ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ, ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಪ್ರಲ್ಹಾದ್​ ಜೋಶಿ ಹೇಳಿದ್ದಿಷ್ಟು

|

Updated on: May 16, 2023 | 1:29 PM

ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಮಾತನಾಡಿ ನಳೀನ್​ ಕುಮಾರ್​ ಕಟೀಲ್​ ಅವರ ಅವಧಿ ಈಗಾಗಲೇ ಮುಗಿದು ಹೋಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ, ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಪ್ರಲ್ಹಾದ್​ ಜೋಶಿ ಹೇಳಿದ್ದಿಷ್ಟು
ಪ್ರಲ್ಹಾದ್​ ಜೋಶಿ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಯಾರು ಊಹಿಸಲಾಗದಷ್ಟು ಹೀನಾಯವಾಗಿ ಬಿಜೆಪಿ (BJP) ಸೋತಿದೆ. ಕೇವಲ 66 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ತೃಪ್ತಿಪಟ್ಟಿದೆ. ಈ ಸೋಲಿನ ನಂತರ ನಿರೀಕ್ಷಿಸಿದಂತೆ ಪರಭಾವದ ಹೊಣೆಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ (Nalin Kumar Kateel) ಅವರು ಹೊತ್ತುಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ ಪಕ್ಷ ಸೋಲುತ್ತಿದ್ದಂತೆ ರಾಜ್ಯಾಧ್ಯಕ್ಷರ ಬದಲಾವಣೆಯ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿವೆ. ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಮಾತನಾಡಿ ನಳೀನ್​ ಕುಮಾರ್​ ಕಟೀಲ್​ ಅವರ ಅವಧಿ ಈಗಾಗಲೇ ಮುಗಿದು ಹೋಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಚುನಾವಣಾ ದೃಷ್ಟಿಯಿಂದ ಅವರಿಗೆ ರಾಷ್ಟ್ರೀಯ ನಾಯಕರು ಜವಾಬ್ದಾರಿ ಕೊಟ್ಟಿದ್ದರು. ಮುಂದಿನ ತೀರ್ಮಾನವನ್ನು ರಾಷ್ಟ್ರೀಯ ನಾಯಕರೇ ಮಾಡುತ್ತಾರೆ ಎಂದರು.

ವಿಪಕ್ಷ ನಾಯಕ ಯಾರು ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು ವಿಪಕ್ಷ ನಾಯಕ ಯಾರು ಅಂತ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವಾಗುತ್ತದೆ. ಅದಕ್ಕಿಂತ ಮೊದಲು ನಮ್ಮ ರಾಷ್ಟ್ರೀಯ ನಾಯಕರಲ್ಲೊಬ್ಬರು ರಾಜ್ಯಕ್ಕೆ ಬರುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಮುಸ್ಲಿಂ ಲೀಗ್ ಪ್ರಣಾಳಿಕೆಯಂತಿದೆ ಕಾಂಗ್ರೆಸ್ ಮ್ಯಾನಿಫೆಸ್ಟೋ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ

ಇನ್ನು ಪಕ್ಷದ ಸೋಲಿನ ಕುರಿತು ಮಾತನಾಡಿದ ಅವರು ಈ ಚುನಾವಣೆ ಬಿಜೆಪಿ ಪಾಲಿಗೆ ನಿರಾಶದಾಯಕ ಫಲಿತಾಂಶ. ಪಕ್ಷದ ಸೋಲನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ. ಚುನಾವಣಾ ಸೋಲು ಬಿಜೆಪಿಗೆ ಅತ್ಯಂತ ನಿರಾಶಾದಾಯಕ ರಿಸಲ್ಟ್. ನಾನು ಮತ್ತು ಪಕ್ಷ ಸೋಲನ್ನು ಸಹಜವಾಗಿ ಸ್ವೀಕರಿಸಿಲ್ಲ, ಸವಾಲಾಗಿ ಸ್ವೀಕರಿಸಿದ್ದೇವೆ. ಸೋಲಿಗೆ ಕಾರಣ ಏನು ಅಂತ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಹೊಸ ಸರ್ಕಾರ ಬೇಗ ಅಸ್ತಿತ್ವಕ್ಕೆ ಬಂದು ಜನರ ಆಶೋತ್ತರ ಈಡೇರಿಕೆಗೆ ಕೆಲಸ ಶುರು ಮಾಡಲಿ. ಕಾಂಗ್ರೆಸ್ ಕೊಟ್ಟಿರುವ ಭರವಸೆಯನ್ನು ನ್ಯಾಯೋಚಿತವಾಗಿ ಈಡೇರಿಸಬೇಕು. ಬಿಜೆಪಿ ಸೋಲಿಗೆ ಬಿ.ಎಲ್. ಸಂತೋಷ್ ಕಾರಣ ಎಂಬ ಆರೋಪ ವಿಚಾರವಾಗಿ ಮಾತನಾಡಿ ಸೋಲಿನ ಹೊಣೆ ಇಡೀ ರಾಜ್ಯ ಬಿಜೆಪಿ ಘಟಕದ್ದು. ಎಲ್ಲಿ ಏನು ತಪ್ಪಾಗಿದೆ ಅಂತ ನಾವು ವಿಮರ್ಶೆ ಮಾಡುತ್ತೇವೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಸನ್ನದ್ದತೆಯನ್ನು ಶುರು ಮಾಡುತ್ತಿದ್ದೇವೆ, ಗೆಲ್ಲುತ್ತೇವೆ. ಲೋಕಸಭಾ ಚುನಾವಣೆ ಬೇರೆ ವಿಷಯದ ಮೇಲೆ ನಡೆಯುತ್ತದೆ, ರಾಜ್ಯದ ಚುನಾವಣೆಗಳು ಬೇರೆ ವಿಷಯದ ಮೇಲೆ ನಡೆಯುತ್ತವೆ. ಇಂದು ಚುನಾವಣೆ ಆದರೆ ಬಿಜೆಪಿಗೆ 330 ಕ್ಕೂ ಹೆಚ್ಚು ಸೀಟು ಬರುತ್ತದೆ ಎಂಬ ಸಮೀಕ್ಷೆ ಇದೆ. ಅದಕ್ಕೂ ರಾಜ್ಯದ ಚುನಾವಣೆಗೂ ಸಂಬಂಧ ಇಲ್ಲ. ಜನ ಜಾಣರು, ಯಾವಾಗ ಯಾರಿಗೆ ವೋಟ್​​ ಕೊಡಬೇಕು ಅಂತಾ ಗೊತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ