ಹಿಂದೆ ನಿಂತಿದ್ದ ನಟನ ಕಂಡು ಶ್ರೀಲೀಲಾ ಗರಂ? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದಲ್ಲಿ ಶ್ರೀಲೀಲಾ ಮತ್ತು ರಾಶಿ ಖನ್ನಾ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶ್ರೀಲೀಲಾ ಅವರ ಒಂದು ವಿಡಿಯೋ ವೈರಲ್ ಆಗಿದೆ. ಆ ವಿಡಿಯೋ ನೋಡಿದ ಬಳಿಕ ಜನರು ಹಲವು ಬಗೆಯ ಕಥೆಗಳನ್ನು ಕಟ್ಟಲು ಆರಂಭಿಸಿದ್ದಾರೆ.

ಹಿಂದೆ ನಿಂತಿದ್ದ ನಟನ ಕಂಡು ಶ್ರೀಲೀಲಾ ಗರಂ? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ
Sreeleela, Mahesh Achanta

Updated on: Mar 16, 2026 | 6:19 PM

ನಟ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ಉಸ್ತಾದ್ ಭಗತ್ ಸಿಂಗ್’ (Ustaad Bhagat Singh) ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಹರೀಶ್ ಶಂಕರ್ ನಿರ್ದೇಶನದ ಈ ಸಿನಿಮಾ ಮಾರ್ಚ್ 19ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ. ಈ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಬಹಳ ವೈಭವದಿಂದ ನಡೆಯಿತು. ಅದರಲ್ಲಿ ನಟಿ ಶ್ರೀಲೀಲಾ ಕೂಡ ಭಾಗಿ ಆಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಶ್ರೀಲೀಲಾ (Sreeleela) ಅವರ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅದರ ಅಸಲಿ ವಿಷಯ ಏನು ಎಂಬುದು ಈಗ ಬಹಿರಂಗ ಆಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ? ಕಾರ್ಯಕ್ರಮದ ವೇಳೆ ಶ್ರೀಲೀಲಾ ಅವರು ತಮ್ಮ ಹಿಂದೆ ನಿಂತಿದ್ದ ನಟ ಮಹೇಶ್ ಆಚಂಟ ಕಡೆಗೆ ಅಸಮಾಧಾನದಿಂದ ತಿರುಗಿ ನೋಡಿದರು. ಶ್ರೀಲೀಲಾ ತಿರುಗಿ ನೋಡಿದಾಗ ಮಹೇಶ್ ಅವರು ಮೊದಲು ನಗುತ್ತಾ ನಿಂತಿದ್ದರೂ, ಕೂಡಲೇ ಮೌನಕ್ಕೆ ಶರಣಾದರು. ಇದನ್ನು ಗಮನಿಸಿದ ನೆಟ್ಟಿಗರು, ‘ಶ್ರೀಲೀಲಾ ಯಾಕೆ ಅಷ್ಟು ಕೋಪ ಮಾಡಿಕೊಂಡರು? ಇಬ್ಬರ ನಡುವೆ ಏನೋ ನಡೆದಿದೆ’ ಎಂದು ನಾನಾ ರೀತಿಯ ಕಥೆಗಳನ್ನು ಕಟ್ಟಲು ಆರಂಭಿಸಿದರು.

ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ರೀತಿಯ ವದಂತಿಗಳು ಹರಿದಾಡಿದ್ದವು. ಪವನ್ ಕಲ್ಯಾಣ್ ಅವರು ವೇದಿಕೆಯ ಮೇಲೆ ಗಂಭೀರವಾಗಿ ಭಾಷಣ ಮಾಡುತ್ತಿದ್ದಾಗ, ಮಹೇಶ್ ಆಚಂಟ ಅವರು ಫೋನ್‌ನಲ್ಲಿ ಸೌಂಡ್ ಇಟ್ಟುಕೊಂಡು ವಿಡಿಯೋ ನೋಡುತ್ತಿದ್ದರು. ಅದಕ್ಕೆ ಶ್ರೀಲೀಲಾ ಕೋಪಗೊಂಡರು ಎಂಬುದು ಕೆಲವರ ವಾದ. ಶ್ರೀಲೀಲಾ ಅವರ ಫೋನ್ ಮಹೇಶ್ ಬಳಿ ಇತ್ತು, ಅದನ್ನು ಚೆಕ್ ಮಾಡಲು ಅವರು ಹಿಂದೆ ತಿರುಗಿದ್ದರು ಎಂಬುದು ಇನ್ನು ಕೆಲವರ ಅಭಿಪ್ರಾಯ.

ಈ ಎಲ್ಲ ಅಂತೆ-ಕಂತೆಗಳಿಗೆ ಈಗ ಸ್ವತಃ ಮಹೇಶ್ ಆಚಂಟ ಅವರೇ ತೆರೆ ಎಳೆದಿದ್ದಾರೆ. ಗೊಂದಲಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆ ವೈರಲ್ ವಿಡಿಯೋವನ್ನು ಹಂಚಿಕೊಂಡಿರುವ ಅವರು ಅಸಲಿ ವಿಷಯವನ್ನು ಬಯಲು ಮಾಡಿದ್ದಾರೆ. ಅವರ ಸ್ಪಷ್ಟನೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

ಇದನ್ನೂ ಓದಿ: ಪವನ್ ಕಲ್ಯಾಣ್ ಅನುಪಸ್ಥಿತಿಯಲ್ಲಿ ಪ್ರಚಾರದ ಜವಾಬ್ದಾರಿ ಹೊತ್ತ ಶ್ರೀಲೀಲಾ

‘ಶ್ರೀಲೀಲಾ ಅವರ ಫೋನ್ ನನ್ನ ಬಳಿ ಇತ್ತು. ಅವರು ಹಿಂದೆ ತಿರುಗಿದಾಗ ಫೋನ್‌ಗಾಗಿ ತಿರುಗಿ ನೋಡಿರಬಹುದು ಎಂದು ನಾನು ಭಾವಿಸಿದೆ. ಆದರೆ ವಾಸ್ತವದಲ್ಲಿ ಅವರು ನಮ್ಮ ಹಿಂದೆ ಇದ್ದ ದೊಡ್ಡ ಸ್ಕ್ರೀನ್ ನೋಡಲು ತಿರುಗಿದ್ದರು ಅಷ್ಟೇ. ಅಲ್ಲಿ ಯಾವುದೇ ಗಂಭೀರ ಘಟನೆ ನಡೆದಿಲ್ಲ ಮತ್ತು ಅವರು ಯಾರಿಗೂ ಅವಮಾನ ಮಾಡಿಲ್ಲ. ದಯವಿಟ್ಟು ವದಂತಿಗಳನ್ನು ನಂಬಬೇಡಿ’ ಎಂದು ಮಹೇಶ್ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us