ಆದಿಪುರುಷ್ ಸಿನಿಮಾ ಬಗ್ಗೆ ಚತ್ತೀಸ್​ಘಡ ಸಿಎಂ ಆಕ್ಷೇಪ, ಜನರು ಬಯಸಿದರೆ ಬ್ಯಾನ್

|

Updated on: Jun 17, 2023 | 8:00 PM

Adipurush Ban: ಚತ್ತೀಸ್​ಘಡ ರಾಜ್ಯದ ಸಿಎಂ ಭೂಪೇಷ ಭಗೇಲ ಆದಿಪುರುಷ್ ಸಿನಿಮಾದ ವಿರುದ್ಧ ಹರಿಹಾಯ್ದಿದ್ದು, ಜನ ಒತ್ತಾಯಿಸಿದರೆ ರಾಜ್ಯದಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲು ಹಿಂಜರಿಯಲ್ಲ ಎಂದಿದ್ದಾರೆ.

ಆದಿಪುರುಷ್ ಸಿನಿಮಾ ಬಗ್ಗೆ ಚತ್ತೀಸ್​ಘಡ ಸಿಎಂ ಆಕ್ಷೇಪ, ಜನರು ಬಯಸಿದರೆ ಬ್ಯಾನ್
ಚತ್ತೀಸ್​ಘಡ ಸಿಎಂ ಭೂಪೇಷ್
Follow us on

ಆದಿಪುರುಷ್ (Adipurush) ಸಿನಿಮಾದ ಸಂಕಷ್ಟಗಳು ಅಂತ್ಯವಾಗುತ್ತಲೇ ಇಲ್ಲ, ಬದಲಿಗೆ ದಿನಕ್ಕೊಂದು ಹೊಸ ಸಂಕಷ್ಟಗಳು ಪೋಣಿಸಿಕೊಳ್ಳುತ್ತಲೇ ಸಾಗುತ್ತಿವೆ. ಸಿನಿಮಾ ಬಿಡುಗಡೆ ಆದ ಬೆನ್ನಲ್ಲೆ ಹಲವರು ಸಿನಿಮಾದಲ್ಲಿ ಬಳಸಲಾಗಿರುವ ವಿಎಫ್​ಎಕ್ಸ್ (VFX) ಗುಣಮಟ್ಟವನ್ನು ಟೀಕಿಸಿದ್ದಾರೆ. ಶ್ರೀರಾಮ, ರಾವಣ ಇನ್ನಿತರೆ ಪಾತ್ರಗಳ ವಸ್ತ್ರ ವಿನ್ಯಾಸ, ಪಾತ್ರಗಳ ಮೂಲ ವ್ಯಕ್ತಿತ್ವವನ್ನು ತಿರುಚಿರುವ ರೀತಿಯ ಬಗ್ಗೆ ಆಕ್ಷೇಪಿಸಿದ್ದಾರೆ. ನಿನ್ನೆಯಷ್ಟೆ ಹಿಂದೂ ಸೇನಾ ಸಂಘಟನೆಯು ದೆಹಲಿ ಹೈಕೋರ್ಟ್​ಗೆ ಆದಿಪುರುಷ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಈ ಸಿನಿಮಾವು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದಿದೆ. ಇದರ ಬೆನ್ನಲ್ಲೆ ಇದೀಗ ಚತ್ತೀಸ್​ಘಡ ಸಿಎಂ ಸಹ ಸಿನಿಮಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ರಾಜ್ಯದಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲು ಸಿದ್ಧ ಎಂದಿದ್ದಾರೆ.

ಆದಿಪುರುಷ್ ಸಿನಿಮಾ ಕುರಿತಂತೆ ಮಾತನಾಡಿರುವ ಚತ್ತೀಸ್​ಘಡ ಸಿಎಂ ಭೂಪೇಶ್ ಭಗೇಲ, ”ನಮ್ಮ ಆರಾಧ್ಯ ದೈವಗಳ ಚಿತ್ರಣವನ್ನೇ ಬದಲು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಶ್ರೀರಾಮ ಹಾಗೂ ಹನುಮಂತ ಅವರ ಮೂಲ ಭಾವ ಭಕ್ತಿ, ಸೌಮ್ಯತೆ ಆದರೆ ಶ್ರೀರಾಮರನ್ನು ಯೋಧನನ್ನಾಗಿ, ಹನುಮಂತನನ್ನು ಆಂಗ್ರಿ ಬರ್ಡ್​ ರೀತಿಯಲ್ಲಿ ಆದಿಪುರುಷ್ ಸಿನಿಮಾದಲ್ಲಿ ತೋರಿಸಲಾಗಿದೆ” ಎಂದಿರುವ ಸಿಎಂ, ಸಿನಿಮಾದಲ್ಲಿ ಬಳಸಲಾಗಿರುವ ಭಾಷೆಯ ಬಗ್ಗೆಯೂ ಆಕ್ಷೇಪಣೆ ಎತ್ತಿದ್ದಾರೆ.

”ಹನುಮಂತನ ಪಾತ್ರದ ಮೂಲಕ ಹೇಳಿಸಿರುವ ಸಂಭಾಷಣೆಗಳು ಗೌರವಪೂರ್ವಕವಾಗಿಲ್ಲ. ಅಲ್ಲದೆ ಅರಬಿ, ಪಾರ್ಸಿ ಶಬ್ದಗಳ ಬಳಕೆಯನ್ನೂ ಸಹ ಕೆಲವು ಸಂಭಾಷಣೆಗಳಲ್ಲಿ ಮಾಡಲಾಗಿದೆ. ಈಗಿನ ಕಾಲದ ಮಕ್ಕಳು ಈ ಸಿನಿಮಾ ನೋಡಿದರೆ ರಾಮಾಯಣದ ಕುರಿತಂತೆ ಅವರಿಗೆ ಯಾವ ರೀತಿಯ ಅಭಿಪ್ರಾಯ ಮೂಡಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಸಿಎಂ ಭೂಪೇಶ್ ಭಗೇಲ.

ಇದನ್ನೂ ಓದಿ:ಕೆಜಿಎಫ್ 2 ದಾಖಲೆ ಮುರಿಯಿತೇ ಆದಿಪುರುಷ್: ಕರ್ನಾಟಕದಲ್ಲಿ ಆದ ಕಲೆಕ್ಷನ್ ಎಷ್ಟು?

ರಾಜೀವ್ ಗಾಂಧಿ ಅವರು ರಮಾನಂದ ಸಾಗರ್ ಅವರ ಮೂಲಕ ರಾಮಾಯಣ ಮಾಡಿಸಿದ್ದರು. ಅವರು ಅದ್ಭುತವಾಗಿ ರಾಮಾಯಣವನ್ನು ಧಾರಾವಾಹಿಯಾಗಿ ಪ್ರಸ್ತುತ ಪಡಿಸಿದ್ದರು. ಧಾರಾವಾಹಿ ಪ್ರಸಾರ ಆಗುವ ವೇಳೆಗೆ ಭಾರತದ ರಸ್ತೆಗಳು ಖಾಲಿ ಆಗಿಬಿಡುತ್ತಿದ್ದವು ಎಂದಿರುವ ಸಿಎಂ, ಮಾತು ಮಾತಿಗೆ ಸಿನಿಮಾಗಳನ್ನು ಬ್ಯಾನ್ ಮಾಡುತ್ತಿದ್ದ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತಿದ್ದ ಸಂಘಟನೆಗಳೆಲ್ಲ ಈಗ ಎಲ್ಲಿ ಅಡಗಿವೆ ಎಂದು ಅವರು ಪ್ರಶ್ನಿಸಿದ್ದಾರೆ.

ಚತ್ತೀಸ್​ಘಡದಲ್ಲಿ ಆದಿಪುರುಷ್ ಸಿನಿಮಾ ಬ್ಯಾನ್ ಆಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಭೂಪೇಶ್ ಭಗೇಲ, ಜನ ಈಗ ಸಿನಿಮಾ ನೋಡುತ್ತಿದ್ದಾರೆ. ಒಂದೊಮ್ಮೆ ಜನರಿಂದ ಬೇಡಿಕೆ ಬಂದರೆ ಖಂಡಿತ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಆದಿಪುರುಷ್ ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ. ಶಿವಭಕ್ತ ರಾವಣನನ್ನು ಮಹಾ ದುರುಳನಂತೆ ಚಿತ್ರಿಸಿರುವುದಾಗಿರಲಿ, ಹನುಮಂತನ ಸಂಭಾಷಣೆ ಕುರಿತಾಗಿರಲಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಮಾಯಣದ ಕೆಲವು ಪಾತ್ರಗಳನ್ನು ಕೈಬಿಟ್ಟಿರುವ ಕುರಿತಂತೆಯೂ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಈಗಾಗಲೇ ಕೆಲವು ಕಡೆ ಸಿನಿಮಾದ ವಿರುದ್ಧ ದೂರುಗಳು ದಾಖಲಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ