ರೇಣುಕಾಚಾರ್ಯ ಸಭೆ ಮೇಲೆ ಚುನಾವಣಾಧಿಕಾರಿಗಳ ದಾಳಿ, ಜನರಿಗೆ ತಂದಿದ್ದ ಊಟ ವಾಪಸ್

|

Updated on: Apr 02, 2023 | 5:15 PM

ಬೆಂಗಳೂರಿನ ಶಿವಾನಂದ ಸರ್ಕಲ್​ ಬಳಿ ಹೊನ್ನಾಳಿ ಕ್ಷೇತ್ರದ ಜನರೊಂದಿಗೆ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಸಭೆ ನಡೆಸುತ್ತಿದ್ದಾಗ ಚುನಾವಣಾ ಅಧಿಕಾರಿಗಳು ಎಂಟ್ರಿಕೊಟ್ಟ ಹಿನ್ನೆಲೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.

ರೇಣುಕಾಚಾರ್ಯ ಸಭೆ ಮೇಲೆ ಚುನಾವಣಾಧಿಕಾರಿಗಳ ದಾಳಿ, ಜನರಿಗೆ ತಂದಿದ್ದ ಊಟ ವಾಪಸ್
ಅನಮತಿ ಇಲ್ಲದೆ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸಭೆಗೆ ಚುನಾವಣೆ ಅಧಿಕಾರಿಗಳ ದಾಳಿ
Follow us on

ಬೆಂಗಳೂರು: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ಪಡೆಯದೇ ನಗರದ ಶಿವಾನಂದ ಸರ್ಕಲ್​ ಬಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ (MP Renukacharya) ಅವರು ಹೊನ್ನಾಳಿ ಕ್ಷೇತ್ರದ ಜನರೊಂದಿಗೆ ಸಭೆ ನಡೆಸಿದ್ದಾರೆ. ಮಾಹಿತಿ ತಿಳಿದ ಚುನಾವಣಾ ಅಧಿಕಾರಿಗಳು ರೇಣುಕಾಚಾರ್ಯ ಅವರ ಭಾಷಣದ ವೇಳೆ ದಾಳಿ ನಡೆಸಿ ಸಭೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಸಭೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಂಡ ಅಧಿಕಾರಿಗಳು ರೇಣುಕಾಚಾರ್ಯ ಅವರು ಬಳಸುತ್ತಿದ್ದ ಮೈಕ್ ಕಸಿಯಲು ಯತ್ನಿಸಿದ್ದಾರೆ. ಆದರೆ ಕ್ಯಾರೇ ಎನ್ನದ ರೇಣುಕಾಚಾರ್ಯ ಭಾಷಣ ಮುಂದುವರಿಸಿದ್ದಾರೆ. ಕೊನೆಗೆ ಅಧಿಕಾರಿಗಳ ಸೂಚನೆಯಂತೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.

ಗುರುರಾಜ ಕಲ್ಯಾಣಮಂಟಪದಲ್ಲಿ ಹೊನ್ನಾಳಿ ಕ್ಷೇತ್ರದ ಜನರ ಸಭೆ ಕರೆದ ಹಿನ್ನೆಲೆ ರೇಣುಕಾಚಾರ್ಯ ಅವರು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಿದ್ದರು. ಆದರೆ ಇದಕ್ಕೂ ಮುನ್ನ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ಸಭೆಯನ್ನು ಮೊಟಕುಗೊಳಿಸಿ, ಸಭೆಯಲ್ಲಿ ನೆರೆದಿದ್ದ ಜನರಿಗೆ ಊಟ ಮಾಡಲೂ ಅವಕಾಶ ನೀಡದೆ ತಂದಿದ್ದ ಕ್ಯಾಟರಿಂಗ್ ಊಟವನ್ನು ವಾಪಸ್ ಕಳುಹಿಸಿದ್ದಾರೆ. ಸದ್ಯ ರೇಣುಕಾಚಾರ್ಯ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆಯನ್ನೂ ಜಾರಿ ಮಾಡಲಾಗಿದೆ. ಅದರಂತೆ ಯಾವುದೇ ರಾಜಕೀಯ ಪಕ್ಷಗಳು ಸಭೆ ಸಮಾರಂಭಗಳನ್ನು ನಡೆಸಬೇಕಾದರೆ ಚುನಾವಣೆ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ರೇಣುಕಾಚಾರ್ಯ ಅವರು ಯಾವುದೇ ಅನುಮತಿ ಪಡೆಯದ ಹಿನ್ನೆಲೆ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿ ಸಭೆಯನ್ನು ರದ್ದುಗೊಳಿಸಿದ್ದಾರೆ.

ಇದನ್ನೂ ಓದಿ: MP Renukacharya: ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣ: ಶಾಸಕ ರೇಣುಕಾಚಾರ್ಯಗೆ ಸಂಕಷ್ಟ

ಇಂದು ಕೊಪ್ಪಳದಲ್ಲೂ ಇಂತಹದ್ದೇ ದಾಳಿ ನಡೆದಿತ್ತು. ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಬಳ್ಳಾರಿ ವಿಭಾಗದ ಬಿಜೆಪಿ ಡಿಜಿಟಲ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದಾಗ ಎಂಟ್ರಿ ಕೊಟ್ಟ ಚುನಾವಣೆ ಅಧಿಕಾರಿಗಳು ಮತ್ತು ಪೊಲೀಸರು, ಪರವಾನಿಗೆ ಸಮಯ ಮೀರಿದ್ದು, ಸಭೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಸೂಚನೆ ಮೇರೆಗೆ ಬಿ.ಎಲ್ ಸಂತೋಷ್​ ಭಾಷಣ ನಿಲ್ಲಿಸಿ ಕಾರ್ಯಕ್ರಮ ಮುಗಿಸಿದರು. ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರಿಂದ ಮೋದಿ, ಮೋದಿ ಎಂದು ಘೋಷಣೆ ಕೂಗಲಾಯಿತು. ಬಿ.ಎಲ್ ಸಂತೋಷಗೆ ಶಾಸಕರು, ಸಚಿವರು, ಸಂಸದರು ಸಾಥ್​ ನೀಡಿದ್ದರು.

ನಿನ್ನೆ (ಏಪ್ರಿಲ್ 1) ಸಚಿವೆ ಶಿಕಲಾ ಜೊಲ್ಲೆ ಅವರು ನೀತಿ ಸಂಹಿತೆ ಉಲ್ಲಂಘಿಸಿ ಕಾರ್ಯಕ್ರಮ ನಡೆಸಿದ್ದರು. ಈ ಸಂಬಂಧ ಬೆಳಗಾವಿಯ ಪಾಣಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಸ್ಥಳೀಯ ಪುರಸಭೆಯ ಪ್ರೌಢಶಾಲೆಯಲ್ಲಿ ಬುಧವಾರ ಸಂಜೆ 5ರಿಂದ ರಾತ್ರಿ 10ರವರೆಗೆ ಆಯೋಜಿಸಿದ್ದ ‘ಅರಿಶಿಣ ಕುಂಕುಮ’ ಕಾರ್ಯಕ್ರಮದಲ್ಲಿ ಶಶಿಕಲಾ ಜೊಲ್ಲೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಬಂದವರಿಗಾಗಿ ಆಹಾರ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಅಲ್ಲದೆ ಕಾರ್ಯಕ್ರಮದ ಸ್ಥಳದಲ್ಲಿ ಸ್ಥಳೀಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಚಿತ್ರಗಳ ಬ್ಯಾನರ್​ಗಳು ಹಾಗೂ ಬಿಜೆಪಿ ಧ್ವಜಗಳನ್ನು ಹಾಕಲಾಗಿತ್ತು. ಹೀಗಾಗಿ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ಎಫ್​ಐಆರ್​ ದಾಖಲಾಗಿದೆ. ಕಾರ್ಯಕ್ರಮ ಆಯೋಜಿಸಿದ್ದ ರಣರಾಗಿಣಿ ಮಹಿಳಾ ಮಂಡಳದ ಅಧ್ಯಕ್ಷರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ವಿಧಾನಸಭೆ ಚುನಾವಣೆಯ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Sun, 2 April 23