ತೆಲಂಗಾಣ: ಕಾಮರೆಡ್ಡಿಯಲ್ಲಿನ ಚುನಾವಣಾ ರ‍್ಯಾಲಿಯಲ್ಲಿ ಬೈಬೈ ಕೆಸಿಆರ್ ಎಂದ ರಾಹುಲ್ ಗಾಂಧಿ

ಕಾಮರೆಡ್ಡಿಯಲ್ಲಿ ನಡೆದ ರ‍್ಯಾಲಿಯಲ್ಲಿ ತೆಲಂಗಾಣ ಕಾಂಗ್ರೆಸ್ ಘಟಕದ ಮುಖ್ಯಸ್ಥ ರೇವಂತ್ ರೆಡ್ಡಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಭಿಕರಿಗೆ ಧನ್ಯವಾದ ಹೇಳಿ ಬೈಬೈ ಎಂದಿದ್ದಾರೆ. ಆಗ ಮೈಕ್ ಹತ್ತಿರ ಬಂದ ರಾಹುಲ್ ಗಾಂಧಿ, ಬೈಬೈ ಕೆಸಿಆರ್ ಎಂದು ಹೇಳಿದಾಗ ಸಭಿಕರು ನಕ್ಕಿದ್ದಾರೆ. ತೆಲಂಗಾಣದ 119 ಸ್ಥಾನಗಳಿಗೆ  ನವೆಂಬರ್ 30 ರಂದು ಮತದಾನ ನಡೆಯಲಿದೆ.

ತೆಲಂಗಾಣ: ಕಾಮರೆಡ್ಡಿಯಲ್ಲಿನ ಚುನಾವಣಾ ರ‍್ಯಾಲಿಯಲ್ಲಿ ಬೈಬೈ ಕೆಸಿಆರ್ ಎಂದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
ರಶ್ಮಿ ಕಲ್ಲಕಟ್ಟ

Updated on: Nov 27, 2023 | 8:39 PM

ಹೈದರಾಬಾದ್ ನವೆಂಬರ್ 27: ತೆಲಂಗಾಣದಲ್ಲಿ (Telangana) ಗುರುವಾರ  ಮತದಾನಕ ನಡೆಯಲಿದ್ದು, ಸೋಮವಾರ ನಡೆದ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrasekhar Rao) ಅವರನ್ನು ಕಾಂಗ್ರೆಸ್  ತರಾಟೆಗೆ ತೆಗೆದುಕೊಂಡಿದೆ. ರ‍್ಯಾಲಿಯಲ್ಲಿ ತಮ್ಮ ಪಕ್ಷದ ಮುಖ್ಯಸ್ಥ ಮೈಕ್ ನಲ್ಲಿ ಮಾತನಾಡುತ್ತಿದ್ದಾಗ ಅದೆರೆಡೆಗೆ ಬಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) “ಬೈ-ಬೈ, ಕೆಸಿಆರ್” ಎಂದು ಮೈಕ್​​​ನಲ್ಲಿ ಕೂಗಿದ್ದಾರೆ. ರಾಹುಲ್ ಗಾಂಧಿಯವರ ಈ ಮಾತು ಕೇಳಿ ಸಭಿಕರೆಲ್ಲರೂ ನಕ್ಕಿದ್ದಾರೆ. ಕೆಸಿಆರ್ ಎಂಬುದು ತೆಲಂಗಾಣ ಮುಖ್ಯಮಂತ್ರಿ ಮತ್ತು ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ ಚಂದ್ರಶೇಖರ್ ರಾವ್ ಅವರ ಜನಪ್ರಿಯ ಹೆಸರು, ಅವರು 2014 ರಲ್ಲಿ ರಚನೆಯಾದಾಗಿನಿಂದ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ. ಈಗ ಮೂರನೇ ಅವಧಿಗೆ ಅಧಿಕಾರಕ್ಕೇರಲು ಎದುರು ನೋಡುತ್ತಿದ್ದಾರೆ.

ಕಾಮರೆಡ್ಡಿಯಲ್ಲಿ ನಡೆದ ರ‍್ಯಾಲಿಯಲ್ಲಿ ತೆಲಂಗಾಣ ಕಾಂಗ್ರೆಸ್ ಘಟಕದ ಮುಖ್ಯಸ್ಥ ರೇವಂತ್ ರೆಡ್ಡಿ “ಬೈ-ಬೈ” ಎಂದು ಹೇಳಿ ಸಭಿಕರಿಗೆ ಧನ್ಯವಾದ ಹೇಳುತ್ತಿರುವಾಗ ಮೈಕ್‌ನತ್ತ ಬಂದ ರಾಹುಲ್ “ಬೈ-ಬೈ, ಕೆಸಿಆರ್” ಎಂದು ಹೇಳಿ ಸಭಿಕರತ್ತ ಕೈ ಬೀಸಿ ನಗುತ್ತಾ ಮುಂದೆ ಹೋಗುತ್ತಿರುವುದು ವಿಡಿಯೊದಲ್ಲಿದೆ.


ಕಾಮರೆಡ್ಡಿಯಲ್ಲಿ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ, ಕೆಸಿಆರ್ ಮತ್ತು ಬಿಜೆಪಿಯ ಕೆ ವೆಂಕಟರಮಣ ರೆಡ್ಡಿ ನಡುವೆ ತ್ರಿಕೋನ ಸ್ಪರ್ಧೆಯನ್ನು ನೋಡಲು ಸಿದ್ಧವಾಗಿದೆ. ಭಾನುವಾರ ರಾಜ್ಯದಲ್ಲಿ ನಡೆದ ಸರಣಿ ರ‍್ಯಾಲಿಗಳಲ್ಲಿ, ರಾಹುಲ್ ಗಾಂಧಿ ಬಿಆರ್‌ಎಸ್ ಮತ್ತು ಬಿಜೆಪಿ ಎರಡನ್ನೂ ಗುರಿಯಾಗಿಟ್ಟುಕೊಂಡು “ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ” ಎಂದು ಹೇಳಿದರು.

“ಇಂದು ತೆಲಂಗಾಣದಲ್ಲಿ ‘ದೊರಲ ಸರ್ಕಾರ’ ಮತ್ತು ‘ಪ್ರಜಾಲ ಸರ್ಕಾರ’ (ಜನರ ಸರ್ಕಾರ) ನಡುವೆ ಜಗಳ ನಡೆಯುತ್ತಿದೆ, ನಿಮ್ಮ ಮುಖ್ಯಮಂತ್ರಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ, ಪ್ರಶ್ನೆ ಕಾಂಗ್ರೆಸ್ ಏನು ಮಾಡಿದೆ ಎಂಬುದಲ್ಲ, ಕೆಸಿಆರ್ ಏನು ಮಾಡಿದ್ದಾರೆ ಎಂಬುದು ಪ್ರಶ್ನೆ ಎಂದು ಗಾಂಧಿ ಕೇಳಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಚುನಾವಣೆ ಗೆಲ್ಲಲಿದೆ ಎಂದು ಅವರು ಹೇಳಿದರು.

ಅಧಿಕಾರಕ್ಕೆ ಬಂದರೆ ಹಿಂದುಳಿದ ಜಾತಿಯ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂಬ ಚುನಾವಣಾ ಭರವಸೆಗಾಗಿ ಬಿಜೆಪಿಯನ್ನು ಲೇವಡಿ ಮಾಡಿದ ರಾಹುಲ್ ಗಾಂಧಿ, “ಸಹೋದರ, ನೀವು ಮೊದಲು ಎರಡು ಶೇಕಡಾ ಮತಗಳನ್ನು ಪಡೆದುಕೊಳ್ಳಿ ಮತ್ತು ನಂತರ (ಯಾರನ್ನಾದರೂ) ಮುಖ್ಯಮಂತ್ರಿ ಮಾಡುವ) ಬಗ್ಗೆ ಮಾತನಾಡಿ” ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಕಾಂಗ್ರೆಸ್ ನೀಡಿದ ಆರು ಭರವಸೆಗಳನ್ನು ಅನುಮೋದಿಸಲಾಗುವುದು ಎಂದು ರಾಹುಲ್ ಭರವಸೆ ನೀಡಿದರು. 2009 ರಲ್ಲಿ ಆಗಿನ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಅವರು ಪ್ರತ್ಯೇಕ ತೆಲಂಗಾಣ ರಚನೆಯನ್ನು ಘೋಷಿಸಿದ ದಿನವಾದ ಡಿಸೆಂಬರ್ 9 ರಂದು ತನ್ನ ಮುಖ್ಯಮಂತ್ರಿ ಮತ್ತು ಸಂಪುಟವು ಪ್ರಮಾಣವಚನ ಸ್ವೀಕರಿಸಲಿದೆ ಎಂದು ಕಾಂಗ್ರೆಸ್ ಹಲವಾರು ಸಂದರ್ಭಗಳಲ್ಲಿ ಹೇಳಿದೆ. ಅದೇ ದಿನ ಸೋನಿಯಾ ಗಾಂಧಿಯವರ ಹುಟ್ಟುಹಬ್ಬವೂ ಆಗಿದೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ

ಅರ್ಹ ಮಹಿಳೆಯರಿಗೆ ಮಾಸಿಕ ₹ 2,500, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ₹ 500ಕ್ಕೆ ಗ್ಯಾಸ್ ಸಿಲಿಂಡರ್, 200 ಯೂನಿಟ್ ಉಚಿತ ವಿದ್ಯುತ್, ರೈತರಿಗೆ 24 ಗಂಟೆ ವಿದ್ಯುತ್ ಮತ್ತು ಅರ್ಹ ಹಿರಿಯ ನಾಗರಿಕರಿಗೆ ₹ 4,000 ಮಾಸಿಕ ಪಿಂಚಣಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಇದೇ ರೀತಿಯ ಭರವಸೆಗಳು ಮೇ ತಿಂಗಳಲ್ಲಿ ನಿರ್ಣಾಯಕ ರಾಜ್ಯವಾದ ಕರ್ನಾಟಕದಲ್ಲಿ ಸಂಪೂರ್ಣ ಬಹುಮತವನ್ನು ಪಡೆಯುವುದನ್ನು ಖಚಿತಪಡಿಸಿಕೊಂಡಿದ್ದರಿಂದ ಖಾತರಿಗಳನ್ನು ನೀಡುವುದು ಕಾಂಗ್ರೆಸ್‌ನ ಕಾರ್ಯತಂತ್ರವಾಗಿದೆ.

ರಾವ್ ಮತ್ತು BRS ನ ಇತರ ನಾಯಕರು ಕಾಂಗ್ರೆಸ್ ಭರವಸೆಗಳನ್ನು ಲೇವಡಿ ಮಾಡಿದ್ದಾರೆ. ತೆಲಂಗಾಣದಲ್ಲಿ ಜನರ ಕಣ್ಣಿಗೆ ಮಣ್ಣೆರೆಚಲು ಪಕ್ಷವು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಭರವಸೆಗಳನ್ನು ಸರಿಯಾಗಿ ಜಾರಿಗೊಳಿಸಿಲ್ಲ. ತೆಲಂಗಾಣದಲ್ಲೂ ಅದೇ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ತೆಲಂಗಾಣದ 119 ಸ್ಥಾನಗಳಿಗೆ  ನವೆಂಬರ್ 30 ರಂದು ಮತದಾನ ನಡೆಯಲಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us