Belagavi Session: ಮತ್ತೆ ಬಿಜೆಪಿಗೆ ಮುಜುಗರ ತರುವ ರೀತಿಯಲ್ಲಿ ಮಾತನಾಡಿದ ಯತ್ನಾಳ್

ಹೆಚ್​ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ವಿಜಯಪುರಕ್ಕೆ 105 ಕೋಟಿ ರೂಪಾಯಿ ನೀಡಿದ್ದರು. ದುರ್ದೈವ ಅಂದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದನ್ನು ರದ್ದು ಮಾಡಿತ್ತು ಎಂದು ವಿಧಾನಸಭೆಯಲ್ಲಿ ಸ್ವಪಕ್ಷದ ವಿರುದ್ಧವೇ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

Belagavi Session: ಮತ್ತೆ ಬಿಜೆಪಿಗೆ ಮುಜುಗರ ತರುವ ರೀತಿಯಲ್ಲಿ ಮಾತನಾಡಿದ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
Follow us
| Updated By: ಗಣಪತಿ ಶರ್ಮ

Updated on:Dec 12, 2023 | 2:37 PM

ಬೆಳಗಾವಿ, ಡಿಸೆಂಬರ್ 12: ಸ್ವಪಕ್ಷದ ನಾಯಕರ ವಿರುದ್ಧವೇ ಕಳೆದ ಕೆಲವು ದಿನಗಳಿಂದ ಗಂಭೀರ ಆರೋಪಗಳನ್ನು ಮಾಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  (Basanagouda Patil Yatnal) ಮಂಗಳವಾರವೂ ಅದನ್ನು ಮುಂದುವರಿಸಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ (Belagavi Session) ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ವೇಳೆ ಯತ್ನಾಳ್ ಬಿಜೆಪಿ ಮುಜುಗರಕ್ಕೀಡಾಗುವ ರೀತಿ ಮಾತನಾಡಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ವಿಜಯಪುರಕ್ಕೆ 105 ಕೋಟಿ ರೂಪಾಯಿ ನೀಡಿದ್ದರು. ದುರ್ದೈವ ಅಂದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದನ್ನು ರದ್ದು ಮಾಡಿತ್ತು. ಯತ್ನಾಳ್​ ಅವರೇ ನಿಮ್ಮ ಬಾಯಿ ಸರಿಯಿದ್ದರೆ ಸಿಎಂ ಆಗುವ ಯೋಗ್ಯತೆಯಿತ್ತು ಎಂದು ಕೆಲವರು ಹೇಳಿದ್ದರು. ನಾನ್ಯಾರಿಗೂ ಹೆದರುವುದಿಲ್ಲ, ಹೇಳಬೇಕಾದ್ದನ್ನು ನೇರವಾಗಿ ಹೇಳ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.

ಪಿಎಸಿಗೆ ಸಿಸಿ ಪಾಟೀಲ್ ಅಧ್ಯಕ್ಷರಾಗಿ ಮಾಡಿ ಸಮಾಧಾನ ಪಡಿಸಲು ಯತ್ನಿಸುತ್ತಿದ್ದಾರೆ. ಪಂಚಮಸಾಲಿ ಸಮುದಾಯವನ್ನು ಸಮಾಧಾನ ಪಡಿಸಲು ಹೊರಟಿದ್ದಾರೆ. ಇದಕ್ಕೆ ಮೇಲಿಂದ ಅನುಮತಿ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಬೊಮ್ಮಾಯಿ, ಭೈರತಿ ಬಸವರಾಜ್ ಅನುದಾನ ನೀಡಿ ನೆರವಾದರು. ಅಧಿಕಾರದಲ್ಲಿದ್ದಾಗ ಸಹಾಯ ಮಾಡದವರು ಈಗ ಮಾಜಿಗಳಾಗಿದ್ದಾರೆ. ನಾನು ಟಾರ್ಗೆಟ್ ಮಾಡಿದರೆ ಅವರು ಮಾಜಿಯಾಗುವವರೆಗೆ ಬಿಡಲ್ಲ ಎಂದು ಬಿಜೆಪಿ ಶಾಸಕರು ಮುಜುಗರಕ್ಕೊಳಗಾಗುವ ರೀತಿ ಯತ್ನಾಳ್ ಮಾತನಾಡಿದರು.

ಇದನ್ನೂ ಓದಿ: ಬಸವರಾಜ ಬೊಮ್ಮಾಯಿಯನ್ನು ಸೋಲಿಸಲು ಹಣ ಕಳುಹಿಸಿದ್ದ ವಿಜಯೇಂದ್ರ: ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ

ಈ ವೇಳೆ ಮಧ್ಯ ಪ್ರವೇಶಿಸಿದ ಕಾಗವಾಡ ಶಾಸಕ ರಾಜು ಕಾಗೆ, ನಿಮ್ಮ ಸಹಾಯಕ್ಕೆ ಬರುತ್ತೇನೆ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಯತ್ನಾಳ್, ನನ್ನ ಸಹಾಯಕ್ಕೆ ನಾನೇ ಇದ್ದೇನೆ, ಬೇರೆಯವರು ಬೇಡ. ನಾನು ಒಂಟಿ ಸಲಗ ಇದ್ದೇನೆ. ಒಂಟಿ ಸಲಗ ಆಗಿಯೇ ಹೊಡೆಯುತ್ತೇನೆ ಎಂದರು.

ಬಿಜೆಪಿಯವರು ನಿಮ್ಮ ಜೊತೆ ಇಲ್ವಾ ಹಾಗಾದರೆ ಎಂದು ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಕೆಣಕಿದರು. ಇಲ್ಲ ಅಂತಾನೇ ತಿಳಿದುಕೊಳ್ಳಿ, ಸುಮ್ನೆ ಆರು ತಿಂಗಳಿಗೆ ಯಾಕೆ ಮಾತಾಡ್ತೀರಿ ಎಂದು ಯತ್ನಾಳ್ ಮಾರ್ಮಿಕವಾಗಿ ಹೇಳಿದರು.

ಯತ್ನಾಳ್ ಚರ್ಚೆ ಮುಗಿಯುವ ವರೆಗೂ ಕಲಾಪಕ್ಕೆ ಬಾರದ ವಿಜಯೇಂದ್ರ

ಶಾಸಕ ಯತ್ನಾಳ್​​, ವಿಜಯೇಂದ್ರ ನಡುವೆ ಮುನಿಸು ಮುಂದುವರಿದಿರುವುದು ವಿಧಾನಸಭೆ ಕಲಾಪದಲ್ಲೂ ಎದ್ದುಕಾಣಿಸಿತು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಯತ್ನಾಳ್ ಚರ್ಚೆ ವೇಳೆ ವಿಜಯೇಂದ್ರ ಸದನದಿಂದ ಹೊರಗೆ ಹೋಗಿದ್ದರು. ಯತ್ನಾಳ್ ಚರ್ಚೆ ಮುಗಿಯುವವರೆಗೂ ಸದನದೊಳಗೆ ಬಾರದ ವಿಜಯೇಂದ್ರ‌ ಆಮೇಲೆ ಬಂದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Tue, 12 December 23