Sign In

By signing in or creating an account, you agree with Associated Broadcasting Company's Terms & Conditions and Privacy Policy.

Belgavi Session: ಸುವರ್ಣಸೌಧದ ಬಳಿ ರೈತರಿಂದ ಪ್ರತಿಭಟನೆ: ಓಡೋಡಿ ಬಂದ ಸಚಿವ ಶಿವಾನಂದ ಪಾಟೀಲ್

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ಏಕಾಏಕಿ ಸರ್ವಿಸ್ ರಸ್ತೆಯಿಂದ ಸುವರ್ಣಸೌಧದ ಬಳಿಯ ರಾಷ್ಟ್ರೀಯ ಹೆದ್ದಾರಿ 4ಕ್ಕೆ ನುಗ್ಗಿದ್ದಾರೆ. ಈ ವೇಳೆ ಓಡೋಡಿ ಬಂದ ಸಚಿವ ಶಿವಾನಂದ ಪಾಟೀಲ್​, ರೈತ ಮುಖಂಡ ಚೂನಪ್ಪ ಪೂಜಾರಿಯಿಂದ ಬೇಡಿಕೆಗಳ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

Belgavi Session: ಸುವರ್ಣಸೌಧದ ಬಳಿ ರೈತರಿಂದ ಪ್ರತಿಭಟನೆ: ಓಡೋಡಿ ಬಂದ ಸಚಿವ ಶಿವಾನಂದ ಪಾಟೀಲ್
ರಾಷ್ಟ್ರೀಯ ಹೆದ್ದಾರಿ 4ಕ್ಕೆ ನುಗ್ಗಿದ ರೈತರು
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ಗಂಗಾಧರ​ ಬ. ಸಾಬೋಜಿ

Updated on:Dec 07, 2023 | 6:51 PM

ಬೆಳಗಾವಿ, ಡಿಸೆಂಬರ್​ 07: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು (farmers) ಪ್ರತಿಭಟನೆ ನಡೆಸಿದ್ದು, ಏಕಾಏಕಿ ಸರ್ವಿಸ್ ರಸ್ತೆಯಿಂದ ಸುವರ್ಣಸೌಧದ ಬಳಿಯ ರಾಷ್ಟ್ರೀಯ ಹೆದ್ದಾರಿ 4ಕ್ಕೆ ನುಗ್ಗಿದ್ದಾರೆ. ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಮೆರವಣಿಗೆಯಲ್ಲಿ ಬಂದಿದ್ದ ರೈತರು, ಸುವರ್ಣ ಗಾರ್ಡನ್​ನ ಟೆಂಟ್ ಬಳಿಗೆ ನೂರಾರು ರೈತರು ಆಗಮಿಸಿದ್ದಾರೆ. ರೈತರು ರೊಚ್ಚಿಗೇಳುತ್ತಿದ್ದಂತೆ ಸಚಿವ ಶಿವಾನಂದ ಪಾಟೀಲ್ ಓಡೋಡಿ ಬಂದಿದ್ದಾರೆ. ಸಚಿವರು ಸ್ಥಳಕ್ಕೆ ಬರುತ್ತಿದ್ದಂತೆ ರೈತ ಮುಖಂಡ ಚೂನಪ್ಪ ಪೂಜಾರಿಯಿಂದ ಬೇಡಿಕೆಗಳ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ರೈತರ ಸಾಲಮನ್ನಾ ಮಾಡಬೇಕು, ಪ್ರತಿ ಎಕರೆಗೆ 36 ಸಾವಿರ ರೂ. ಪರಿಹಾರ ನೀಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಹಿತ ಕಾಪಾಡುತ್ತೆ ಮತಯಾಚನೆ ಮಾಡಿತ್ತು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪರ ಮತಯಾಚಿಸಿದ್ದೆವು. ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಬರಬೇಕು ಎಂದಿದ್ದಾರೆ.

ಇದನ್ನೂ ಓದಿ: Belgavi Session: ಸದನದಲ್ಲಿ ಮಾರ್ಧನಿಸಿದ ಬಿಜೆಪಿ ಮುಖಂಡನ ಹಲ್ಲೆ ಪ್ರಕರಣ; ಸರ್ಕಾರ, ಬಿಜೆಪಿ ಜಟಾಪಟಿ

ಬೆಳೆಗೆ ನೀರು ಹಾಯಿಸಲು ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು. ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ಸಚಿವ ಶಿವಾನಂದ ಪಾಟೀಲ್ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಕೆ ಮಾಡಲಾಗಿದೆ. ಈ ವೇಳೆ ಪ್ರತಿಭಟನಾನಿರತ ರೈತರ ಮನವೊಲಿಕೆಗೆ ಸಚಿವರಾದ ಚಲುವರಾಯಸ್ವಾಮಿ ಮತ್ತು ಶಿವಾನಂದ ಪಾಟೀಲ್ ಹರಸಾಹಸ ಪಟ್ಟಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿಗೂ ತಟ್ಟಿದ ರೈತರ ಪ್ರತಿಭಟನೆ ಬಿಸಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ 4 ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ರೈತರ ಪ್ರತಿಭಟನೆ ಬಿಸಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೂ ತಟ್ಟಿದೆ. ರೈತರು ರಾಷ್ಟ್ರೀಯ ಹೆದ್ದಾರಿ ತಡೆದಿದ್ದರಿಂದ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಉದ್ರಿಕ್ತ ರೈತರನ್ನು ಪ್ರತಿಭಟನಾ ಟೆಂಟ್​ಗೆ ಕಳುಹಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಂದ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಂದಲ್ಲೂ ಸುವರ್ಣಸೌಧದ ಎದುರು ಕೊಂಡಸಕೊಪ್ಪ ಬಳಿ ಪ್ರತಿಭಟನೆ ಮಾಡಲಾಗಿದೆ. ರಾಜ್ಯ ಸರ್ಕಾರದ 6ನೇ ಗ್ಯಾರಂಟಿ ಕೂಡಲೇ ಜಾರಿ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂಪಾಯಿ ಸಂಬಳ ಹಾಗೂ ಅಂಗನವಾಡಿ ಸಹಾಯಕಿಯರಿಗೆ 10 ಸಾವಿರ ರೂಪಾಯಿ ನಿಗದಿ ಮಾಡಬೇಕು. ನಿವೃತ್ತರಿಗೆ 3 ಲಕ್ಷ ರೂಪಾಯಿ ನೀಡುವಂತೆ ಕಾರ್ಯಕರ್ತೆಯರಿಂದ ಒತ್ತಾಯಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:42 pm, Thu, 7 December 23