ಕಂಗನಾ ರಣಾವತ್​ಗೆ ಒಲಿಯದ ರಾಷ್ಟ್ರ ಪ್ರಶಸ್ತಿ; ನಟಿಯ ಪ್ರತಿಕ್ರಿಯೆ ಏನು?

ತಮಿಳುನಾಡಿನ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದ ಜಯಲಲಿತಾ ಅವರ ಜೀವನ ಆಧರಿಸಿ ‘ತಲೈವಿ’ ಸಿನಿಮಾ ಸಿದ್ಧಗೊಂಡಿತ್ತು. ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಚಿತ್ರದ ನಟನೆಗೆ ಕಂಗನಾಗೆ ರಾಷ್ಟ್ರಪ್ರಶಸ್ತಿ ಸಿಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ.

ಕಂಗನಾ ರಣಾವತ್​ಗೆ ಒಲಿಯದ ರಾಷ್ಟ್ರ ಪ್ರಶಸ್ತಿ; ನಟಿಯ ಪ್ರತಿಕ್ರಿಯೆ ಏನು?
ಕಂಗನಾ

Updated on: Aug 25, 2023 | 7:44 AM

69ನೇ ಸಾಲಿನ ರಾಷ್ಟ್ರ ಪ್ರಶಸ್ತಿ ವಿಜೇತರ ಹೆಸರನ್ನು ಆಗಸ್ಟ್ 24ರಂದು ಘೋಷಣೆ ಮಾಡಲಾಯಿತು. ಅಲ್ಲು ಅರ್ಜುನ್ ಅತ್ಯುತ್ತಮ ನಟ (ಪುಷ್ಪ), ಆಲಿಯಾ ಭಟ್ ಅತ್ಯುತ್ತಮ ನಟಿ (ಗಂಗೂಬಾಯಿ ಕಾಠಿಯಾವಾಡಿ) ಪ್ರಶಸ್ತಿ ಬಾಚಿಕೊಂಡಿದ್ದಾರೆ. ಕನ್ನಡಕ್ಕೆ ಮೂರು ಪ್ರಶಸ್ತಿ ಸಿಕ್ಕಿದೆ. ‘ಆರ್​ಆರ್​ಆರ್’ (RRR Movie) ಚಿತ್ರಕ್ಕೆ ಆರು ಪ್ರಶಸ್ತಿಗಳು ಲಭಿಸಿವೆ. ಆದರೆ, ಕಂಗನಾ (Kangana Ranaut) ನಟನೆಯ ‘ತಲೈವಿ’ ಸಿನಿಮಾ ಯಾವುದೇ ಪ್ರಶಸ್ತಿ ಪಡೆದುಕೊಂಡಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ. ಆದರೆ, ಈ ತೀರ್ಪನ್ನು ಅವರು ಒಪ್ಪಿಕೊಂಡಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದ ಜಯಲಲಿತಾ ಅವರ ಜೀವನ ಆಧರಿಸಿ ‘ತಲೈವಿ’ ಸಿನಿಮಾ ಸಿದ್ಧಗೊಂಡಿತ್ತು. ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಚಿತ್ರದಲ್ಲಿ ಜಯಲಲಿತಾ ಸಿನಿ ಬದುಕಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಚಿತ್ರದ ನಟನೆಗೆ ಕಂಗನಾಗೆ ರಾಷ್ಟ್ರಪ್ರಶಸ್ತಿ ಸಿಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಈ ಬಗ್ಗೆ ಕಂಗನಾ ಪ್ರತಿಕ್ರಿಯಿಸಿದ್ದಾರೆ.

‘ಎಲ್ಲಾ ನ್ಯಾಷನಲ್ ಅವಾರ್ಡ್​ ವಿಜೇತರಿಗೆ ಅಭಿನಂದನೆಗಳು. ದೇಶದಾದ್ಯಂತ ಇರುವ ಎಲ್ಲಾ ಕಲಾವಿದರನ್ನು ಒಟ್ಟುಗೂಡಿಸುವ ಅವಾರ್ಡ್ ಇದಾಗಿದೆ’ ಎಂದು ಕಂಗನಾ ಬರಹ ಆರಂಭಿಸಿದ್ದಾರೆ. ‘ನನ್ನ ತಲೈವಿ ಚಿತ್ರ ಯಾವ ಪಶಸ್ತಿಯನ್ನೂ ಗೆಲ್ಲಲಿಲ್ಲ ಎಂದು ಕೆಲವರು ನಿರಾಶೆಗೊಂಡಿರಬಹುದು. ಆದರೆ, ಕೃಷ್ಣ ನನಗೆ ಏನೇ ಕೊಟ್ಟರು ಮತ್ತು ಕೊಡದಿದ್ದರೂ ನಾನು ಚಿರಋಣಿಯಾಗಿದ್ದೇನೆ. ನನ್ನನ್ನು ನಿಜವಾಗಿಯೂ ಪ್ರೀತಿಸುವ ಮತ್ತು ಮೆಚ್ಚುವ ನೀವೆಲ್ಲರೂ ನನ್ನ ದೃಷ್ಟಿಕೋನವನ್ನು ಮೆಚ್ಚಬೇಕು. ಕಲೆಯು ವ್ಯಕ್ತಿನಿಷ್ಠವಾಗಿದೆ. ತೀರ್ಪುಗಾರರು ತಮ್ಮ ಕೈಲಾದಷ್ಟು ಮಾಡಿದ್ದಾರೆ’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಆಲಿಯಾ ಭಟ್ ಅವರನ್ನು ಕಂಡರೆ ಕಂಗನಾಗೆ ಎಲ್ಲಿಲ್ಲದ ದ್ವೇಷ. ಅವರ ಬಗ್ಗೆ ಸದಾ ಟೀಕೆ ಮಾಡುತ್ತಲೇ ಇರುತ್ತಾರೆ. ಆಲಿಯಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದರಿಂದ ಸಹಜವಾಗಿಯೇ ಕಂಗನಾಗೆ ಬೇಸರ ಆಗಿರಬಹುದು ಎಂದು ಎಲ್ಲರೂ ಭಾವಿಸಿದ್ದಾರೆ.

ಇದನ್ನೂ ಓದಿ: ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್​; ಆಲಿಯಾ ಭಟ್​, ಕೃತಿ ಸನೋನ್​ಗೆ ‘ಅತ್ಯುತ್ತಮ ನಟಿ’ ಅವಾರ್ಡ್​

ಕಂಗನಾ ಅವರು ‘ಎಮರ್ಜೆನ್ಸಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ನಿರ್ದೇಶನದ ಜವಾಬ್ದಾರಿಯೂ ಅವರಿಗೇ ಸಿಕ್ಕಿದೆ. ಕಂಗನಾ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಗಿ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us