ಬಿಜೆಪಿಯಿಂದ ಪಕ್ಷಕ್ಕೆ ಬಂದವರಿಂದ ಕೊನೆಯ ವರೆಗೂ ಸಮಸ್ಯೆ: ಸವದಿ ವಿರುದ್ಧ ಸತೀಶ್ ಜಾರಕಿಹೊಳಿ‌ ಬಹಿರಂಗ ಅಸಮಾಧಾನ

| Updated By: ಗಣಪತಿ ಶರ್ಮ

Updated on: Jun 07, 2024 | 9:44 AM

ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರವೂ, ಚಿಕ್ಕೋಡಿಯಲ್ಲಿ ಗೆದ್ದ ನಂತರವೂ ಕಾಂಗ್ರೆಸ್ ಆಂತರಿಕ ಬೇಗುದಿ ತಣ್ಣಗಾಗಿಲ್ಲ. ಇದೀಗ ಬಿಜೆಪಿಯಿಂದ ಬಂದು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಲಕ್ಷ್ಮಣ್ ಸವದಿ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿಯಿಂದ ಪಕ್ಷಕ್ಕೆ ಬಂದವರಿಂದ ಕೊನೆಯ ವರೆಗೂ ಸಮಸ್ಯೆ: ಸವದಿ ವಿರುದ್ಧ ಸತೀಶ್ ಜಾರಕಿಹೊಳಿ‌ ಬಹಿರಂಗ ಅಸಮಾಧಾನ
ಲಕ್ಷ್ಮಣ್ ಸವದಿ & ಸತೀಶ್ ಜಾರಕಿಹೊಳಿ
Follow us on

ಬೆಳಗಾವಿ, ಜೂನ್ 7: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿಗೆ ಗೆಲುವಾದರೂ ಪಕ್ಷದ ಒಳಬೇಗುದಿ ಹೆಚ್ಚಾಗಿದೆ. ಇದೀಗ ಶಾಸಕ ಲಕ್ಷ್ಮಣ್ (Laxman Savadi) ಸವದಿ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಬಿಜೆಪಿಯಿಂದ ಪಕ್ಷಕ್ಕೆ ಬಂದವರಿಂದ ಕೊನೆಯ ವರೆಗೂ ಸಮಸ್ಯೆಯಾಯಿತು ಎಂದಿದ್ದಾರೆ. ಅಥಣಿಯಲ್ಲಿ ಮಾತನಾಡಿದ ಅವರು, ಈಗ ಕಾಂಗ್ರೆಸ್​ಗೆ ಜಯ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಮುಖಂಡರು ಬದಲಾದರೂ ಕಾರ್ಯಕರ್ತರು ಬದಲಾಗಲಿಲ್ಲ. ಅಥಣಿಯಲ್ಲಿ 20-30 ಸಾವಿರ ಲೀಡ್ ಸಿಗುತ್ತೆ ಅಂದುಕೊಂಡಿದ್ದೆವು. ಆದರೆ ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಎಂದು ಹೇಳಿದ್ದಾರೆ.

ಅವರು ಏಕೆ ಹಾಗೆ ಮಾಡಿದರು, ಅವರ ಪ್ಲ್ಯಾನ್ ಏನಿತ್ತು ನೋಡೋಣ. ಅವರು ಸೀರಿಯಲ್​ನಲ್ಲಿ ಬರುವಂತೆ ನಿಧಾನ ಆಗುತ್ತಾ ಹೋದರು. ಸರಿಯಾಗಿ ಪ್ರಚಾರ ಮಾಡಲಿಲ್ಲ, ಇದನ್ನು ನಾವು ನೋಡಿದ್ದೇವೆ. ವಿಶ್ವಾಸ ಇಟ್ಟು ಕೊಟ್ಟಿದ್ದೆವು, ಬಹಳ ನಂಬಿದ್ದೆವು. ಆದರೆ ಬಹಳ ಮೋಸ ಮಾಡಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮಗೆ ಹತ್ತಿರ ಬರಲು ಅವರಿಗೆ ಒಳ್ಳೆಯ ಅವಕಾಶ ಇತ್ತು. ಆದರೆ, ಬಿಜೆಪಿಯಿಂದ ಪಕ್ಷಕ್ಕೆ ಬಂದವರು ಕೊನೆಯವರೆಗೆ ಸಮಸ್ಯೆ ಮಾಡಿದರು ಎಂದು ಲಕ್ಷ್ಮಣ್ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ತಮ್ಮಣ್ಣವರ್ ವಿರುದ್ಧ ಗುಡುಗಿದ ಸತೀಶ್

ಎಸ್ಸಿ ನಾಯಕರನ್ನು ತುಳಿದಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ್ ಆರೋಪಕ್ಕೆ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿ, ನಾನು ಯಾರನ್ನೂ ತುಳಿಯುವ ಪ್ರಶ್ನೆ ಇಲ್ಲ. ಚುನಾವಣೆಗೆ ಮೂರು ದಿನ ಇದ್ದಾಗಲೇ ಯಾರ ಕೈಗೂ ಶಾಸಕ ಸಿಕಿಲ್ಲ. ಸರಿಯಾಗಿ ಚುನಾವಣೆ ಮಾಡಲಿಲ್ಲ, ನಾನೇ ಇದ್ದು ಅವರನ್ನ ನೋಡಿದ್ದೇನೆ. ಅವರಿಗೆ ಟಿಕೇಟ್ ನಾವೇ ಕೊಡಿಸಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ತಮ್ಮ ಮಾವನ ಪರವಾಗಿ ಕೆಲಸವನ್ನು ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಮಿತ್ರಪಕ್ಷಗಳ ಬೇಡಿಕೆಯೇನು, ಮಂತ್ರಿಗಿರಿ ನೀಡಲು ಬಿಜೆಪಿ ಸೂತ್ರವೇನು? ಇಲ್ಲಿದೆ ವಿವರ

ಶಾಸಕ ಪಕ್ಷ ವಿರೋಧಿ ಕೆಲಸ ಮಾಡಿದರೂ ಕಾರ್ಯಕರ್ತರು ಪಕ್ಷ ಬಿಡಲಿಲ್ಲ. ಅವರ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ, ಮುಗಿದ ಹೋಗಿರುವ ಅಧ್ಯಾಯ. ಅವರು ವಿರೋಧ ಮಾಡಿದರೂ ನಮಗೆ ಗೆಲುವಾಗಿದೆ. ಶಾಸಕನ ಕಾರ್ಯವನ್ನು ಕೊನೆ ಗಳಿಗೆಯಲ್ಲಿ ನಾನೆ ನೊಡಿದ್ದೇನೆ. ಚುನಾವಣೆಗೆ ಎರಡು ದಿನ ಮುನ್ನ ತಮ್ಮಣ್ಣವರ್ ಎಲ್ಲಿ ಹೋದರು? ಎಷ್ಟು ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದಾರೆ ಹೇಳಲಿ ಎಂದು ಸತೀಶ್ ಜಾರಕಿಹೊಳಿ ಸವಾಲೆಸೆದರು.

ರಾಜ್ಯದ ಮತ್ತಷ್ಟುವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:42 am, Fri, 7 June 24