Belagavi session: ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಮಸೂದೆ ಮಂಡಿಸಿದ ಸರ್ಕಾರ

ಕರ್ನಾಟಕ ಮುದ್ರಾಂಕ (ತಿದ್ದುಪಡಿ) ಮಸೂದೆಯು ಎಲ್ಲಾ ಮುದ್ರಾಂಕ ಶುಲ್ಕಗಳನ್ನು ಹೆಚ್ಚಿಸಲು ಮತ್ತು ಕೆಲವು ಮುದ್ರಾಂಕ ಶುಲ್ಕಗಳನ್ನು ದ್ವಿಗುಣಗೊಳಿಸಲು ಪ್ರಸ್ತಾಪಿಸಿದ್ದು, ಕೆಲವು ದಾಖಲೆಗಳಿಗೆ ಐದು ಪಟ್ಟು ಹೆಚ್ಚಳ ಪ್ರಸ್ತಾಪಿಸಿದೆ.

Belagavi session: ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಮಸೂದೆ ಮಂಡಿಸಿದ ಸರ್ಕಾರ
ಸಾಂದರ್ಭಿಕ ಚಿತ್ರ

Updated on: Dec 07, 2023 | 9:28 PM

ಬೆಳಗಾವಿ, ಡಿಸೆಂಬರ್ 7: ಹಣಕಾಸು ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು (Karnataka Government) ಗುರುವಾರ ವಿಧಾನಸಭೆಯಲ್ಲಿ ಮುದ್ರಾಂಕ ಶುಲ್ಕವನ್ನು (Stamp Duty) ಹೆಚ್ಚಿಸುವ ಮಸೂದೆಯನ್ನು ಮಂಡಿಸಿದೆ. ಪವರ್ ಆಫ್ ಅಟಾರ್ನಿ, ಡೀಡ್ಸ್​​ ಆ್ಯಂಡ್ ಅಫಿಡವಿಟ್‌ ಹಾಗೂ ಇತರ ಕಾನೂನು ದಾಖಲೆಗಳಿಗೆ ಸಂಬಂಧಿಸಿದ ಮುದ್ರಾಂಕ ಶುಲ್ಕ ಹೆಚ್ಚಳ ಮಸೂದೆಯ ಉದ್ದೇಶವಾಗಿದೆ.

ಕರ್ನಾಟಕ ಮುದ್ರಾಂಕ (ತಿದ್ದುಪಡಿ) ಮಸೂದೆಯು ಎಲ್ಲಾ ಮುದ್ರಾಂಕ ಶುಲ್ಕಗಳನ್ನು ಹೆಚ್ಚಿಸಲು ಮತ್ತು ಕೆಲವು ಮುದ್ರಾಂಕ ಶುಲ್ಕಗಳನ್ನು ದ್ವಿಗುಣಗೊಳಿಸಲು ಪ್ರಸ್ತಾಪಿಸಿದ್ದು, ಕೆಲವು ದಾಖಲೆಗಳಿಗೆ ಐದು ಪಟ್ಟು ಹೆಚ್ಚಳ ಪ್ರಸ್ತಾಪಿಸಿದೆ.

ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳು ರಾಜ್ಯ ಸರ್ಕಾರಕ್ಕೆ ನಿರ್ಣಾಯಕ ಆದಾಯದ ಮಾರ್ಗಗಳಾಗಿವೆ. ಇವುಗಳ ಮೂಲಕ ಈ ಹಣಕಾಸು ವರ್ಷದಲ್ಲಿ 25,000 ರೂ. ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಮಸೂದೆ ಪ್ರಕಾರ ಎಷ್ಟಾಗಲಿದೆ ಪರಿಷ್ಕೃತ ಮುದ್ರಾಂಕ ಶುಲ್ಕ?

ಮಸೂದೆ ಪ್ರಕಾರ, ದತ್ತು ಪತ್ರಗಳ ಮೇಲಿನ ಮುದ್ರಾಂಕ ಶುಲ್ಕ 500 ರಿಂದ 1,000 ರೂ.ಗೆ ಏರಿಕೆಯಾಗಲಿದೆ. ಸದ್ಯ 20 ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಹೊಂದಿರುವ ಅಫಿಡವಿಟ್​​ಗಳಿಗೆ ಮುಂದೆ 100 ರೂಪಾಯಿ ವರೆಗೆ ಮುದ್ರಾಂಕ ಶುಲ್ಕ ಇರಲಿದೆ.

ಪವರ್ ಆಫ್ ಅಟಾರ್ನಿ ಮೇಲಿನ ಮುದ್ರಾಂಕ ಶುಲ್ಕವನ್ನು 100 ರೂ.ನಿಂದ 500 ರೂ.ಗೆ ಹೆಚ್ಚಿಸಲಾಗುತ್ತದೆ. ಐದಕ್ಕಿಂತ ಹೆಚ್ಚು ಮಂದಿ, ಆದರೆ 10 ಕ್ಕಿಂತ ಕಡಿಮೆ ವ್ಯಕ್ತಿಗಳು ಜಂಟಿಯಾಗಿ ಪವರ್ ಆಫ್ ಅಟಾರ್ನಿ ನೀಡುವುದಾದರೆ ಅದರ ಮೇಲಿನ ಮುದ್ರಾಂಕ ಶುಲ್ಕ 200 ರೂ.ನಿಂದ 1,000 ರೂ.ಗೆ ಹೆಚ್ಚಳವಾಗಲಿದೆ.

ನಗರ ಪ್ರದೇಶಗಳಲ್ಲಿರುವ ಆಸ್ತಿ ವಿಭಜನಾ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಪ್ರತಿ ಷೇರಿಗೆ 1,000 ರೂ.ನಿಂದ 5,000 ರೂ.ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ನಗರ ಮಿತಿಯಿಂದ ಹೊರಗಿರುವ ಆಸ್ತಿಗಳಿಗೆ, ಪ್ರಸ್ತುತ 500 ರೂ. ಬದಲಾಗಿ ಪ್ರತಿ ಷೇರಿಗೆ 3,000 ರೂ. ಮಾಡಲು ಪ್ರಸ್ತಾವಿಸಲಾಗಿದೆ. ಕೃಷಿ ಆಸ್ತಿಗಳನ್ನು ವಿಭಜಿಸಲು ಪ್ರತಿ ಷೇರಿಗೆ 250 ರೂ. ಬದಲಾಗಿ 1,000 ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಸುವರ್ಣಸೌಧದ ಬಳಿ ರೈತರಿಂದ ಪ್ರತಿಭಟನೆ: ಓಡೋಡಿ ಬಂದ ಸಚಿವ ಶಿವಾನಂದ ಪಾಟೀಲ್

ವಿಚ್ಛೇದನ ಪತ್ರಗಳ ಮೇಲಿನ ಸ್ಟ್ಯಾಂಪ್ ಡ್ಯೂಟಿ ಕೂಡ 100 ರಿಂದ 500 ರೂ.ಗೆ ಹೆಚ್ಚಾಗಲಿದೆ. ಪ್ರಮಾಣೀಕೃತ ಪ್ರತಿಗಳಿಗೆ, ಸ್ಟ್ಯಾಂಪ್ ಸುಂಕವನ್ನು 5 ರಿಂದ 20 ಕ್ಕೆ ಹೆಚ್ಚಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಸರ್ಕಾರವು ಮುದ್ರಾಂಕ ಶುಲ್ಕಗಳನ್ನು ಹೆಚ್ಚಿಸಲು ಮುಂದಾಗಿರುವುದರಿಂದ ಟ್ರಸ್ಟ್‌ಗಳನ್ನು ನೋಂದಾಯಿಸುವುದು ಸಹ ದುಬಾರಿಯಾಗಲಿದೆ. ಕಂಪನಿಗಳ ವಿಲೀನ ಮತ್ತಿತರ ಪ್ರಕ್ರಿಯೆಗಳೂ ದುಬಾರಿಯಾಗಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us