213 ಜನ ಮಕ್ಕಳಿದ್ರು ಈ ಸರ್ಕಾರಿ ಶಾಲೆಗಿಲ್ಲ ಒಬ್ಬ ಟೀಚರ್; ಕೊಠಡಿಗೆ ಬೀಗ ಜಡಿದು ಪೋಷಕರು, ಮಕ್ಕಳಿಂದ ಪ್ರತಿಭಟನೆ

ಸಾಕಷ್ಟು ಕಡೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರವುದೇ ವಿರಳವಾಗಿದ್ದು, ಮಕ್ಕಳನ್ನು ಶಾಲೆಯತ್ತ ಸೆಳೆಯಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ, ಆದ್ರೆ, ಇಲ್ಲೊಂದು ಕಡೆ ಮಾತ್ರ ನೂರಾರು ಸಂಖ್ಯೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿದ್ರು, ಪಾಠ ಮಾಡಲು ಶಿಕ್ಷಕರೆ ಇಲ್ಲದಾಗಿದೆ. ಇದೀಗ ಶಿಕ್ಷಕರ ನೇಮಕಕ್ಕೆ ಮಕ್ಕಳು ಮತ್ತು ಪೋಷಕರೆ ಹೋರಾಟದ ಹಾದಿ ಹಿಡಿದಿದ್ದಾರೆ.

213 ಜನ ಮಕ್ಕಳಿದ್ರು ಈ ಸರ್ಕಾರಿ ಶಾಲೆಗಿಲ್ಲ ಒಬ್ಬ ಟೀಚರ್; ಕೊಠಡಿಗೆ ಬೀಗ ಜಡಿದು ಪೋಷಕರು, ಮಕ್ಕಳಿಂದ ಪ್ರತಿಭಟನೆ
ಸರ್ಕಾರಿ ಶಾಲೆಯ ಮುಂದೆ ಪೋಷಕರ ಪ್ರತಿಭಟನೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Sep 08, 2023 | 9:38 PM

ಬೆಂಗಳೂರು ಗ್ರಾಮಾಂತರ, ಸೆ.08: ಮೂರು ತಿಂಗಳಿಂದ ಶಿಕ್ಷಕರ (Teachers) ನೇಮಕ ಮಾಡದಕ್ಕೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೇರಿ ಶಾಲೆಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹೌದು, ಜಿಲ್ಲೆಯ ಹೊಸಕೋಟೆ (Hoskote) ತಾಲೂಕಿನ ಶಿವನಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ 7 ನೇ ತರಗತಿ ವರೆಗೂ ಶಿಕ್ಷಣವಿದ್ದು, ಪ್ರತಿನಿತ್ಯ 213 ವಿದ್ಯಾರ್ಥಿಗಳು ಅಕ್ಕ ಪಕ್ಕದ ಹಳ್ಳಿಗಳಿಂದ ಇಲ್ಲಿಗೆ ಬರುತ್ತಾರೆ. ಹೀಗಾಗಿ ಸರ್ಕಾರಿ ಶಾಲೆ ಪ್ರತಿನಿತ್ಯ ಮಕ್ಕಳಿಂದಲೆ ತುಂಬುತ್ತಿದ್ದು, ಶಾಲೆಯಲ್ಲಿದ್ದ 6 ಜನ ಶಿಕ್ಷಕರು ಮಕ್ಕಳಿಗೆ ಉತ್ತಮವಾಗೆ ಪಾಠ ಮಾಡಿಕೊಂಡು ಹೋಗುತ್ತಿದ್ದರು. ಆದ್ರೆ, ಕಳೆದ ಎರಡು ತಿಂಗಳ ಹಿಂದೆ ಶಿಕ್ಷಣ ಇಲಾಖೆ ಮಾಡಿದ್ದ ವರ್ಗಾವಣೆಯಲ್ಲಿ ಶಾಲೆಯ ಆರಕ್ಕೆ ಆರು ಜನ ಶಿಕ್ಷಕರು ಸಹ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡಿದ್ದು, ಎಲ್ಲರೂ ಬೇರೆ ಬೇರೆ ಶಾಲೆಗಳಿಗೆ ಹೋಗಿದ್ದಾರೆ.

ಶಾಲೆಗೆ ಬೀಗ ಹಾಕಿ, ಮಕ್ಕಳೊಂದಿಗೆ ಪೋಷಕರು ಪ್ರತಿಭಟನೆ

ಹೀಗಾಗಿ ಇಂದಲ್ಲ ನಾಳೆ ಹೊಸ ಶಿಕ್ಷಕರು ಬರುತ್ತಾರೆ ಎಂದು ಪೋಷಕರು ಮತ್ತು ಮಕ್ಕಳು ಕಾದು ಕುಳಿತಿದ್ದು, ಕಳೆದ ಎರಡು ತಿಂಗಳಿಂದ ಯಾವೋಬ್ಬ ಸರ್ಕಾರಿ ಶಿಕ್ಷಕರು ನೇಮಕವಾಗಿಲ್ಲ. ಜೊತೆಗೆ ಶಿಕ್ಷಕರು ಬಾರದ ಕಾರಣ ಗ್ರಾಮದಿಂದ ಬಂದಿದ್ದ ಮೂವರು ಅತಿಥಿ ಶಿಕ್ಷಕರೇ ಎಲ್ಲರನ್ನೂ ಒಂದೆಡೆ ಕೂರಿಸಿ ಪಾಠ ಮಾಡುತ್ತಿದ್ದು, ಮಕ್ಕಳು ಸರಿಯಾಗಿ ಕಲಿಯಲು ಆಗುತ್ತಿರಲಿಲ್ಲ. ಇನ್ನೂ ಕಳೆದ ಎರಡು ತಿಂಗಳಿಂದ ಅಧಿಕಾರಿಗಳಿಗೆ ಮನವಿ ನೀಡಿ ನೀಡಿ ಸುಸ್ತಾದ ಗ್ರಾಮಸ್ಥರು, ಇಂದು(ಸೆ.08) ಶಾಲೆಗೆ ಬೀಗ ಜಡಿದು ಸರ್ಕಾರಿ ಶಿಕ್ಷಕರನ್ನು ನೇಮಕ ಮಾಡುವಂತೆ ಶಾಲೆಯ ಮುಂದೆ ಮಕ್ಕಳ ಜೊತೆ ಕೂತು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ದಾವಣಗೆರೆ: ಮೊರಾರ್ಜಿ ವಸತಿ ಶಾಲೆಯಲ್ಲಿ ಊಟ ಸೇವಿಸಿ 38 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ; ಮೂವರ ಸ್ಥಿತಿ ಗಂಭೀರ

ಶಾಲೆಗೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ

ಇನ್ನು ಮಕ್ಕಳು ಮತ್ತು ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ಶಾಲೆಗೆ ದೌಡಾಯಿಸಿ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಅವರು ಗ್ರಾಮಸ್ಥರ ಮನವೊಲಿಸುವ ಯತ್ನ ಮಾಡಿದ್ರು. ಆದ್ರೆ, ಶಿಕ್ಷಕರು ಬರುವವರೆಗೂ ನಾವು ಹೋಗಲ್ಲ ಎಂದು ಪೋಷಕರು ಪಟ್ಟು ಹಿಡಿದ ಕಾರಣ ಕೂಡಲೇ ಪಕ್ಕದ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರೊಬ್ಬರನ್ನ ಶಾಲೆಗೆ ತಾತ್ಕಾಲಿಕವಾಗಿ ನೇಮಕ ಮಾಡಿದರು. ಅಲ್ಲದೆ ಇನ್ನೊಂದು ವಾರದಲ್ಲಿ ಮೂವರು ಶಿಕ್ಷಕರನ್ನು ಶಾಲೆಗೆ ಕಳಿಸಿಕೊಡುವುದಾಗಿ ಹೇಳಿ ಪೋಷಕರ ಮನವೊಲಿಸಿದ್ರು.

ಒಟ್ಟಾರೆ ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಎಂಬಂತೆ ಸರ್ಕಾರಿ ಶಾಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಮಕ್ಕಳಿದ್ರು ಶಿಕ್ಷಕರನ್ನ ನೇಮಕ ಮಾಡದಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದ್ರು ಶಿಕ್ಷಣ ಇಲಾಖೆ ಎಚ್ಚೆತ್ತು ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವ ಕೆಲಸ ಮಾಡಬೇಕಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us