Darshan: ದರ್ಶನ್​ ಹೇಳಿದ ಒಂದೇ ಮಾತಿಗೆ 6 ದಿನದಲ್ಲಿ ಹರಿದು ಬಂತು 1 ಕೋಟಿ ರೂ.! ಯಾವ ಮೃಗಾಲಯಕ್ಕೆ ಎಷ್ಟು ಲಕ್ಷ?

ಮೃಗಾಲಯಗಳಿಗೆ ನೆರವು ನೀಡಲು ದರ್ಶನ್​ ಅವರು ಮಾಡಿದ ಮನವಿಗೆ ಅದ್ಭುತ ಸ್ಪಂದನೆ ಸಿಕ್ಕಿದೆ. ಕರ್ನಾಟಕದ ಎಲ್ಲ 9 ಮೃಗಾಲಯಗಳಿಗೂ ದೇಣಿಗೆ ಹರಿದು ಬಂದಿದೆ.

Darshan: ದರ್ಶನ್​ ಹೇಳಿದ ಒಂದೇ ಮಾತಿಗೆ 6 ದಿನದಲ್ಲಿ ಹರಿದು ಬಂತು 1 ಕೋಟಿ ರೂ.! ಯಾವ ಮೃಗಾಲಯಕ್ಕೆ ಎಷ್ಟು ಲಕ್ಷ?
ಮೃಗಾಲಯಕ್ಕೆ ನೆರವಾಗಲು ದರ್ಶನ್​ ನೀಡಿದ ಕರೆಗೆ ಉತ್ತಮ ಸ್ಪಂದನೆ

Updated on: Jun 11, 2021 | 9:42 AM

ನಟ ದರ್ಶನ್​ ಅವರ ಪ್ರಾಣಿಪ್ರೀತಿಯ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ಲಾಕ್​ಡೌನ್​ ಕಾರಣದಿಂದ ಮೃಗಾಲಯಗಳ ಪ್ರಾಣಿ-ಪಕ್ಷಿಗಳಿಗೆ ಸಂಕಷ್ಟ ಎದುರಾಗಿತ್ತು. ಪ್ರವಾಸಿಗರು ಬಾರದೇ ಇರುವುದರಿಂದ ಹಣ ಸಂಗ್ರಹ ಆಗುತ್ತಿರಲಿಲ್ಲ. ಆದ್ದರಿಂದ ಪ್ರಾಣಿಗಳ ದಿನನಿತ್ಯದ ಆಹಾರ ಮತ್ತು ನಿರ್ವಹಣೆಗೆ ತೊಂದರೆ ಆಗುತ್ತಿದೆ ಎಂಬುದನ್ನು ಗಮನಿಸಿದ ನಟ ದರ್ಶನ್​ ಅವರು ತಮ್ಮ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದರು. ಕೈಲಾದಷ್ಟು ಸಹಾಯ ಮಾಡಿ, ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದರು. ಅವರ ಮಾತಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಒಂದು ವಾರದಲ್ಲಿ ಬರೋಬ್ಬರಿ 1 ಕೋಟಿ ರೂ. ಸಂಗ್ರಹ ಆಗಿದೆ.

‘ಚಾಲೆಂಜಿಂಗ್​ ಸ್ಟಾರ್’ ಅವರ ಅಭಿಮಾನಿ ಬಳಗ ದೊಡ್ಡದು. ಅವರು ಏನೇ ಹೇಳಿದರೂ ಜನರು ಗೌರವದಿಂದ ಪಾಲಿಸುತ್ತಾರೆ. ಮೃಗಾಲಯಗಳಿಗೆ ನೆರವು ನೀಡಲು ಅವರು ಮಾಡಿದ ಮನವಿಗೆ ಅದ್ಭುತ ಸ್ಪಂದನೆ ಸಿಕ್ಕಿದೆ ಕರ್ನಾಟಕದ ಎಲ್ಲ 9 ಮೃಗಾಲಯಗಳಿಗೂ ದೇಣಿಗೆ ಹರಿದು ಬಂದಿದೆ. ಎಲ್ಲ ಸೇರಿದರೆ ಕೇವಲ ಆರು ದಿನಗಳಲ್ಲಿ ಒಂದು ಕೋಟಿ ರೂ. ಸಂಗ್ರಹ ಆಗಿದೆ. ಇನ್ನೂ ಕೂಡ ದೇಣಿಗೆ ಹರಿದುಬರುತ್ತಿರುವುದು ಖುಷಿಯ ವಿಚಾರ.

ಈ ಬಗ್ಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರವೇ ಅಧಿಕೃತವಾಗಿ ಟ್ವಿಟರ್​ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದೆ. ಅಲ್ಲದೆ, ಇದಕ್ಕೆ ಕಾರಣರಾದ ದರ್ಶನ್​ ಅವರಿಗೆ ಧನ್ಯವಾದ ತಿಳಿಸಲಾಗಿದೆ. ಯಾವ ಮೃಗಾಲಯಕ್ಕೆ ಎಷ್ಟು ಹಣ ಬಂದಿದೆ ಎಂಬುದರ ವಿವರವನ್ನೂ ನೀಡಲಾಗಿದೆ.

ಮೈಸೂರು: 51,75,700

ಬನ್ನೇರುಘಟ್ಟ: 29,83,000

ಶಿವಮೊಗ್ಗ: 7,24,800

ಗದಗ: 2,66,400

ಹಂಪಿ: 2,42,200

ಬೆಳಗಾವಿ: 2,22,300

ದಾವಣಗೆರೆ: 1,94,900

ಚಿತ್ರದುರ್ಗ: 1,49,300

ಕಲಬುರಗಿ: 89,300

ಒಟ್ಟು: 1,00,47,900

ದರ್ಶನ್​ ಅಭಿಮಾನಿಗಳು ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು ಕೂಡ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ಇತ್ತೀಚೆಗೆ ಉಪೇಂದ್ರ ಅವರು ಒಂದು ಆಫ್ರಿಕನ್​ ಆನೆಯನ್ನು ದತ್ತು ಪಡೆದು ಎಲ್ಲರಿಗೂ ಮಾದರಿ ಆಗಿದ್ದಾರೆ. ಅವರಿಗೆ ದರ್ಶನ್​ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ:

ದರ್ಶನ್​ ಮನವಿಗೆ ಓಗೊಟ್ಟು ಆನೆ ದತ್ತು ಪಡೆದ ಉಪೇಂದ್ರ; ಒಂದು ವರ್ಷಕ್ಕೆ ಆಗುವ ಖರ್ಚು ಎಷ್ಟು?

Darshan: ದರ್ಶನ್​ ಕೊಟ್ಟ ಆ ಒಂದು ಕರೆಗೆ ಅಭಿಮಾನಿಗಳಿಂದ ಬಂತು ಅಭೂತಪೂರ್ವ ಪ್ರತಿಕ್ರಿಯೆ; ಸಾಕ್ಷಿ ತೋರಿಸಿದ ಡಿ ಬಾಸ್

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us