ಯುಗಾದಿಗೆ ಕಲರ್ಸ್​ ಕನ್ನಡದಲ್ಲಿ ‘ಸವಿರುಚಿ’ ಮತ್ತೆ ಶುರು; ಬರ್ತಾರೆ ಬೆಳ್ಳುಳ್ಳಿ ಕಬಾಬ್​ ಚಂದ್ರು

ಕರ್ನಾಟಕದ ಬೇರೆ ಬೇರೆ ಊರುಗಳ ಪಾಕಪ್ರವೀಣರು ‘ಸವಿರುಚಿ’ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಜಾಹ್ನವಿ ಅವರು ನಿರೂಪಣೆ ಮಾಡಲಿದ್ದಾರೆ. ಅಡುಗೆ ಮಾಡುವುದಷ್ಟೇ ಅಲ್ಲದೇ, ಆಹಾರದ ಪೌಷ್ಟಿಕತೆಯ ಕುರಿತು ತಜ್ಞರ ಅಭಿಪ್ರಾಯ ಕೂಡ ಈ ಶೋನಲ್ಲಿ ಇರಲಿದೆ. ಯುಗಾದಿ ಪ್ರಯುಕ್ತ ‘ಸವಿರುಚಿ’ ಕಾರ್ಯಕ್ರಮದ ಹೊಸ ಸೀಸನ್​ ಆರಂಭ ಆಗಲಿದೆ.

ಯುಗಾದಿಗೆ ಕಲರ್ಸ್​ ಕನ್ನಡದಲ್ಲಿ ‘ಸವಿರುಚಿ’ ಮತ್ತೆ ಶುರು; ಬರ್ತಾರೆ ಬೆಳ್ಳುಳ್ಳಿ ಕಬಾಬ್​ ಚಂದ್ರು
ಸವಿರುಚಿ

Updated on: Mar 25, 2024 | 9:22 PM

ಕನ್ನಡದ ಕಿರುತೆರೆಯ ಪ್ರೇಕ್ಷಕರಿಗೆ ಬಗೆಬಗೆಯ ಮನರಂಜನೆ ನೀಡಿರುವ ‘ಕಲರ್ಸ್​ ಕನ್ನಡ’ ವಾಹಿನಿ ಈಗ ಮತ್ತೆ ‘ಸವಿರುಚಿ’ (Saviruchi) ಕಾರ್ಯಕ್ರಮವನ್ನು ಆರಂಭಿಸಲು ಮುಂದಾಗಿದೆ. ಈ ಜನಪ್ರಿಯ ಅಡುಗೆ ಕಾರ್ಯಕ್ರಮಕ್ಕೆ ದೊಡ್ಡ ಪ್ರೇಕ್ಷಕವರ್ಗವಿದೆ. ಈ ವರ್ಷದ ಯುಗಾದಿ (Udagi 2024) ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ‘ಸವಿರುಚಿ’ ಕಾರ್ಯಕ್ರಮದ ಹೊಸ ಎಪಿಸೋಡ್​ಗಳು ಬಿತ್ತರ ಆಗಲಿವೆ ಎಂದು ಕಲರ್ಸ್​ ಕನ್ನಡ (Colors Kannada) ವಾಹಿನಿ ತಿಳಿಸಿದೆ. ಈ ಶೋನಲ್ಲಿ ‘ಬೆಳ್ಳುಳ್ಳಿ ಕಬಾಬ್​’ ಖ್ಯಾತಿಯ ಚಂದ್ರು ಕೂಡ ಇರಲಿದ್ದಾರೆ ಎಂಬುದು ವಿಶೇಷ. ಈ ಶೋ ಯಾವಾಗ ಪ್ರಸಾರ ಆಗಲಿದೆ? ಏನೆಲ್ಲ ಹೊಸತನ ಇರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ..

‘ಸವಿರುಚಿ’ ಕಾರ್ಯಕ್ರಮ ಏಪ್ರಿಲ್ 9ರಿಂದ ಪ್ರಸಾರ ಆರಂಭಿಸಲಿದೆ. ಈ ಹೊಸ ಆವೃತ್ತಿಯನ್ನು ವೀಕ್ಷಕರು ಸೋಮವಾರದಿಂದ ಶನಿವಾರದ ತನಕ ಪ್ರತಿ ಮಧ್ಯಾಹ್ನ 12 ಗಂಟೆಗೆ ವೀಕ್ಷಿಸಬಹುದು. ಈ ಬಾರಿ ಒಂದಷ್ಟು ಹೊಸ ಅಂಶಗಳು ಇರಲಿವೆ ಎನ್ನುವ ಮೂಲಕ ನಿರೀಕ್ಷೆ ಹೆಚ್ಚಿಸಲಾಗಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಬರುವ ಪಾಕಪ್ರವೀಣರು ಈ ಶೋನಲ್ಲಿ ಭಾಗವಹಿಸುತ್ತಾರೆ. ‘ಸವಿರುಚಿ’ ಕಾರ್ಯಕ್ರಮದಲ್ಲಿ ಕೇವಲ ಅಡುಗೆ ಮಾಡುವುದು ಮಾತ್ರವಲ್ಲದೇ ಆಹಾರದ ಪೌಷ್ಟಿಕತೆ ಬಗ್ಗೆ ತಜ್ಞರ ಅಭಿಪ್ರಾಯ ಕೂಡ ಇರಲಿದೆ. ಈ ಎಲ್ಲ ಕಾರಣಗಳಿಂದಾಗಿ ‘ಸವಿರುಚಿ’ ಶೋ ವಿಶೇಷ ಎನಿಸಿಕೊಳ್ಳಲಿದೆ.

ರಾಜ್ಯದ ಹಲವು ಪ್ರದೇಶಗಳಿಗೆ ತೆರಳಿ ಆಯಾ ಭಾಗದ ಸಾಂಪ್ರದಾಯಿಕ ಖಾದ್ಯಗಳನ್ನು ವೀಕ್ಷಕರಿಗೆ ಪರಿಚಯಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ಕಾರಣದಿಂದ ‘ಸವಿರುಚಿ’ ಕಾರ್ಯಕ್ರಮವು ವೀಕ್ಷಕರಿಗೆ ಇಷ್ಟ ಆಗಲಿದೆ. ಯುಗಾದಿ ಹಬ್ಬದ ದಿನವೇ ನೂತನ ಸೀಸನ್ ಆರಂಭ ಆಗಲಿದೆ.‘ಕಲರ್ಸ್ ಕನ್ನಡ’ ವಾಹಿನಿಯ ಬಿಸ್ನೆಸ್​ ಹೆಡ್ ಪ್ರಶಾಂತ್ ನಾಯಕ್ ಅವರು ಈ ಶೋ ಬಗ್ಗೆ ಮಾತನಾಡಿದ್ದಾರೆ. ‘ಹಬ್ಬ ಎಂದರೆ ಫ್ಯಾಮಿಲಿಯ ಎಲ್ಲರೂ ಜೊತೆಯಾಗಿ ಸೇರಿ ರುಚಿರುಚಿಯಾದ ಅಡುಗೆಯನ್ನು ಸವಿಯುವುದು. ಈ ಬಾರಿ ಯುಗಾದಿ ಹಬ್ಬದ ಸಂಭ್ರಮವನ್ನು ಸವಿರುಚಿ ಹೊಸ ಸೀಸನ್ ಮತ್ತಷ್ಟು ರಸವತ್ತಾಗಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟಿಆರ್​ಪಿ ರೇಸ್​ನಲ್ಲಿ ಈ ಧಾರಾವಾಹಿಗಳ ಮಧ್ಯೆ ಇದೆ ಭರ್ಜರಿ ಸ್ಪರ್ಧೆ; ಇಲ್ಲಿದೆ ಟಾಪ್​ ಐದು ಸೀರಿಯಲ್

‘ನಮ್ಮ ವಾಹಿನಿಯ ವೀಕ್ಷಕರೆಲ್ಲರೂ ನಮ್ಮ ಕುಟುಂಬದವರಿದ್ದಂತೆ. ಅವರಿಗೆಲ್ಲ ಯುಗಾದಿ ಹಬ್ಬದ ಶುಭ ಹಾರೈಸುತ್ತಾ ಉಡುಗೊರೆಯಾಗಿ ‘ಸವಿರುಚಿ’ ಹೊಸ ಆವೃತ್ತಿಯನ್ನು ನೀಡುತ್ತಿದ್ದೇವೆ’ ಎಂದು ಪ್ರಶಾಂತ್​ ನಾಯಕ್​ ಹೇಳಿದ್ದಾರೆ. ಜನಪ್ರಿಯ ‘ನನ್ನಮ್ಮ ಸೂಪರ್ ಸ್ಟಾರ್’ ಶೋ ಖ್ಯಾತಿಯ ಜಾಹ್ನವಿ ಅವರು ಸವಿರುಚಿ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಬೆಳ್ಳುಳ್ಳಿ ಕಬಾಬ್ ವಿಡಿಯೋ ಮೂಲಕ ಸಖತ್​ ವೈರಲ್​ ಆಗಿರುವ ಚಂದ್ರು ಅವರು ಸಹ ಈ ಶೋನಲ್ಲಿ ಇರುವುದರಿಂದ ಮನರಂಜನೆ ಹೆಚ್ಚಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us