ಬೆಂಗಳೂರಿನಲ್ಲಿ ಚಿಪ್ ತಯಾರಿಕಾ ಘಟಕ ಆರಂಭಿಸಲಿದೆ ಎಎಂಡಿ; 3000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ

ಈ ವರ್ಷಾಂತ್ಯದ ಮುಗಿಯುವ ಮೊದಲು ಆರ್ ಆ್ಯಂಡ್ ಡಿ ಕೇಂದ್ರವನ್ನು ತೆರೆಯಲು ಎಎಮ್‌ಡಿ ಎದುರು ನೋಡುತ್ತಿದೆ. ಸುಮಾರು 3,000 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಎಎಮ್‌ಡಿ ಉದ್ದೇಶಿಸಿದೆ.

ಬೆಂಗಳೂರಿನಲ್ಲಿ ಚಿಪ್ ತಯಾರಿಕಾ ಘಟಕ ಆರಂಭಿಸಲಿದೆ ಎಎಂಡಿ; 3000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ
ಸಾಂದರ್ಭಿಕ ಚಿತ್ರ

Updated on: Jul 29, 2023 | 11:05 AM

ಬೆಂಗಳೂರು: ಸಾಂಟಾ-ಕ್ಲಾರಾ (ಕ್ಯಾಲಿಫೋರ್ನಿಯಾ) ಮೂಲದ ಸೆಮಿಕಂಡಕ್ಟರ್ (Semiconductor) ತಯಾರಕ ಕಂಪನಿ ಎಎಂಡಿ (AMD) ಬೆಂಗಳೂರಿನಲ್ಲಿ ಐದು ವರ್ಷಗಳ ಅವಧಿಯಲ್ಲಿ 400 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಚಿಂತನೆ ಮಾಡಿರುವುದಾಗಿ ಘೋಷಿಸಿದೆ. ಗುಜರಾತಿನ ಗಾಂಧಿನಗರದಲ್ಲಿ ನಡೆದ ‘ಸೆಮಿಕಾನ್ ಇಂಡಿಯಾ-2023’ರಲ್ಲಿ ಭಾಗವಹಿಸಿ ಮಾತನಾಡಿದ ಎಎಂಡಿ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಮಾರ್ಕ್ ಪೇಪರ್‌ಮಾಸ್ಟರ್, ಬೆಂಗಳೂರಿನಲ್ಲಿ ಅತಿದೊಡ್ಡ ಆರ್ ಆ್ಯಂಡ್ ಡಿ (Research and development) ಕೇಂದ್ರವನ್ನು ತೆರೆಯಲು ಕಂಪನಿ ಉದ್ದೇಶಿಸಿದೆ ಎಂದು ತಿಳಿಸಿದ್ದಾರೆ.

ಈ ವರ್ಷಾಂತ್ಯದ ಮುಗಿಯುವ ಮೊದಲು ಆರ್ ಆ್ಯಂಡ್ ಡಿ ಕೇಂದ್ರವನ್ನು ತೆರೆಯಲು ಎಎಮ್‌ಡಿ ಎದುರು ನೋಡುತ್ತಿದೆ ಎಂದು ಪೇಪರ್‌ಮಾಸ್ಟರ್ ಹೇಳಿದ್ದಾರೆ. ಸುಮಾರು 3,000 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಎಎಮ್‌ಡಿ ಆಶಿಸಿದೆ ಎಂದು ಅವರು ಹೇಳಿರುವುದಾಗಿ ‘ನ್ಯೂಸ್ 9’ ವರದಿ ಮಾಡಿದೆ.

ಏತನ್ಮಧ್ಯೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ಆರ್ ಆ್ಯಂಡ್ ಡಿ ಘಟಕವನ್ನು ಹೊಂದುವ ಎಎಮ್‌ಡಿಯ ನಿರ್ಧಾರವನ್ನು ಸ್ವಾಗತಿಸಿದರು. ಈ ಕ್ರಮವು ಕೇವಲ ನುರಿತ ಸೆಮಿಕಂಡಕ್ಟರ್ ಎಂಜಿನಿಯರ್‌ಗಳಿಗೆ ಉದ್ಯೋಗವನ್ನು ಒದಗಿಸುವುದಷ್ಟೇ ಅಲ್ಲ, ಭಾರತವು ಜಾಗತಿಕ ಪ್ರತಿಭಾ ಕೇಂದ್ರವಾಗಬೇಕೆಂಬ ಪ್ರಧಾನಿ ಮೋದಿಯವರ ದೃಷ್ಟಿಯನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿನ ಜಾಗತಿಕ ಆರ್ ಆ್ಯಂಡ್ ಡಿ ಉದ್ಯೋಗಿಗಳಲ್ಲಿ ಶೇ 48 ರಷ್ಟು ಬೆಂಗಳೂರಿನವರಾಗಿದ್ದಾರೆ. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಗತಿಕ ಆರ್ ಆ್ಯಂಡ್ ಡಿ ಘಟಕಗಳ ಒಟ್ಟು ಸಂಖ್ಯೆ 1,150 ಕ್ಕಿಂತ ಹೆಚ್ಚಿವೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ AI ಕ್ಯಾಮೆರಾ: ಮಿತಿಗಿಂತ ಜಾಸ್ತಿ ವೇಗವಾಗಿ ವಾಹನ ಓಡಿಸಿದ್ರೆ ಬೀಳುತ್ತೆ ಫೈನ್..!

ಚಿಪ್ ತಯಾರಿಕೆ ಅಥವಾ ಸೆಮಿಕಂಡಕ್ಟರ್ ತಯಾರಿಕೆ ಕ್ಷೇತ್ರಕ್ಕೆ ಕೋವಿಡ್ ಸಾಂಕ್ರಾಮಿಕದ ನಂತರ ಪೂರೈಕೆ ಸರಪಳಿಗೆ ಅಡ್ಡಿಯಾಗಿದ್ದರಿಂದ ಹೊಡೆತವಾಗಿತ್ತು. ಚೀನಾದ ಮೇಲಿನ ಅತಿಯಾದ ಅವಲಂಬನೆಯೂ ಅದಕ್ಕೆ ಕಾರಣವಾಗಿತ್ತು. ಎಎಂಡಿಯಂತಹ ದೊಡ್ಡ ಚಿಪ್ ತಯಾರಕ ಕಂಪನಿಯು ದೇಶದಲ್ಲಿ ಘಟಕ ಆರಂಭಿಸುವುದರಿಂದ ಚಿಪ್ ತಯಾರಿಕೆಗೆ ಸೂಕ್ತವಾದ ತಾಣವಾಗಿ ಭಾರತ ತನ್ನನ್ನು ತಾನು ಗುರುತಿಸಿಕೊಳ್ಳಲಿದೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us