ಅಮಾವಾಸ್ಯೆ ಕತ್ತಲಲ್ಲಿ ಮಲಗಲು ಜಮೀನಿಗೆ ಹೋಗ್ತಿದ್ದ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದರು, ಕಾರಣ ಏನು?

ಊರಿಗೆ ಬೇಕಾದವ, ಮನೆಗೆ ಆಧಾರವಾಗಿದ್ದವ ಬರ್ಬರವಾಗಿ ಹತ್ಯೆಯಾಗಿದ್ದು ಇಡೀ ಗ್ರಾಮಸ್ಥರ ನಿದ್ದೆಗೆಡಿಸಿದೆ. ಅದೇನೆ ಇರಲಿ ತನ್ನ ಪಾಡಿಗೆ ತಾನಿದ್ದು ತಾನೇ ದುಡಿದು ನೆಮ್ಮದಿಯಿಂದ ಜೀವನ ಕಟ್ಟಿಕೊಳ್ತಿದ್ದವ, ಅದ್ಯಾವ ಕಾರಣಕ್ಕೆ, ಯಾರು ಹತ್ಯೆ ಮಾಡಿದರು ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ಹೊರ ಬರಬೇಕಿದೆ.

ಅಮಾವಾಸ್ಯೆ ಕತ್ತಲಲ್ಲಿ ಮಲಗಲು ಜಮೀನಿಗೆ ಹೋಗ್ತಿದ್ದ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದರು, ಕಾರಣ ಏನು?
ಯುವಕನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಮಾಡಿದರು

Updated on: Feb 22, 2023 | 2:48 PM

ಆತ ವಿಕಲಾಂಗಚೇತನ (physically challenged) ಆಗಿದ್ರೂ ತನ್ನ ಕಾಲ ಮೇಲೆ ತಾನೂ ನಿಂತುಕೊಂಡು ಇಡೀ ಗ್ರಾಮಕ್ಕೆ ಮಾದರಿಯಾಗಿದ್ದ. ಫೋಟೋಗ್ರಫಿ ಮಾಡುವುದರ ಜತೆಗೆ ಜಮೀನಿನಲ್ಲಿ ಕೋಳಿ ಸಾಕಾಣಿಕೆ ಕೂಡ ಮಾಡಿ ಸೈ ಎನಿಸಿಕೊಂಡಿದ್ದ. ಕೇಳಿದವರಿಗೆ ಹಣ ಸೇರಿದಂತೆ ಎಲ್ಲಾ ರೀತಿಯ ಸಹಾಯ ಕೂಡ ಮಾಡ್ತಿದ್ದ. ಆದರೆ ನಿನ್ನೆ ಜಮೀನಿಗೆ ಹೋಗುವ ಮಾರ್ಗದಲ್ಲೇ ಬರ್ಬರವಾಗಿ ಹತ್ಯೆಯಾಗಿ (murder) ಹೋಗಿದ್ದಾನೆ. ಅಷ್ಟಕ್ಕೂ ಅಮಾವಾಸ್ಯೆಯ ಕತ್ತಲ ರಾತ್ರಿಯಲ್ಲಿ ಆಗಿದ್ದೇನೂ? ಯಾರ ಜೊತೆಗೂ ವೈರತ್ವ ಬೆಳಸಿಕೊಳ್ಳದವ ಕೊಲೆಯಾಗಿದ್ಯಾಕೆ ಅಂತೀರಾ ಈ ಸ್ಟೋರಿ ನೋಡಿ…

ಮಗನನ್ನ ಕಳೆದುಕೊಂಡು ಗೋಳಾಡುತ್ತಿರುವ ಕುಟುಂಬಸ್ಥರು, ಎಲ್ಲರಿಗೂ ಬೇಕಾದ ಹುಡುಗ ಕೊಲೆಯಾದ ವಿಚಾರ ಕೇಳಿ ಶಾಕ್ ಆದ ಗ್ರಾಮಸ್ಥರು, ಜಮೀನಿನ ಕಾಲು ದಾರಿಯೂದ್ದಕ್ಕೂ ಚಿಮ್ಮಿರುವ ರಕ್ತ, ಬಾವಿ ಬಳಿ ಗ್ರಾಮಸ್ಥರ ಜಮಾವಣೆ… ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ (belagavi) ತಾಲೂಕಿನ ಬಸರಿಕಟ್ಟಿ (basarikatte) ಗ್ರಾಮದಲ್ಲಿ. ಮೇಲಿನ ಫೋಟೊದಲ್ಲಿರುವ ಯುವಕನ ಹೆಸರು ಮಾರುತಿ ಕನ್ನೀಕರ್. 32 ವರ್ಷದ ಈತನಿಗೆ ಇನ್ನೂ ಮದುವೆಯಾಗಿರಲಿಲ್ಲ‌. ಒಂದು ಕೈ ಸರಿಯಿಲ್ಲದಿದ್ರೂ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಉದ್ದೇಶದಿಂದ ಊರಲ್ಲಿ ಪೋಟೋ ಸ್ಟೂಡಿಯೋ ಇಟ್ಟುಕೊಂಡಿದ್ದ. ಜತೆಗೆ ಜಮೀನಿನಲ್ಲಿ ಕೋಳಿ ಫಾರಂ ಕೂಡ ಮಾಡಿ ಜೀವನ ನಡೆಸುತ್ತಿದ್ದ. ಇನ್ನೂ ಮದುವೆಯಾಗದ ಈತನಿಗೆ ಅಣ್ಣ ಮತ್ತು ಅಕ್ಕ ಇದ್ದು ಆ ಇಬ್ಬರದ್ದೂ ಮದುವೆಯಾಗಿತ್ತು. ಇನ್ನು ಊರಲ್ಲಿ ರೇಶನ್ ಕಾರ್ಡ್ ಮಾಡಿಕೊಡುವುದರಿಂದ ಹಿಡಿದು ಸಣ್ಣ ಪುಟ್ಟ ಸಹಾಯ ಮಾಡ್ತಾ ಎಲ್ಲರಿಗೂ ಬೇಕಾಗಿದ್ದ ಈತ ಮೊನ್ನೆ ಸೋಮವಾರ ಜಮೀನಿನಲ್ಲಿ ಮಲಗಲೆಂದು ಹೊರಟ್ಟಿದ್ದವ ಮಾರ್ಗ ಮಧ್ಯದಲ್ಲೇ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾನೆ‌. ಜಮೀನಿನ ಕೂಗಳತೆ ದೂರದಲ್ಲಿ ಊರಿನ‌ ಹೊರವಲಯದಲ್ಲಿ ದುಷ್ಕರ್ಮಿಗಳು ಈತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಮಾಡಿದ್ದಾರೆ.

ಮೊನ್ನೆ ರಾತ್ರಿ ಮಾರುತಿ ಊಟ ಮಾಡಿದ್ದಾನೆ. ಈ ವೇಳೆ ಅದೊಂದು ಫೋನ್ ಕಾಲ್ ಈತನಿಗೆ ಬಂದಿತ್ತು. ಮಲಗಲು ಹೋಗ್ತೇನಿ ಅಂತಾ ಹೇಳಿ ಮನೆಯಿಂದ ಹೊರಟ್ಟಿದ್ದಾನೆ. ಊರ ಹೊರ ವಲಯದಲ್ಲಿರುವ ಮರಾಠಿ ಶಾಲೆಯ ಪಕ್ಕದಲ್ಲಿ ಐದಾರು ಜನ ಯುವಕರು ಪಾರ್ಟಿ ಮಾಡಿಕೊಂಡು ಕುಳಿತಿದ್ದರು. ಮಾರುತಿ ಜಮೀನಿಗೆ ಹೋಗುವುದನ್ನ ಕಂಡು ಆತನನ್ನ ಕರೆದಿದ್ದಾರೆ. ಕುಡಿಯುವ ಚಟ ಇಲ್ಲದಿದ್ರೂ ಪರಿಚಯಸ್ಥರು ಕರೆದರು ಅಂತಾ ಅವರ ಬಳಿ ಬೈಕ್ ಸಮೇತ ಹೋಗಿದ್ದಾನೆ‌.‌

ಹೀಗೆ ಹೋದವನ ಜತಗೆ ಜಗಳವಾಡಿದ ದುಷ್ಕರ್ಮಿಗಳು ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಆತನ ಬೈಕ್ಅನ್ನು ಕೊಲೆ ಮಾಡಿದ ಸ್ಥಳದಲ್ಲಿಯೇ ಬಿಟ್ಟು, ಆತನ ಶವವನ್ನ ಬೇರೆಯವರ ಜಮೀನಿನ ಮಧ್ಯದಲ್ಲಿದ್ದ ಬಾವಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಇನ್ನು ರಾತ್ರಿಯಿಂದ ಫೋನ್ ಕರೆ ಮಾಡಿದ್ರೂ ತೆಗೆಯದಿದ್ದಾಗ ಕೋಳಿ ಫಾರಂಗೆ ಬಂದು ನೋಡಿದಾಗ ಅಲ್ಲಿಯೂ ಮಾರುತಿ ಕಾಣಿಸಿಲ್ಲ.

ಈ ವೇಳೆ ಎಲ್ಲ ಕಡೆ ಆತನನ್ನ ಹುಡುಕಿದಾಗ ಶಾಲೆಯ ಪಕ್ಕದಲ್ಲಿ ಆತನ ಬೈಕ್ ಬಿದ್ದಿರುವುದು ಸಿಕ್ಕಿದೆ‌. ಇದಾದ ಬಳಿಕವೂ ಹುಡುಕಾಟ ಮುಂದುವರಿಸಿದ್ದಾರೆ. ಈ ವೇಳೆ ಗ್ರಾಮದ ಅದೊಬ್ಬರ ಜಮೀನಿನಲ್ಲಿದ್ದ ಬಾವಿಯಲ್ಲಿ ಶವ ಸಿಕ್ಕಿದೆ. ಮಾರಿಹಾಳ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನ ಬಾವಿಯಿಂದ ಮೇಲೆತ್ತಿ ಬಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ಕುಟುಂಬಸ್ಥರಿಂದ ಕೇಸ್ ಪಡೆದು ತನಿಖೆ ಆರಂಭಿಸಿದ್ದಾರೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಕೊಲೆಗಡುಕರಿಗೆ ತಕ್ಕ ಶಿಕ್ಷೆಯಾಗಬೇಕು ಅಂತಾ ಒತ್ತಾಯಿಸಿದ್ದಾರೆ.

ಒಟ್ಟಾರೆ ಊರಿಗೆ ಬೇಕಾದವ, ಮನೆಗೆ ಆಧಾರವಾಗಿದ್ದವ ಬರ್ಬರವಾಗಿ ಹತ್ಯೆಯಾಗಿದ್ದು ಇಡೀ ಗ್ರಾಮಸ್ಥರ ನಿದ್ದೆಗೆಡಿಸಿದೆ. ಅದೇನೆ ಇರಲಿ ತನ್ನ ಪಾಡಿಗೆ ತಾನಿದ್ದು ತಾನೇ ದುಡಿದು ನೆಮ್ಮದಿಯಿಂದ ಜೀವನ ಕಟ್ಟಿಕೊಳ್ತಿದ್ದವ, ಅದ್ಯಾವ ಕಾರಣಕ್ಕೆ, ಯಾರು ಹತ್ಯೆ ಮಾಡಿದರು ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ಹೊರ ಬರಬೇಕಿದೆ.

ವರದಿ: ಸಹದೇವ ಮಾನೆ, ಟಿವಿ9, ಬೆಳಗಾವಿ

 

Published On - 1:38 pm, Wed, 22 February 23