ಮೈಸೂರು ಘಟನೆ ಬಗ್ಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ: ‘ಅಲ್ಲಿ ನಡೆದಿದ್ದು ಬೇರೆ, ಆದರೆ ಆತ ಮಾಡಿದ್ದು ಅಕ್ಷಮ್ಯ’

|

Updated on: Aug 29, 2023 | 7:38 PM

Toby: 'ಟೋಬಿ' ಸಿನಿಮಾ ಚೆನ್ನಾಗಿಲ್ಲ ಎಂದ ಯುವತಿಯನ್ನು ಯುವಕನೊಬ್ಬ ಅವಾಚ್ಯ ಶಬ್ದಗಳಂದ ನಿಂದಿಸಿದ ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜ್ ಬಿ ಶೆಟ್ಟಿ, ಆ ಘಟನೆ ನಡೆಯಬಾರದಿತ್ತು, ಆ ಬಗ್ಗೆ ಕ್ಷಮೆ ಕೇಳಿದ್ದೇನೆ. ಆದರೆ ಆ ಘಟನೆಯನ್ನು ಒಂದು ಕೋನದಲ್ಲಿ ಅಷ್ಟೆ ತೋರಿಸಲಾಗುತ್ತಿದೆ ಎಂದಿದ್ದಾರೆ.

ಮೈಸೂರು ಘಟನೆ ಬಗ್ಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ: ಅಲ್ಲಿ ನಡೆದಿದ್ದು ಬೇರೆ, ಆದರೆ ಆತ ಮಾಡಿದ್ದು ಅಕ್ಷಮ್ಯ
'ಟೋಬಿ' ಸಿನಿಮಾ
Follow us on

ರಾಜ್ ಬಿ ಶೆಟ್ಟಿ (Raj B Shetty) ನಟಿಸಿ, ನಿರ್ದೇಶನ ಮಾಡಿರುವ ‘ಟೋಬಿ‘ (Toby) ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಶೆಟ್ಟರ ಹೊಸ ಪ್ರಯತ್ನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಆದರೆ ಸಿನಿಮಾ ಬಿಡುಗಡೆ ಆದ ದಿನ ಮೈಸೂರಿನಲ್ಲಿ ನಡೆದ ಘಟನೆ ಚರ್ಚೆಗೆ ಕಾರಣವಾಗಿದೆ. ಸಿನಿಮಾ ಚೆನ್ನಾಗಿಲ್ಲವೆಂದ ಯುವತಿಯನ್ನು ಯುವಕನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಘಟನೆ ಬಗ್ಗೆ ರಾಜ್ ಬಿ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಈಗಾಗಲೇ ಕ್ಷಮೆ ಕೋರಿದ್ದಾರೆ. ಅದರ ಜೊತೆಗೆ ಕೆಲ ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೈಸೂರಿನಲ್ಲಿ ಅಂದು ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.

”ಘಟನೆ ಬಗ್ಗೆ ನಾನು ಈಗಾಗಲೇ ಕ್ಷಮೆ ಕೋರಿದ್ದೇನೆ. ಅವರು ಕೇವಲ ಸಿನಿಮಾ ರಿವ್ಯೂ ಕೊಟ್ಟಿದ್ದಲ್ಲ, ಚಿತ್ರಮಂದಿರದ ಮೆಟ್ಟಿಲ ಮೇಲೆ ನಿಂತು, ಯಾರೂ ಸಿನಿಮಾಕ್ಕೆ ಹೋಗಬೇಡಿ ಎಂದು ಕೂಗಿದ್ದಾರೆ. ಆದರೆ ಯಾರೂ ಸಹ ಅಥವಾ ಮೀಡಿಯಾ ಸಹ ಒಂದು ಕೋನದಿಂದ ಅಷ್ಟೆ ಘಟನೆಯನ್ನು ನೋಡುತ್ತಿದೆ. ಎಲ್ಲವೂ ಒಂದು ರೀತಿ ಪೂರ್ವ ನಿರ್ಧಾರಿತವಾ ಎಂಬ ಅನುಮಾನ ಬರುವಂತಿದೆ. ಏನೇ ಆದರೂ ಅಂದು ಅಲ್ಲಿ ನಡೆದಿದ್ದು ತಪ್ಪು. ಸಿನಿಮಾ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಸಿನಿಮಾಕ್ಕೆ ಯಾರೂ ಹೋಗಬೇಡಿ, ಯಾರೂ ಟಿಕೆಟ್ ತೆಗೆದುಕೊಳ್ಳಬೇಡಿ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಯಾವುದೋ ಹೋಟೆಲ್​ನಲ್ಲಿ ಊಟ ಹಿಡಿಸಲಿಲ್ಲವೆಂದು ಹೋಟೆಲ್ ಬಾಗಿಲಲ್ಲಿ ನಿಂತು ಯಾರು ಹೋಗಬೇಡಿ ಎಂದು ಕೂಗಿದರೆ ಅದು ಸರಿಯೇ? ಎಂದು ಪ್ರಶ್ನೆ ಮಾಡಿದ್ದಾರೆ ರಾಜ್ ಬಿ ಶೆಟ್ಟಿ.

ಇದನ್ನೂ ಓದಿ:ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ನನ್ನ ಸ್ನೇಹಿತರಲ್ಲ ಹಿಂಗ್ಯಾಕಂದ್ರು ರಾಜ್ ಬಿ ಶೆಟ್ಟಿ?

”ಏನೇ ಇರಲಿ, ಆ ಹುಡುಗ ಮಾಡಿರುವುದು ತಪ್ಪು. ಆ ಬಗ್ಗೆ ನಾನು ಈಗಾಗಲೇ ಕ್ಷಮೆ ಕೋರಿದ್ದೀನಿ. ಆ ಹುಡುಗ ನಮ್ಮ ಸಿನಿಮಾದ ಟೀಂಗೆ ಸಂಬಂಧಿಸಿದವನಲ್ಲ. ಈಗ ಕೆಲವರು ಹೇಳುತ್ತಿದ್ದಾರೆ, ಆ ಘಟನೆಗೆ ಸಂಬಂಧಿಸಿದಂತೆ ಸಿನಿಮಾ ತಂಡ ಏನಾದರೂ ಕ್ರಮ ಕೈಗೊಳ್ಳಬೇಕಿತ್ತು ಎಂದು. ಇದೇ ಥರ ಹತ್ತು ಘಟನೆಗಳು ನಡೆದರೆ ಚಿತ್ರತಂಡ ಅವರುಗಳ ಮೇಲೆ ಕೇಸ್ ಹಾಕುವ ಕಡೆ ಗಮನಹರಿಸುತ್ತಿರಬೇಕಾ ಅಥವಾ ಹಣ ಹಾಕಿರುವ ನಿರ್ಮಾಪಕರನ್ನು ಬದುಕಿಸುವ ಕೆಲಸದಲ್ಲಿ ನಿರತವಾಗಿರಬೇಕಾ? ವೈಯಕ್ತಿಕವಾಗಿ ಆ ಘಟನೆ ಬೇಸರ ತಂದಿದೆ, ಕಠಿಣಾತಿಕಠಿಣ ಶಬ್ದಗಳಿಂದ ಅದನ್ನು ನಿಂದಿಸುತ್ತೇನೆ” ಎಂದಿದ್ದಾರೆ ರಾಜ್.

‘ಟೋಬಿ’ ಸಿನಿಮಾ ಕಳೆದ ಶುಕ್ರವಾರ ತೆರೆಗೆ ಬಂದಿದೆ. ಸಿನಿಮಾದಲ್ಲಿ ಮೂಗ ವ್ಯಕ್ತಿಯಾಗಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಸಿನಿಮಾದ ಕತೆಯನ್ನು ಟಿಕೆ ದಯಾನಂದ ಬರೆದಿದ್ದಾರೆ, ಚಿತ್ರಕತೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ಸಂಗೀತ ಮಿದುನ್ ಮುಕುಂದನ್ ಅವರದ್ದು, ನಿರ್ದೇಶನ ಮಾಡಿರುವುದು ಬಾಸಿಲ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ