
ಭಾರತೀಯ ರೈಲ್ವೆಯು ಅಗ್ನಿವೀರರು ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮಾಜಿ ಸೈನಿಕರಿಗೆ ಮಹತ್ವದ ಉಡುಗೊರೆಯನ್ನು ಘೋಷಿಸಿದೆ. ಇನ್ನು ಮುಂದೆ ಅಗ್ನಿವೀರರು ಮತ್ತು ನಿವೃತ್ತ ಸೈನಿಕರು ರೈಲ್ವೆ ನೇಮಕಾತಿಯಲ್ಲಿ ವಿಶೇಷ ಮೀಸಲಾತಿ ಪಡೆಯಲಿದ್ದಾರೆ. ಈ ಕುರಿತು ಭಾರತೀಯ ರೈಲ್ವೆ ಮತ್ತು ಭಾರತೀಯ ಸೇನೆಯ ನಡುವೆ ಸಹಕಾರ ಚೌಕಟ್ಟು ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಈ ಒಪ್ಪಂದದ ಮೂಲಕ ಅಗ್ನಿಪಥ ಯೋಜನೆಯಡಿ ಸೇವೆ ಸಲ್ಲಿಸಿ ನಿವೃತ್ತರಾಗುವ ಅಗ್ನಿವೀರರು ಹಾಗೂ ಮಾಜಿ ಸೈನಿಕರಿಗೆ ರೈಲ್ವೆ ಉದ್ಯೋಗಗಳಲ್ಲಿ ಅವಕಾಶ ಕಲ್ಪಿಸುವ ವ್ಯವಸ್ಥೆ ರೂಪುಗೊಳ್ಳಲಿದೆ.
ರೈಲ್ವೆ ನೇಮಕಾತಿಯಲ್ಲಿ ಹಂತ-1 ಹುದ್ದೆಗಳಿಗೆ ಮಾಜಿ ಸೈನಿಕರಿಗೆ ಶೇಕಡಾ 20 ರಷ್ಟು ಮತ್ತು ನಿವೃತ್ತ ಅಗ್ನಿವೀರರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡಲಾಗುತ್ತದೆ. ಲೆವೆಲ್-2 ಮತ್ತು ಅದಕ್ಕಿಂತ ಮೇಲಿನ ಹುದ್ದೆಗಳಲ್ಲಿ ಮಾಜಿ ಸೈನಿಕರಿಗೆ ಶೇಕಡಾ 10 ರಷ್ಟು ಹಾಗೂ ಅಗ್ನಿವೀರರಿಗೆ ಶೇಕಡಾ 5 ರಷ್ಟು ಮೀಸಲಾತಿ ಒದಗಿಸಲಾಗುತ್ತದೆ. ಈ ಕ್ರಮವು ದೇಶ ಸೇವೆ ಮಾಡಿದ ಯೋಧರಿಗೆ ನಾಗರಿಕ ಉದ್ಯೋಗದಲ್ಲಿ ಭದ್ರ ಭವಿಷ್ಯ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್ನ್ಯೂಸ್; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ
ಇದೇ ವೇಳೆ, ಭಾರತೀಯ ರೈಲ್ವೆ ಶೀಘ್ರದಲ್ಲೇ 5,000ಕ್ಕೂ ಹೆಚ್ಚು ಪಾಯಿಂಟ್ಸ್ಮನ್ ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆ ನಡೆಸಿದೆ. ಈ ಹುದ್ದೆಗಳನ್ನು ಪ್ರಮುಖವಾಗಿ ನಿವೃತ್ತ ಅಗ್ನಿವೀರರು ಮತ್ತು ಮಾಜಿ ಸೈನಿಕರಿಂದಲೇ ಭರ್ತಿ ಮಾಡಲು ನಿರ್ಧರಿಸಲಾಗಿದೆ. ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು, ರೈಲ್ವೆಯ ಒಂಬತ್ತು ವಲಯಗಳು ಭಾರತೀಯ ಸೇನೆಯೊಂದಿಗೆ ಈಗಾಗಲೇ ಸಮನ್ವಯ ಸಾಧಿಸಿವೆ.
ಅಗ್ನಿಪಥ ಯೋಜನೆ 2022ರಲ್ಲಿ ಪ್ರಾರಂಭವಾಗಿದ್ದು, ಅಗ್ನಿವೀರರು ನಾಲ್ಕು ವರ್ಷಗಳ ಸೇವೆಯ ನಂತರ ನಿವೃತ್ತರಾಗುತ್ತಾರೆ. ಮೊದಲ ಬ್ಯಾಚ್ 2026ರ ಅಂತ್ಯದ ವೇಳೆಗೆ ನಿವೃತ್ತಿಯಾಗಲಿದ್ದು, ಅವರ ಪುನರ್ ನೇಮಕಾತಿಗಾಗಿ ಈ ಯೋಜನೆ ಮಹತ್ವದ ಅವಕಾಶಗಳನ್ನು ಒದಗಿಸಲಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ