ಕೊರೊನಾ ಓಡಿಸಲು ನೂರಾರು ಕೆಜಿ ಅನ್ನ ಚೆಲ್ಲಿ ಮೌಢ್ಯಾಚರಣೆ, ಯುವಕರ ದೂರಿನ ಪ್ರತಿ ವೈರಲ್!

Superstition: ಕೊರೊನಾವನ್ನ ಓಡಿಸಬೇಕು ಎಂದು ಪ್ರತಿ ಮನೆಯಿಂದ ಅನ್ನ ಸಂಗ್ರಹಿಸಿ ಅದನ್ನು ಊರಿನ ಗ್ರಾಮಸ್ಥರು ಊರಿನ ಹೊರಗೆ ನಾಲ್ಕು ದಿಕ್ಕುಗಳು ಸೇರಿದಂತೆ ಊರಿನ ಸುತ್ತ ಎಸೆದು ಬರುತ್ತಿದ್ದರು. ಈಗ ಇದೇ ಘಟನೆಗೆ ಸಂಬಂಧಿಸಿ ದೂರಿನ ಪ್ರತಿಯೊಂದು ವೈರಲ್ ಆಗಿದೆ.

ಕೊರೊನಾ ಓಡಿಸಲು ನೂರಾರು ಕೆಜಿ ಅನ್ನ ಚೆಲ್ಲಿ ಮೌಢ್ಯಾಚರಣೆ, ಯುವಕರ ದೂರಿನ ಪ್ರತಿ ವೈರಲ್!
ಯುವಕರ ದೂರಿನ ಪ್ರತಿ ವೈರಲ್
Updated By: ಸಾಧು ಶ್ರೀನಾಥ್​

Updated on: May 26, 2021 | 10:56 AM

ಬಳ್ಳಾರಿ: ಜಿಲ್ಲೆಯ ಕಗ್ಗಲ್ಲು ಗ್ರಾಮದಲ್ಲಿ ಮಹಾಮಾರಿ ಕೊರೊನಾ ದೂರವಾಗಲಿ ಎಂದು ಗ್ರಾಮದ ಜನರೆಲ್ಲಾ ಮಡಿಯಿಂದ ಮೊಸರು ಬೆರೆಸಿದ ನೂರಾರು ಕೆಜಿ ಅನ್ನವನ್ನು ಗ್ರಾಮದ ಸುತ್ತೆಲ್ಲ ಸುರಿದು ಮೌಢ್ಯ ಆಚರಣೆಯಲ್ಲಿ ಮುಳುಗಿದ್ದರು. ಈ ಘಟನೆ ಸಂಬಂಧ ದೂರಿನ ಪ್ರತಿಯೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಪೊಲೀಸರಿಗೆ ಈ ರೀತಿಯ ಯಾವುದೇ ದೂರು ಬಂದಿಲ್ಲವಂತೆ.

ಹೌದು ನಿನ್ನೆ ಟಿವಿ9 ಡಿಜಿಟಲ್​ನಲ್ಲಿ ಮೌಢ್ಯ ಆಚರಣೆಯ ಬಗ್ಗೆ ವರದಿ ಪ್ರಕಟವಾಗಿತ್ತು. ಕೊರೊನಾವನ್ನ ಓಡಿಸಬೇಕು ಎಂದು ಪ್ರತಿ ಮನೆಯಿಂದ ಅನ್ನ ಸಂಗ್ರಹಿಸಿ ಅದನ್ನು ಊರಿನ ಗ್ರಾಮಸ್ಥರು ಊರಿನ ಹೊರಗೆ ನಾಲ್ಕು ದಿಕ್ಕುಗಳು ಸೇರಿದಂತೆ ಊರಿನ ಸುತ್ತ ಎಸೆದು ಬರುತ್ತಿದ್ದರು. ಈಗ ಇದೇ ಘಟನೆಗೆ ಸಂಬಂಧಿಸಿ ದೂರಿನ ಪ್ರತಿಯೊಂದು ವೈರಲ್ ಆಗಿದೆ.

ಕೊರೊನಾ ಸೋಂಕು ತೊಲಗಿಸಲು ಡಿ.ಕಗ್ಗಲ್ಲು ಗ್ರಾಮಸ್ಥರಿಂದ ಮೌಢ್ಯಾಚರಣೆ ಹಿನ್ನೆಲೆಯಲ್ಲಿ ಈ ಆಚರಣೆಗೆ ಕಾರಣರಾದ ಗ್ರಾಮದ ಮುಖಂಡರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮದ ಯುವಕರು ಮೋಕಾ ಠಾಣೆ ಪಿಎಸ್ಐಗೆ ಬರೆದಿದ್ದಾರೆ ಎನ್ನಲಾದ ದೂರಿನ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಮೋಕಾ ಪೊಲೀಸ್ ಠಾಣೆಗೆ ಯಾರೊಬ್ಬರೂ ಅಧಿಕೃತವಾಗಿ ಭೇಟಿ ನೀಡುವುದಾಗಲಿ ಅಥವಾ ಅಂಚೆ ಮೂಲಕವಾಗಲಿ ಯಾವುದೇ ದೂರು ಸಲ್ಲಿಸಿಲ್ಲ. ಘಟನೆ ಸಂಬಂಧ ಯಾವುದೇ ಪ್ರಕರಣವೂ ದಾಖಲು ಆಗಿಲ್ಲ ಎಂದು ಮೋಕಾ ಠಾಣೆಯ ಪಿಎಸ್ಐ ರಘು ಸ್ಪಷ್ಟಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಅಜ್ಜಿಹಬ್ಬ ಆಚರಣೆ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪಟ್ರೆಹಳ್ಳಿ ಗ್ರಾಮದಲ್ಲಿ ಕೊವಿಡ್ ತೊಲಗಲೆಂದು ಅಜ್ಜಿಹಬ್ಬ ಆಚರಣೆ ಮಾಡಲಾಗಿದೆ. ಪಟ್ರೆಹಳ್ಳಿಯ ಕರೇಕಲ್ ಮಾರಮ್ಮಗೆ ಸಾಂಪ್ರದಾಯಿಕ ಎಡೆ ನೀಡಿ ಗ್ರಾಮಸ್ಥರು ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಅನ್ನ ಮಾಡಿ ಬೀದಿಗೆ ಹಾಕಿದರೆ ಕೊರೊನಾ ಮಾರಿ ಹೋಗುತ್ತದಾ? ಇದೆಂತಹ ನಂಬಿಕೆಯಲ್ಲಿ ಮುಳುಗಿದ್ದಾರೆ ಜನ