹಿ ಘೋಷಣೆ ಕೂಗಿತ್ತ ಮೆರವಣಿಗೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಇಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಇಎಸ್ ಅಭ್ಯರ್ಥಿ ರಮಾಕಾಂತ ಕೊಂಡೊಸ್ಕರ್ ನಾಮಪತ್ರ ಸಲ್ಲಿಕೆ ಹಿನ್ನೆಲೆ ಡಾ.ಬಿ.ಆರ್‌.ಅಂಬೇಡ್ಕರ್ ಉದ್ಯಾನವನದಿಂದ ಮಹಾನಗರ ಪಾಲಿಕೆ ಕಚೇರಿಯವರೆಗೆ ಬೃಹತ್ ಮೆರವಣಿಗೆ ಮಾಡಿದ್ದು, ಈ ವೇಳೆ ಎಂಇಎಸ್ ಪುಂಡಾಟ ಮೆರೆದಿದೆ. ಎಂಇಎಸ್ ಮೆರವಣಿಗೆಯಲ್ಲಿ ಪುಂಡರು ಮಹಾರಾಷ್ಟ್ರ ಪರ ಘೋಷಣೆ ಕೂಗಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು. ರಹೆಂಗೇ ತೋ ಮಹಾರಾಷ್ಟ್ರ ಮೇ, ನಹೀ ತೋ ಜೈಲ್ ಮೇ ಎಂದು ನಾಡದ್ರೋಹಿ ಘೋಷಣೆ ಕೂಗಲಾಗಿದೆ.

ಚುನಾವಣಾ ಹೊಸ್ತಿಲಲ್ಲಿ ಭಾಷಾ ವೈಷಮ್ಯದ ವಿಷಬೀಜ ಬಿತ್ತಲು ಎಂಇಎಸ್ ಯತ್ನಿಸುತ್ತಿದೆ ಎನ್ನಲಾಗುತ್ತಿದೆ. ಭಾಷಾ ವೈಷಮ್ಯದ ವಿಷಬೀಜ ಬಿತ್ತಿ ರಾಜಕೀಯ ಅಸ್ತಿತ್ವ ಮರುವಶಕ್ಕೆ ಎಂಇಎಸ್ ಹೆಣಗಾಡುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್​ ಸೋತು ಸುಣ್ಣವಾಗಿದೆ. ಹಾಗಾಗಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಎಂಇಎಸ್​ ಮತ್ತೆ ಪುಂಡಾಟ ಶುರು ಮಾಡಿಕೊಂಡಿದೆ.

ಇದನ್ನೂ ಓದಿ: Karnataka Assembly Elections 2023: ಬಿಜೆಪಿ ಘೋಷಣೆ ಮಾಡಿರುವ ಅಭ್ಯರ್ಥಿಗಳ ವಿಶೇಷತೆಗಳಿವು

ನಾಮಪತ್ರ ಸಲ್ಲಿಸುವ ವೇಳೆ ಕಲ್ಲು ತೂರಾಟ: ಮಹಿಳಾ ಪೊಲೀಸ್ ಸಿಬ್ಬಂದಿಗೆ ಗಾಯ

ತುಮಕೂರು: ಕಾಂಗ್ರೆಸ್ ಅಭ್ಯರ್ಥಿ ಜಿ. ಪರಮೇಶ್ವರ್​ ನಾಮಪತ್ರ ಸಲ್ಲಿಸಲು ತೆರಳಿದ ವೇಳೆ ಕಿಡಿಗೇಡಿ‌ಗಳಿಂದ ಕೊರಟಗೆರೆ ತಾಲೂಕು ಕಚೇರಿ ಮೇಲೆ ಕಲ್ಲು ತೂರಾಟ ಮಾಡಿರುವಂತಹ ಘಟನೆ ನಡೆದಿದೆ. ಕಲ್ಲು ತೂರಾಟ ವೇಳೆ ಮಹಿಳಾ ಪೊಲೀಸ್​ ಸಿಬ್ಬಂದಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಾಮಪತ್ರ ಸಲ್ಲಿಕೆ ಬಳಿಕ ಪರಮೇಶ್ವರ್​ ಪ್ರತಿಕ್ರಿಯೆ ನೀಡಿದ್ದು, ಕಚೇರಿ ಮೇಲೆ ಯಾರು ಕಲ್ಲು ಎಸೆದರು ಅಂತಾ ನನಗೆ ಗೊತ್ತಿಲ್ಲ. ನಾನು ನಾಮಪತ್ರ ಸಲ್ಲಿಸಲು ಒಳಗೆ ಹೋದಾಗ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರ ಬಳಿ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.

ಸೇಬಿಗಾಗಿ ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತ: ಲಾಠಿಚಾರ್ಜ್

ನೆಲಮಂಗಲ: ಸೇಬಿಗಾಗಿ ಮುಗಿಬಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಲಾಠಿಚಾರ್ಜ್​​ ಮಾಡಿರುವಂತಹ ಘಟನೆ ನೆಲಮಂಗಲದಲ್ಲಿ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮುಖಂಡರು ಆ್ಯಪಲ್​ ಹಾರ ಹಾಕಿದ್ದರು. ಈ ವೇಳೆ ಹಾರದಲ್ಲಿದ್ದ ಸೇಬು ಕಿತ್ತುಕೊಳ್ಳಲು ಕಾರ್ಯಕರ್ತರ ನಡುವೆ ತಳ್ಳಾಟ ಉಂಟಾಗಿದೆ. ಹಾಗಾಗಿ ಲಾಠಿ ಪ್ರಹಾರ ನಡೆಸಿ ಪೊಲೀಸರು ಕಾರ್ಯಕರ್ತರನ್ನು ಚದುರಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಹಣಿಯಲು ವರುಣಾ ಅಖಾಡಕ್ಕಿಳಿದ ಬಿವೈ ವಿಜಯೇಂದ್ರ, ವಿ ಸೋಮಣ್ಣ ಪರ ಪ್ರಚಾರ

ಅನಿಲ್ ಮೆಣಸಿನಕಾಯಿ ಕಾರಿನ ಮೇಲೆ ಕಲ್ಲುತೂರಾಟ

ಗದಗ: ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಕಾರಿನ ಮೇಲೆ ದುಷ್ಕರ್ಮಿಗಳಿಂದ ಕಲ್ಲುತೂರಾಟ ಮಾಡಿದ್ದಾರೆ. ಅನಿಲ್ ಮೆಣಸಿನಕಾಯಿ ಅವರು ಗದಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದ ವೇಳೆ ಕಾರಿನ ಮೇಲೆ ಕಲ್ಲುತೂರಾಟ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ರೋಡ್​ ಶೋ ಮೂಲಕ H.K.ಪಾಟೀಲ್​ ಕೂಡ ನಾಮಪತ್ರ ಸಲ್ಲಿಕೆಗೆ ಬಂದಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಅನಿಲ್‌‌‌‌ ಜೊತೆಗೆ ಮಾತಿನ ಚಕಮಕಿ ಉಂಟಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಗದಗ ಪೊಲೀಸರು ಪರದಾಟ ನಡೆಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:40 pm, Thu, 20 April 23