ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ದೆಹಲಿಯಿಂದಲೇ ಸ್ಪಷ್ಟನೆ ಕೊಟ್ಟ ಸೋಮಣ್ಣ

|

Updated on: Apr 09, 2023 | 12:05 PM

ವಿಜಯೇಂದ್ರ ಅವರು ವರುಣಾದಲ್ಲಿ ಸ್ಪರ್ಧೆ ಮಾಡಲ್ಲ ಗೊತ್ತಾಗಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ಧ ವಿ ಸೋಮಣ್ಣ ಕಣಕ್ಕಿಳಿಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಇದೀಗ ಸೋಮಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ದೆಹಲಿಯಿಂದಲೇ ಸ್ಪಷ್ಟನೆ ಕೊಟ್ಟ ಸೋಮಣ್ಣ
ಸಿದ್ದರಾಮಯ್ಯ , ವಿ.ಸೋಮಣ್ಣ
Follow us on

ನವದೆಗಲಿ: ಕರ್ನಾಟಕ ವಿಧಾನಸಭಾ ಉನಾವಣೆಗೆ (Karnataka Assembly Elections 2023) ದಿನಾಂಕ ನಿಗದಿಯಾಗಿದೆ. ಹೀಗಿರುವಾಗ ರಾಜಕೀಯ ಪಕ್ಷ, ನಾಯಕರು ತಮ್ಮದೇ ರೀತಿಯಲ್ಲಿ ರಣತಂತ್ರ ಹೆಣೆಯುತ್ತಿದ್ದು ಎದುರಾಳಿಗಳ ಸೋಲಿಗೆ ಪ್ಲಾನ್​ ರೂಪಿಸುತ್ತಿದ್ದಾರೆ. ಸದ್ಯ ಕಾಂಗ್ರೆಸ್​ ನಾಯಕ, ಮಾಜಿ ಸಿದ್ದರಾಮಯ್ಯ(Siddaramaiah) ಸೋಲಿಸಲು ಬಿಜೆಪಿ ವರುಣಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಳ್ಳಿಸಿಲು ಪ್ಲಾನ್ ಮಾಡಿದೆ. ಈ ಮೊದಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಅವರ ಪುತ್ರ ವಿಜಯೇಂದ್ರ (BY Vijayendra) ಅವರನ್ನು ಕಣಕ್ಕಿಳಿಸುವ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಆದ್ರೆ, ಯಡಿಯೂರಪ್ಪ ಅವರು ವಿಜಯೇಂದ್ರ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಇಲ್ಲ ಎನ್ನುವುದು ಜಗಜ್ಜಾಹೀರಾಯ್ತು. ಇದಾದ ಬಳಿಕ ಇದೀಗ ಸಿದ್ದರಾಮಯ್ಯ ವಿರುದ್ಧ ಸಚಿವ ವಿ ಸೋಮಣ್ಣ (V Somanna) ಅವರು ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಇದಕ್ಕೆ ಸೋಮಣ್ಣ ಸ್ಪಷ್ಟಪಡಿಸಿದ್ದು, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಇಂದು(ಏಪ್ರಿಲ್ 09) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸತ್ಯಕ್ಕೆ ದೂರವಾದ ವಿಚಾರ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯಾವುದೇ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎನ್ನುವುದು ವದಂತಿ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ನಾವು ಒಟ್ಟಿಗೆ ರಾಜಕೀಯ ಪ್ರವೇಶ ಮಾಡಿದ್ದೇವೆ. ಸಿಎಂ ಆಗಿ ಅವರು ಹಲವು ಕೆಲಸ ಕಾರ್ಯ ಮಾಡಿದ್ದಾರೆ. ಚುನಾವಣೆಯಲ್ಲಿ ಯಾರು ನಿಲ್ಲುವುದು ಬಿಡುವುದು ಬಿಟ್ಟು ಇತಿಹಾಸ ನೋಡಬೇಕು. ಪಕ್ಷ ಯಾರನ್ನ ನಿಲ್ಲಿಸುತ್ತೋ ಅವರು ನಿಲ್ಲಬೇಕು. ಅದು ಸಾಂಕೇತಿಕವಾಗಿ ನಡೆಯುತ್ತಿರುತ್ತದೆ. ನಾನು ಸ್ಪರ್ಧೆ ಮಾಡುವ ಬಗ್ಗೆ ಪ್ರಶ್ನೆನೇ ಇಲ್ಲ ಎಂದು ಖಡಕ್ ಆಗಿಯೇ ಹೇಳಿದರು.

ಗುಬ್ಬಿ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ. ವರಿಷ್ಠರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇನ್ನು ಇದೇ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಜೊತೆಗಿನ ಮುನಿಸು ಬಗ್ಗೆ ಪ್ರತಿಕ್ರಿಯಿಸಿದ್ದು, ಅವರು ಆಕಾಶ, ನಾನು ನಕ್ಷತ್ರ, ನಕ್ಷತ್ರ ಯಾವಗ ಮಿಂಚಿ ಮಾಯಾ ಆಗುತ್ತೆ ಗೊತ್ತಿಲ್ಲ. ನಾವು ಅವರ ಜೊತೆಗೆ ಹೋಲಿಕೆ ಮಾಡಿಕೊಳ್ಳಲ್ಲ. ಅವರು ಕರೆದಾಗ ಹೋಗುತ್ತೇನೆ. ನಾನು ಅವರ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ. ನಾವು ಅವರನ್ನು ತುಂಬಾ ಗೌರವಿಸುತ್ತೇವ ಎಂದರು.

ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಪುತ್ರನಿಗ ಟಿಕೆಟ್​ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ದೂರವಾಣಿ ಮೂಲಕ ಅಮಿತ್ ಶಾ ಜೊತೆಗೂ ಮಾತುಕತೆ ನಡೆಸಿದ್ದು, ಯಾವುದೇ ನಾಯಕರ ಮಕ್ಕಳಿಗೆ ಟಿಕೆಟ್ ಕೊಟ್ಟಲ್ಲಿ ನನ್ನ ಮಗ ಅರುಣ್​ಗೂ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಅಪ್ಪ ಮಕ್ಕಳಿಗೆ ಟಿಕೆಟ್ ಕೊಡಲ್ಲ ಅಂದರೆ ನನಗೆ ಟಿಕೆಟ್ ಬೇಡ. ನನ್ನ ಮಗ ಅರುಣ್ ಗೆ ಕೊಡಿ ಎಂದು ಅಮಿತ್​ ಶಾಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಆದ್ರೆ, ಸೋಮಣ್ಣ ಮಾತಿಗೆ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದು, ನೀವು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು. ನಿಮ್ಮ ಮಗನ ಸ್ಪರ್ಧೆ ಬಗ್ಗೆ ನಾವು ನಿರ್ಧಾರ ಮಾಡುತ್ತೇವೆ. ದೊಡ್ಡ ಮಟ್ಟದಲ್ಲಿ ಪಕ್ಷಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ