ಬೆಂಗಳೂರು, ಡಿ.05: ಧಾರ್ಮಿಕ ದತ್ತಿ ಇಲಾಖೆ(Department of Religious Endowments)ಯ ಸಿ ವರ್ಗದ ದೇವಸ್ಥಾನಗಳ ಅನುವಂಶಿಕ ಅರ್ಚಕರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆ ಹೊಸ ಆದೇಶ ಹೊರಡಿಸಿದೆ. ‘ಅರ್ಚಕರು ತೀವ್ರ ಅನಾರೋಗ್ಯ ಅಥವಾ ವಯಸ್ಸಾದ ಸಂದರ್ಭದಲ್ಲೂ ಅನುವಂಶಿಕ ನೇಮಕಾತಿಗೆ ಅನುಮತಿ ನೀಡಿದ ಧಾರ್ಮಿಕ ದತ್ತಿ ಇಲಾಖೆ, ತಹಶೀಲ್ದಾರರ ಮಟ್ಟದಲ್ಲಿ ಷರತ್ತು ಬದ್ಧವಾಗಿ ಅನುವಂಶಿಕ ಅರ್ಚಕ ಪದ್ಧತಿ ಮುಂದುವರಿಸಲು ಆದೇಶಿಸಿದೆ.
ನವೆಂಬರ್ 17 ರಂದು ರಾಜ್ಯದ ಮುಜರಾಯಿ ದೇವಾಲಯಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಚಾರಿತ್ರಿಕ ಆದೇಶ ಪ್ರಕಟಿಸಿತ್ತು. ಆ ಮೂಲಕ ಅರ್ಚಕರ ಸಮೂಹದ ಕೋರಿಕೆ ಈಡೇರಿತ್ತು. ರಾಜ್ಯದ ‘ಸಿ’ ವರ್ಗದ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುವಂಶಿಕ ಅರ್ಚಕರು ಮರಣ ಹೊಂದಿದ್ದಲ್ಲಿ, ಗಂಭೀರವಾಗಿ ಅಸ್ವಸ್ಥರಾದಲ್ಲಿ ಅಥವಾ ಅಶಕ್ತರಾದಲ್ಲಿ ಅನುವಂಶಿಕ ಹಕ್ಕನ್ನು ವರ್ಗಾಯಿಸುವ ಸರಳ ಕ್ರಮ ಕೈಗೊಳ್ಳಬೇಕೆಂಬ ಬಹುಕಾಲದ ಬೇಡಿಕೆಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಅಸ್ತು ಎಂದಿದ್ದರು. ಬಳಿಕ ಸರ್ಕಾರ ಕೂಡ ಈ ಕುರಿತು ಆದೇಶ ಹೊರಡಿಸಿದ್ದು ಅರ್ಚಕರ ವಲಯದಲ್ಲಿ ಸಂತಸಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ:ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಇನ್ಮುಂದೆ ಮೊಬೈಲ್ ಬಳಸುವಂತಿಲ್ಲ: ಸರ್ಕಾರ ಆದೇಶ
ಪ್ರಸ್ತುತ, ಅರ್ಚಕರ ಸಂಘದವರ ಬೇಡಿಕೆಯಂತೆ, ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ʼʼಸಿ” ವರ್ಗದ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನುವಂಶಿಕ ಅರ್ಚಕರು, ವಯಸ್ಸಾದ ಸಂದರ್ಭದಲ್ಲಿ ಹಾಗೂ ತೀವ್ರ ರೀತಿಯ ಅನಾರೋಗ್ಯದ ಕಾರಣದಿಂದಾಗಿ ಅರ್ಚಕರಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ, ಅಶಕ್ತರಾದ ಸಂದರ್ಭಗಳಲ್ಲಿಯೂ ಸಹ ಅನುವಂಶಿಕ ಹಕ್ಕನ್ನು (ಬರಾಬರ್ದ್) ಅವರ ಕಾನೂನು ಬದ್ದ ವಾರಸುದಾರರಿಗೆ ವರ್ಗಾಯಿಸಬಹುದಾಗಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ