ಉತ್ತರ ಪ್ರದೇಶ, ಬಿಹಾರ, ದೆಹಲಿಯಿಂದ ಭಯ್ಯಾಗಳು ಇಲ್ಲಿ ಬಂದು ಅಧಿಕಾರ ನಡೆಸಲು ಸಾಧ್ಯವಿಲ್ಲ: ಚರಣ್​ಜಿತ್ ಸಿಂಗ್ ಚನ್ನಿ

ಪ್ರಿಯಾಂಕಾ ಗಾಂಧಿ ಪಂಜಾಬಿನ ಸೊಸೆ, ಅವರು ಪಂಜಾಬಿಗಳ ಬಹೂ(ಸೊಸೆ). ಉತ್ತರ ಪ್ರದೇಶ, ಬಿಹಾರ, ದೆಹಲಿಯಿಂದ ಭಯ್ಯಾಗಳು ಇಲ್ಲಿ ಬಂದು ಆಳಲು ಸಾಧ್ಯವಿಲ್ಲ.

ಉತ್ತರ ಪ್ರದೇಶ, ಬಿಹಾರ, ದೆಹಲಿಯಿಂದ ಭಯ್ಯಾಗಳು ಇಲ್ಲಿ ಬಂದು ಅಧಿಕಾರ ನಡೆಸಲು ಸಾಧ್ಯವಿಲ್ಲ: ಚರಣ್​ಜಿತ್ ಸಿಂಗ್ ಚನ್ನಿ
ಚುನಾವಣಾ ಪ್ರಚಾರದಲ್ಲಿ ಚನ್ನಿ ಮತ್ತು ಪ್ರಿಯಾಂಕಾ ಗಾಂಧಿ
Edited By:

Updated on: Feb 16, 2022 | 6:20 PM

ದೆಹಲಿ: ಪಂಜಾಬ್​ನಲ್ಲಿ (Punjab Polls) ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ(Charanjit Singh Channi) ಅವರು  ಉತ್ತರ ಪ್ರದೇಶದ ಭಯ್ಯಾಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂಬ ಹೇಳಿಕೆಯೊಂದಿಗೆ ವಿವಾದವನ್ನು ಹುಟ್ಟುಹಾಕಿದ್ದಾರೆ. ಚನ್ನಿ ಈ ಹೇಳಿಕೆ ನೀಡಿದಾಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra)ರೋಡ್ ಶೋನಲ್ಲಿ ಅವರ ಪಕ್ಕದಲ್ಲಿದ್ದರು. “ಪ್ರಿಯಾಂಕಾ ಗಾಂಧಿ ಪಂಜಾಬಿನ ಸೊಸೆ, ಅವರು ಪಂಜಾಬಿಗಳ ಬಹೂ(ಸೊಸೆ). ಉತ್ತರ ಪ್ರದೇಶ, ಬಿಹಾರ, ದೆಹಲಿಯಿಂದ ಭಯ್ಯಾಗಳು ಇಲ್ಲಿ ಬಂದು ಆಳಲು ಸಾಧ್ಯವಿಲ್ಲ. ಯುಪಿ ಭಯ್ಯಾಗಳಿಗೆ ಪಂಜಾಬ್‌ನಲ್ಲಿ ಸುತ್ತಾಡಲು ನಾವು ಬಿಡುವುದಿಲ್ಲ ” ಎಂದು ಚನ್ನಿ ಪಂಜಾಬಿ ಭಾಷೆಯಲ್ಲಿ ಹೇಳಿದರು. ಪ್ರಿಯಾಂಕಾ ಗಾಂಧಿ ನಗುತ್ತಾ ಚಪ್ಪಾಳೆ ತಟ್ಟಿದರು. ಬೆಂಬಲಿಗರು ‘ಬೋಲೆ ಸೋ ನಿಹಾಲ್…’ ಎಂದು ಕೇಕೆ ಹಾಕಿದರು. ಆಮ್ ಆದ್ಮಿ ಪಕ್ಷ (ಎಎಪಿ) ಗಾಗಿ ಪಂಜಾಬ್‌ನಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಟ್ಟುಕೊಂಡು ಚನ್ನಿ ಈ ಹೇಳಿಕೆ ನೀಡಿದ್ದಾರೆ.  “ಇದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಯಾವುದೇ ವ್ಯಕ್ತಿ ಅಥವಾ ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡ ಹೇಳಿಕೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.  “ಪ್ರಿಯಾಂಕಾ ಗಾಂಧಿ ಯುಪಿಯಿಂದ ಬಂದವರು ಎಂದು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಹೇಳಿದ್ದಾರೆ. ಅದೇ ವೇಳೆ ಕೇಜ್ರಿವಾಲ್, ಹಾಗಾದರೆ ಪ್ರಿಯಾಂಕಾ ಕೂಡಾ ಭಯ್ಯಾ ಎಂದಿದ್ದಾರೆ.

ಈ ವಿಡಿಯೊವನ್ನು ಶೇರ್ ಮಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಪ್ರಿಯಾಂಕಾ ಗಾಂಧಿಯನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿರುವ ಅವರು, “ಪ್ರಿಯಾಂಕಾ ವಾದ್ರಾ ಉತ್ತರ ಪ್ರದೇಶಕ್ಕೆ ಹೋಗಿ ತನ್ನನ್ನು ಯುಪಿ ಕೀ ಬೇಟಿ (ಯುಪಿಯ ಮಗಳು) ಎಂದು ಕರೆದುಕೊಳ್ಳುತ್ತಾರೆ ಮತ್ತು ಪಂಜಾಬ್‌ನಲ್ಲಿ ಯುಪಿ-ಬಿಹಾರ ಜನರು ಅವಮಾನಿಸಿದಾಗ ಚಪ್ಪಾಳೆ ತಟ್ಟುತ್ತಾರೆ. ಇದು ಅವರ ಡಬಲ್ ಫೇಸ್ ಎಂದಿದ್ದಾರೆ.

ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ. ಅವರು ತಮ್ಮ ಸಹೋದರ ರಾಹುಲ್ ಗಾಂಧಿಯೊಂದಿಗೆ ಪಂಜಾಬ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಫೆಬ್ರವರಿ 20 ರಂದು (ಭಾನುವಾರ) ಪಂಜಾಬ್ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಸರ್ಜಿಕಲ್​ ಸ್ಟ್ರೈಕ್​​ಗೂ ಪುರಾವೆ ಕೇಳುವ ಕಾಂಗ್ರೆಸ್​​ ಕೈಯಲ್ಲಿ ಪಂಜಾಬ್​ ಸುರಕ್ಷಿತವಲ್ಲ: ಪ್ರಧಾನಿ ನರೇಂದ್ರ ಮೋದಿ

Published On - 6:18 pm, Wed, 16 February 22