ದೇವನಹಳ್ಳಿ: ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್ ಹಾಗೂ ನಟ ಪುನೀತ್ ರಾಜ್ಕುಮಾರ್ ವಿರುದ್ಧ ಭೂಕಬಳಿಕೆ ಆರೋಪ ಕೇಳಿ ಬಂದಿದೆ. ಅಧಿಕಾರ ಬಳಸಿ ಸರ್ಕಾರಿ ಜಮೀನು ಕಬಳಿಕೆ ಮಾಡಿದ್ದಾರೆ ಎಂದು ಯಲಹಂಕ ಕಾಂಗ್ರೆಸ್ ಮುಖಂಡರು ಮತ್ತು ರೈತಸಂಘ ಕಾರ್ಯಕರ್ತರು ಆರೋಪ ಮಾಡಿದ್ದಾರೆ.
ಕಳೆದ ಸೋಮವಾರ ಶಾಸಕ ಮತ್ತು ನಟನ ವಿರುದ್ಧ ಆರೋಪಿಸಿ ಯಲಹಂಕ ಬಳಿಯ ಲಿಂಗರಾಜಪುರದಲ್ಲಿ ಪ್ರತಿಭಟನೆ ನಡೆಸಿದ್ದರು. ಲಿಂಗರಾಜಪುರ ಸರ್ವೆ ನಂ. 5ರ 8 ಎಕರೆ, ಮೈಲನಹಳ್ಳಿ ಸರ್ವೆ ನಂ. 25ರಲ್ಲಿ 10 ಎಕರೆ ಗೋಮಾಳ ಕಬಳಿಕೆ ಮಾಡಲಾಗಿದೆಯಂತೆ.
ನಕಲಿ ದಾಖಲೆ ಸೃಷ್ಟಿಸಿ ಶಾಸಕರ ಪತ್ನಿ ಹೆಸರಲ್ಲಿ 5 ಎಕರೆ, ನಟ ಪುನಿತ್ ರಾಜಕುಮಾರ್ ಪತ್ನಿ ಹೆಸರಲ್ಲಿ 5 ಎಕರೆ ಭೂಕಬಳಿಕೆ ಮಾಡಿರೋದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಕ್ರಮ ಬಯಲಿಗೆಳೆಯುವಂತೆ ಕೈ ಮುಖಂಡರು ಮತ್ತು ರೈತಸಂಘ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಪೇಚಿಗೆ ಸಿಲುಕಿದ ಕಾಂಗ್ರೆಸ್ ಮುಖಂಡ
ಆದರೆ ಜಮೀನಿನ ಖಾತೆದಾರರು ಆರೋಪವನ್ನ ತಳ್ಳಿ ಹಾಕಿದ್ದಾರೆ. ಜಮೀನನ್ನ ಕಡಿಮೆ ಬೆಲೆಗೆ ಕೊಡುವಂತೆ ಕೆಲವರು ಕಿರುಕುಳ ನೀಡಿದ್ರು ಜಮೀನು ಕೊಡದಿದ್ದಕ್ಕೆ ಸರ್ಕಾರಿ ಭೂಮಿ ಕಬಳಿಕೆ ಎಂದು ಆರೋಪ ಮಾಡಿದ್ದಾರೆ. ಇಲ್ಲಿ ಯಾವುದೇ ಅಕ್ರಮವಾಗಿಲ್ಲ ಎಂದು ಮೂಲ ರೈತರು ಸ್ಪಷ್ಟ ಪಡಿಸಿದ್ದಾರೆ. ಇತ್ತ ದಾಖಲೆ ಬಿಡುಗಡೆ ಮಾಡದೆ ರೈತಸಂಘ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಪೇಚಿಗೆ ಸಿಲುಕಿದ್ದಾರೆ.
ಜಮೀನನ್ನ ಯಾರು ಬೇಕಾದ್ರೂ ಖರೀದಿ ಮಾಡಬಹುದು. ಹಿಡುವಳಿ ಜಮೀನಿಗೆ ಸೂಕ್ತ ದಾಖಲೆ ಕೊಟ್ಟು ಖರೀದಿಸಿದ್ದೇವೆ ಕಾಂಗ್ರೆಸ್ ಮುಖಂಡರು ಅರ್ಥವಿಲ್ಲದೆ ಆರೋಪ ಮಾಡ್ತಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಿದ್ರೆ ತನಿಖೆ ಮಾಡಿಸಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್ ಸವಾಲು ಹಾಕಿದ್ದಾರೆ.