ಆನೇಕಲ್: ಪೋಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ

ಗಾಂಜಾ ಮತ್ತಿನಲ್ಲಿದ್ದ ಕಿರಾತಕರ ಗ್ಯಾಂಗ್​ ಪೊಲೀಸ್ ಸಿಬ್ಬಂದಿ ಮೇಲೆರಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

ಆನೇಕಲ್: ಪೋಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ
ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ರಂಗನಾಥ್
Edited By: Rakesh Nayak Manchi

Updated on: Dec 23, 2022 | 2:41 PM

ಬೆಂಗಳೂರು: ಪೊಲೀಸ್ ಸಿಬ್ಬಂದಿ ಮೇಲೆರಗಿದ ಗಾಂಜಾ (Ganja) ಮತ್ತಿನಲ್ಲಿದ್ದ ಗ್ಯಾಂಗ್​ ಮಾರಣಾಂತಿಕವಾಗಿ ಹಲ್ಲೆ (Assault On Police personnel) ನಡೆಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್- ಅತ್ತಿಬೆಲೆ ಮುಖ್ಯರಸ್ತೆಯ ದಿನ್ನೂರಿನ ನೀಲಗಿರಿ ತೋಪಿನಲ್ಲಿ ನಡೆದಿದೆ. ಗಾಂಜಾ ಮತ್ತಿನಲ್ಲಿ ನಡು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಗ್ಯಾಂಗ್​ಗೆ ಪೋಲೀಸ್ ಸಿಬ್ಬಂದಿ ರಂಗನಾಥ್ ಎಂಬವರು ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗ್ಯಾಂಗ್, ರಂಗನಾಥ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.

ಗಾಂಜಾ ಮತ್ತಿನಲ್ಲಿದ್ದ ವರುಣ್ ಅಲಿಯಾಸ್ ಕೆಂಚ ಮತ್ತು ಈತನ ಗ್ಯಾಂಗ್, ರಾಘವೇಂದ್ರ ಸರ್ಕಲ್​ನಲ್ಲಿ‌ ನಡು ರಸ್ತೆಯಲ್ಲಿ ಬೈಕ್ ಇರಿಸಿ ನಿಂತಿತ್ತು. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ರಂಗನಾಥ್, ಬೈಕ್ ಸೈಡಿಗೆ ಹಾಕಿ ಎಂದು ಹೇಳಿ ಬುದ್ದಿವಾದ ಹೇಳಿದ್ದಾರೆ. ಈ ವೇಳೆ ರಂಗನಾಥ ಅವರನ್ನು ಸುತ್ತವರಿದ ಗ್ಯಾಂಗ್, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ದಿನ್ನೂರು ಕಡೆ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಕತ್ತು ಕೊಯ್ದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ

ಹಲ್ಲೆಗೊಳಗಾಗಿದ್ದರೂ ಪರಾರಿಯಾಗುತ್ತಿದ್ದ ಕಿರಾತಕರನ್ನು ಬೈಕ್​ನಲ್ಲಿ ಹಿಂಬಾಲಿಸಿದ್ದಾರೆ. ಅದರಂತೆ ದಿನ್ನೂರಿನ ನೀಲಗಿರಿ ತೋಪಿನ ಕಡೆಗೆ ಗಾಂಜಾ ಗ್ಯಾಂಗ್ ಎಸ್ಕೇಪ್ ಆಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿದ ರಂಗನಾಥ್ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಪೊಲೀಸರು, ಗಂಭೀರ ಗಾಯಗೊಂಡಿದ್ದ ರಂಗನಾಥ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಾಂಜಾ ಗ್ಯಾಂಗ್​ ಸದಸ್ಯರು ಈಗಾಗಲೇ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಗಾಂಜಾ ಮಾರಾಟ, ದರೋಡೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ವರುಣ ಅಲಿಯಾಸ್ ಕೆಂಚನ ವಿರುದ್ಧ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Fri, 23 December 22

Web contact

TV9 Kannada

Read More
Follow Us