ರಿಹ್ಯಾಬ್ ಸೆಂಟರ್​​ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು: ಎಣ್ಣೆ ಬಿಡಿಸುವ ನೆಪದಲ್ಲಿ ಕೊಂದೇ ಬಿಟ್ರಾ?

ಆತ ಮದ್ಯಪಾನ ವ್ಯಸನಿಯಾಗಿದ್ದ. ಹೀಗಾಗಿ ಆತನ ಕುಟುಂಬ ಸಾಕಷ್ಟು ಪರಿತಪ್ಪಿಸುತಿತ್ತು. ಈ ನಡುವೆ ರಿಹ್ಯಾಬ್ ಸೆಂಟರ್​​ಗೆ ಸೇರಿಸುವಂತೆ ಸ್ನೇಹಿತರ ಸಲಹೆ ಮೇರೆಗೆ ದಾಖಲಿಸಲಾಗಿತ್ತು. ಆದರೆ ದಾಖಲಾದ ನಾಲ್ಕು ದಿನದಲ್ಲಿ ಆ ವ್ಯಕ್ತಿ ಸಾವನಪ್ಪಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪ ಕೇಳಿಬಂದಿದೆ.

ರಿಹ್ಯಾಬ್ ಸೆಂಟರ್​​ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು: ಎಣ್ಣೆ ಬಿಡಿಸುವ ನೆಪದಲ್ಲಿ ಕೊಂದೇ ಬಿಟ್ರಾ?
ಮೃತ ವ್ಯಕ್ತಿ

Updated on: Dec 04, 2025 | 7:14 PM

ನೆಲಮಂಗಲ, ಡಿಸೆಂಬರ್​​ 04: ಒಂದು ವಾರದ ಹಿಂದಷ್ಟೇ ರಿಹ್ಯಾಬ್ ಸೆಂಟರ್​​ನಲ್ಲಿ (rehab center) ಓರ್ವ ಯುವಕ ಮೃತಪಟ್ಟಿದ್ದ. ಆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಅದರ ಬೆನ್ನಲ್ಲೇ  ಮತ್ತೋರ್ವ ವ್ಯಕ್ತಿಯ ಸಾವಾಗಿದೆ (death). ಬೆಂಗಳೂರಿನ ಮಾದನಾಯಕನಹಳ್ಳಿ ಬಳಿಯ ಅಮ್ಮೂಸ್ ರಿಹ್ಯಾಬ್ ಸೆಂಟರ್​​ನಲ್ಲಿ ಕೇರಳ ಮೂಲದ ಕೆ.ಜೆ.ಮನೀಶ್(42) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಕೈ-ಕಾಲು ಕಟ್ಟಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಲೆ ಆರೋಪ

ಹೌದು.. ರಿಹ್ಯಾಬ್ ಸೆಂಟರ್​ನಲ್ಲಿ ಮತ್ತೋರ್ವ ವ್ಯಕ್ತಿ ಸಾವನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸೆಂಟರ್ ನಲ್ಲಿ ವ್ಯಕ್ತಿಯ ಕೈ, ಕಾಲುಗಳನ್ನ ಹಗ್ಗದಿಂದ ಕಟ್ಟಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದರ್ಶನ್ ಸಾವು: ಪೊಲೀಸರಿಂದಲೇ ಕೊಲೆ ಆರೋಪ, ಪ್ರಕರಣ ಸಿಐಡಿ ಹೆಗಲಿಗೆ

ಕೇರಳದ ಮೂಲದ ಮನೀಶ್ (42) ಸಾವನಪ್ಪಿರುವ ವ್ಯಕ್ತಿ. ರಿಹ್ಯಾಬ್ ಸೆಂಟರ್​​ ಸಿಬ್ಬಂದಿ ಚಿತ್ರಹಿಂಸೆ ನೀಡಿರುವ ದೃಶ್ಯ ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿದ್ದು, 2 ಗಂಟೆಗಳ ಕಾಲ ಇರಬೇಕಾದ ವಿಡಿಯೋ ಕೇವಲ 2:42 ನಿಮಿಷ ಮಾತ್ರ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಇನ್ನು ಕುಟುಂಬಸ್ಥರು ಮಾದನಾಯಕನಹಳ್ಳಿ ಬಳಿಯ ಅಮ್ಮೂಸ್ ರಿಹ್ಯಾಬ್ ಸೆಂಟರ್​ಗೆ ಮನೀಶ್​​ರನ್ನು 4 ದಿನದ ಹಿಂದೆ ಸೇರಿಸಿದ್ದರು. ಸದ್ಯ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮನೀಶ್, ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಗಾರಕ್ಕೆ ಮೃತದೇಹವನ್ನು ರವಾನಿಸಲಾಗಿದ್ದು, ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ. ಇತ್ತ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಎಂಕೆ ದೊಡ್ಡಿ ಲಾಕಪ್​ ಡೆತ್​ ಕೇಸ್​: ಎಎಸ್ಐ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

ಇತ್ತೀಚೆಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಿಹ್ಯಾಬ್ ಸೆಂಟರ್​ನಲ್ಲಿ ಯುವಕ ಸಾವನ್ನಪ್ಪಿದ್ದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೇ ಕೇಸ್​​ನಲ್ಲಿ ಅಧಿಕಾರಿಗಳ ತಲೆದಂಡಕ್ಕೆ ಕೂಡ ಕಾರಣವಾಗಿದ್ದು, ಇದೀಗ ಮನೀಶ್ ಸಾವು ಕೂಡ ಸಾಕಷ್ಟು ಅನುಮಾನಸ್ಪದ ರೀತಿಯಲ್ಲಿದ್ದು, ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕಿದೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:14 pm, Thu, 4 December 25