ಸಂತೋಷ್ ಆತ್ಮಹತ್ಯೆಗೆ ಹೊಸ ಟ್ವಿಸ್ಟ್; ರಮೇಶ್ ಜಾರಕಿಹೊಳಿ‌ ಬೆಂಬಲದಿಂದ ಕಾಮಗಾರಿ ಮಾಡಿಸಿದ್ದಾರೆಂದು ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷ ಹೇಳಿಕೆ

ಶಾಸಕ ರಮೇಶ್ ಜಾರಕಿಹೊಳಿ‌ ಬೆಂಬಲದಿಂದ ಸಂತೋಷ್ ಕಾಮಗಾರಿ ಮಾಡಿಸಿದ್ದಾರೆಂದು ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ಆರೋಪ ಮಾಡಿದ್ದಾರೆ

ಸಂತೋಷ್ ಆತ್ಮಹತ್ಯೆಗೆ ಹೊಸ ಟ್ವಿಸ್ಟ್; ರಮೇಶ್ ಜಾರಕಿಹೊಳಿ‌ ಬೆಂಬಲದಿಂದ ಕಾಮಗಾರಿ ಮಾಡಿಸಿದ್ದಾರೆಂದು ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷ ಹೇಳಿಕೆ
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
Edited By: ಆಯೇಷಾ ಬಾನು

Updated on: Apr 13, 2022 | 7:07 AM

ಬೆಳಗಾವಿ: ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ‌ ಬೆಂಬಲದಿಂದ ಸಂತೋಷ್ ಕಾಮಗಾರಿ ಮಾಡಿಸಿದ್ದಾರೆಂದು ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.

ಮೃತ ಸಂತೋಷ್ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ದಾರೆ. ಸ್ಥಳೀಯ ಮಟ್ಟದ ನಾಯಕರು ಯಾರಾದರೂ ಪ್ರಕರಣದಲ್ಲಿ ಇನ್ವಾಲ್ವ್ ಅದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾಳ್ಕರ್, ಖಂಡಿತವಾಗಿ ಸ್ಥಳೀಯ ಮಟ್ಟದ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ. ಆ ಟೈಮ್‌ನಲ್ಲಿ ಯಾರು ಮಂತ್ರಿಗಳಿದ್ದರು? ಯಾರ ಜೊತೆ ಒಡನಾಟ ಇತ್ತು? ಸಂತೋಷ್ ಪಾಟೀಲ್‌ರವರು ಬಿಜೆಪಿ ಕಾರ್ಯಕರ್ತರು. ಮೊನ್ನೆ ನಡೆದ ಎಂಎಲ್‌ಸಿ ಎಲೆಕ್ಷನ್‌ನಲ್ಲಿ ಯಾರ ಪರವಾಗಿ ಕೆಲಸ ಮಾಡಿದ್ದಾರೆ ಗೊತ್ತಾಗುತ್ತದೆ. ಯಾರ ಪರವಾಗಿ ಓಡಾಡಿದ್ದಾರೆ, ಯಾರ ಜೊತೆ ಒಡನಾಟ ಇತ್ತು? ಹಿಂಡಲಗಾ ಗ್ರಾ.ಪಂ. ಅಧ್ಯಕ್ಷ ನಾಗೇಶ್ ಗಾಡ್‌ಫಾದರ್ ಯಾರು? ಯಾರ ಧೈರ್ಯದಿಂದ ನಾಗೇಶ್ ಮನ್ನೋಳ್ಕರ್ ಕೆಲಸ ಮಾಡಿಸಿದ್ದಾರೆ? ಅದೆಲ್ಲಾ ಕೂಲಂಕುಷವಾಗಿ ತನಿಖೆಯಿಂದ ಹೊರಬರಬೇಕಾಗುತ್ತೆ.

ಇಲ್ಲಿ ಒಂದು ಜೀವ ಹೋಗಿದೆ ಇದರಲ್ಲಿ ರಾಜಕಾರಣ ಮಾಡೋದು ಬೇಡ. ಇಡೀ ಹಿಂಡಲಗಾ ಗ್ರಾಮದ ಎಲ್ಲಾ ಜನರಿಗೂ ಗೊತ್ತಿದೆ. 14 ಸಾವಿರ ವೋಟರ್ಸ್ ಇದ್ದಾರೆ, ಸುಮಾರು 20 ರಿಂದ 25 ಸಾವಿರ ಜನಸಂಖ್ಯೆ ಇರೋ ಈ ಊರಿನಲ್ಲಿ ಎಲ್ಲರಿಗೂ ಗೊತ್ತು. ಯಾರಿಂದ ಇವತ್ತು ಜೀವ ಹೋಗಿದೆ ಅಂತಾ. ಯಾರೋ ಒಬ್ಬರು ಯೂ ಗೋ ಅಹೆಡ್ ಅಂತಾ ಧೈರ್ಯ ನೀಡಿದ್ದಕ್ಕೆ, ನಾನೀದಿನಿ ನಾ ಮಾಡ್ತೀನಿ ಅಂದಿದ್ದಕ್ಕೆ ಆಗಿದೆ. ಈಗ ನಾವು ಕೂಡ 25 ರಿಂದ 30 ಲಕ್ಷ ರೂಪಾಯಿ ಕೆಲಸ ಯಾವುದೋ ಪ್ರವಾಹ ಬಂದಾಗ ಮಾಡಬೇಕಾದ್ರೆ ಆಯ್ತಪಾ ನೀನು ಮಾಡಪ್ಪಾ ಅಂತಾ ಹೇಳ್ತೀವಿ. ನಾವು ನಿಲ್ತೀವಿ, ಅಡ್ವಾನ್ಸ್‌ನಲ್ಲಿ ಕೆಲಸ ಮಾಡಿಸಿದರೂ ಅದನ್ನ ನಾವು ಸರಿ ಮಾಡಿಸಿಕೊಡ್ತೀವಿ. ಈ ನಾಲ್ಕು ಕೋಟಿ ಕಾಮಗಾರಿಗೆ ಯಾರಾದರೂ ಒಬ್ಬರು ಹೇಳಿರಬೇಕಲ್ಲ. ಅದನ್ನ ತಗೆಯುವಂತಹ ಕೆಲಸ ಇಲಾಖೆಯವರು ಮಾಡಲಿ ಎಂದು ರಮೇಶ್ ಜಾರಕಿಹೊಳಿ‌ ಅವರ ಬೆಂಬಲದಿಂದ ಸಂತೋಷ್ ಪಾಟೀಲ್ ಕೆಲಸ ಮಾಡಿರುವುದಾಗಿ ಪರೋಕ್ಷವಾಗಿ ಹೆಬ್ಬಾಳ್ಕರ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ; ಸಿಎಂ ಬೊಮ್ಮಾಯಿ ಇದ್ದ ಹೋಟೆಲ್​ಗೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು

Published On - 7:00 am, Wed, 13 April 22

Web contact

TV9 Kannada

Read More
Follow Us