Sandeshkhali: ಸಂದೇಶ್​ಖಾಲಿ ದೌರ್ಜನ್ಯ ಪ್ರಕರಣ ಆಧರಿಸಿ ಸಿದ್ಧವಾಗಲಿದೆ ಸಿನಿಮಾ

ತಮ್ಮ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಪಶ್ಚಿಮ ಬಂಗಾಳದ ಹಲವು ಮಹಿಳೆಯರು ಸಿಡಿದೆದ್ದಿದ್ದಾರೆ. ಸಂದೇಶ್​ಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್​ನ ಮುಖಂಡ ಶಹಜಹಾನ್​ ಶೇಖ್​ ನಡೆಸಿದ ಅಕ್ರಮಗಳನ್ನು ಬಯಲಿಗೆ ಎಳೆಯಲಾಗುತ್ತಿದೆ. ಈ ನೈಜ ಘಟನೆಯನ್ನು ಆಧರಿಸಿ ಸಿನಿಮಾ ಸಿದ್ಧವಾಗಲಿದೆ. ಈ ಸಿನಿಮಾದಲ್ಲಿ ಹಲವು ಕರಾಳ ಸತ್ಯಗಳು ಬಹಿರಂಗ ಆಗಲಿವೆ.

Sandeshkhali: ಸಂದೇಶ್​ಖಾಲಿ ದೌರ್ಜನ್ಯ ಪ್ರಕರಣ ಆಧರಿಸಿ ಸಿದ್ಧವಾಗಲಿದೆ ಸಿನಿಮಾ
ಸಂದೇಶ್​ಖಾಲಿ ಸಿನಿಮಾ ಪೋಸ್ಟರ್​, ಶಹಜಹಾನ್​ ಶೇಖ್​

Updated on: Mar 10, 2024 | 4:09 PM

ಪಶ್ಚಿಮ ಬಂಗಾಳದ ಸಂದೇಶ್​ಖಾಲಿಯಲ್ಲಿ ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯ ಪ್ರಕರಣ (Sandeshkhali incident) ಸಖತ್​ ಸದ್ದು ಮಾಡಿದೆ. ಈ ಘಟನೆಯನ್ನು ಅನೇಕರು ಖಂಡಿಸಿದ್ದಾರೆ. ಈಗ ಸಂದೇಶ್​ಖಾಲಿ ದೌರ್ಜನ್ಯ ಪ್ರಕರಣವನ್ನು ಆಧರಿಸಿ ಸಿನಿಮಾ ಮೂಡಿಬರಲಿದೆ. ಮಹಿಳಾ ದಿನದ ಸಂದರ್ಭದಲ್ಲಿ ಈ ಬಗ್ಗೆ ಘೋಷಣೆ ಆಗಿದೆ. ಈ ಚಿತ್ರಕ್ಕೆ ಸಂದೇಶ್​ಖಾಲಿ’ (Sandeshkhali) ಎಂದು ಶೀರ್ಷಿಕೆ ಇಡಲಾಗಿದೆ. ಆಗಸ್ಟ್​ ತಿಂಗಳಲ್ಲಿ ಈ ಚಿತ್ರದ ಶೂಟಿಂಗ್​ ಆರಂಭ ಆಗಲಿದೆ. ಮುಂಬರುವ ಪಶ್ವಿಮ ಬಂಗಾಳ (West Bengal) ವಿಧಾನಸಭಾ ಚುನಾವಣೆಗೂ ಮೊದಲು ‘ಸಂದೇಶ್​ಖಾಲಿ’ ಸಿನಿಮಾ ಬಿಡುಗಡೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ‘ಭಯ, ದೌರ್ಜನ್ಯ ಹಾಗೂ ತುಳಿತದ ವಿರುದ್ಧ ನಡೆದ ಯುದ್ಧದ ನೈಜ ಕಥೆ’ ಎಂಬ ಟ್ಯಾಗ್​ಲೈನ್​ ಈ ಸಿನಿಮಾದ ಪೋಸ್ಟರ್​ನಲ್ಲಿದೆ.

‘ಪರಿನ್​ ಮಲ್ಟಿಮೀಡಿಯಾ’ ಬ್ಯಾನರ್​ ಮೂಲಕ ‘ಸಂದೇಶ್​ಖಾಲಿ’ ಸಿನಿಮಾ ನಿರ್ಮಾಣ ಆಗಲಿದೆ. ಸುಮೀತ್​ ಚೌಧರಿ ಮತ್ತು ಕೇವಲ್​ ಸೇಟ್​ ಅವರು ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಸೌರಭ್​ ತಿವಾರಿ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅಮಿತಾಭ್​ ಸಿಂಗ್​ ಹಾಗೂ ಇಶಾನ್​ ಬಾಜ್​ಪಾಯಿ ಅವರು ಚಿತ್ರಕಥೆ ಬರೆಯಲಿದ್ದಾರೆ. ಟೈಟಲ್​ ಪೋಸ್ಟರ್​ ಬಿಡುಗಡೆ ಆಗಿದೆ.

‘ಸಂದೇಶ್​ಖಾಲಿ’ ಸಿನಿಮಾದ ಪಾತ್ರವರ್ಗ ಕೂಡ ಆಯ್ಕೆ ಆಗಿದೆ. ಆದರೆ ಪಾತ್ರದಾರಿಗಳ ಹೆಸರು ಇನ್ನಷ್ಟೇ ಹೊರಬರಬೇಕಿದೆ. 2026ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಈ ಸಿನಿಮಾ ಬಿಡುಗಡೆಯಾದರೆ ಖಂಡಿತವಾಗಿ ಮತದಾರರ ಮೇಲೆ ಪ್ರಭಾವ ಬೀರಲಿದೆ. ಯಾಕೆಂದರೆ, ತೃಣಮೂಲ ಕಾಂಗ್ರೆಸ್​ನ ಮುಂಖಡ ಶಹಜಹಾನ್​ ಶೇಖ್​ ನಡೆಸಿದ ದೌರ್ಜನ್ಯಗಳ ಕುರಿತು ಈ ಸಿನಿಮಾದಲ್ಲಿ ಹೇಳಲಾಗುವುದು.

ಇದನ್ನೂ ಓದಿ: ಸಂದೇಶ್​ಖಾಲಿ ಪ್ರಕರಣ: 55 ದಿನಗಳ ಬಳಿಕ ಅಂತೂ ಟಿಎಂಸಿ ನಾಯಕ ಶಹಜಹಾನ್ ಶೇಖ್ ಬಂಧನ

ಏನಿದು ಸಂದೇಶ್​ಖಾಲಿ ದೌರ್ಜನ್ಯ ಪ್ರಕರಣ?
ಇತ್ತೀಚೆಗೆ ತೃಣಮೂಲ ಕಾಂಗ್ರೆಸ್​ ಮುಖಂಡ ಶಹ್​ಜಹಾನ್​ ಶೇಖ್​ ಮತ್ತು ಆತನ ಸಹಚರರ ವಿರುದ್ಧ ಪಶ್ಚಿಮ ಬಂಗಾಳದ ಅನೇಕ ಮಹಿಳೆಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಭೂಮಿ ಕಬಳಿಸಿದ್ದು ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಶಹ್​ಜಹಾನ್​ ಶೇಖ್​ ವಿರುದ್ಧ ಇದೆ. ಫೆ.29ರಂದು ಆತನನ್ನು ಬಂಧಿಸಲಾಯಿತು. ಸದ್ಯ ಈ ಪ್ರಕರಣದ ತನಿಖೆಯಲ್ಲಿ ಸಿಬಿಐ ನಡೆಸುತ್ತಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಕೂಡ ಶಹಜಹಾನ್​ ಶೇಖ್​ ಮೇಲೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us