ಮಗನ ಅನೈತಿಕ ಸಂಬಂಧಕ್ಕೆ ತಾಯಿ ಫುಲ್ ಸಪೋರ್ಟ್​! ನವವಿವಾಹಿತೆ ಗಂಭೀರ ಆರೋಪ

ಆನೇಕಲ್‌ನ ಅತ್ತಿಬೆಲೆಯಲ್ಲಿ ನವವಿವಾಹಿತ ಅಂಬರೀಶ್ ಮತ್ತು ನಂದಿನಿ ನಡುವಿನ ವೈವಾಹಿಕ ಕಲಹ ತೀವ್ರಗೊಂಡಿದ್ದು, ಅಂತರ್ಜಾತಿ ವಿವಾಹವಾಗಿರುವ ಜೋಡಿ ಪರಸ್ಪರ ಗಂಭೀರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದೆ. ಪತ್ನಿಯ ಸಂಬಂಧಿಕರು ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಪತಿ ಆರೋಪಿಸಿದ್ದಾನೆ. ಮದುವೆಯನಂತರವೂ ಪತಿಗೆ ಅನೈತಿಕ ಸಂಬಂಧವಿದೆ ಎಂದೂ ದೈಹಿಕ-ಮಾನಸಿಕ ಕಿರುಕುಳ ಮತ್ತು ಜಾತಿ ನಿಂದನೆ ಮಾಡುತ್ತಾನೆಂದೂ ಪತ್ನಿ ಆರೋಪಿಸಿದ್ದಾಳೆ. ಇದೀಗ ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ಚರ್ಚೆಗೆ ಗ್ರಾಸವಾಗಿದೆ.

ಮಗನ ಅನೈತಿಕ ಸಂಬಂಧಕ್ಕೆ ತಾಯಿ ಫುಲ್ ಸಪೋರ್ಟ್​! ನವವಿವಾಹಿತೆ ಗಂಭೀರ ಆರೋಪ
ಹೆಂಡತಿಯ ಎಂಗೇಜ್ಮೆಂಟ್ ಸೀರೆಯನ್ನು ಪ್ರೇಯಸಿಗೆ ಗಿಫ್ಟ್ ಕೊಟ್ಟ ಪತಿ!
Edited By:

Updated on: Jan 24, 2026 | 2:53 PM

ಆನೇಕಲ್, ಜನವರಿ 24: ನವವಿವಾಹಿತರ ನಡುವಿನ ವೈವಾಹಿಕ ಕಲಹ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪತ್ನಿಯ ಕುಟುಂಬಸ್ಥರಿಂದ ಪತಿ ಹಲ್ಲೆಗೊಳಗಾದ ಘಟನೆ ಆನೇಕಲ್​ನ (Anekal) ಅತ್ತಿಬೆಲೆಯಲ್ಲಿ ನಡೆದಿದೆ. ಪತಿ ಆರೋಪಕ್ಕೆ ಪ್ರತ್ಯಾರೋಪ ಮಾಡಿರುವ ಪತ್ನಿ, ಆತನಿಗೆ ಅನೈತಿಕ ಸಂಬಂಧವಿದ್ದು, ಅವನ ತಾಯಿಯೂ ಸಹಕರಿಸಿರುವುದಾಗಿ ಆರೋಪಿಸಿದ್ದಾಳೆ.

ಪತಿಯ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದ ಪತ್ನಿಯ ಕುಟುಂಬಸ್ಥರು

ಅಂತರ್ಜಾತಿ ವಿವಾಹವಾಗಿದ್ದ ಅಂಬರೀಶ್ ಮತ್ತು ನಂದಿನಿ ನಡುವೆ ಮದುವೆಯಾಗಿ ತಿಂಗಳೊಳಗೇ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆ ನವವಿವಾಹಿತೆಯ ಮಾವ ಸಂಪಂಗಿ, ಅಂಬರೀಶ್ ಮೇಲೆ ಹಲ್ಲೆ ನಡೆಸಿದ್ದ. ನಂತರ ನಂದಿನಿ ಮತ್ತು ಆಕೆಯ ಕುಟುಂಬಸ್ಥರು ಸೇರಿ ಅಂಬರೀಶ್​ನೊಡನೆ ಜಗಳಕ್ಕಿಳಿದಿದ್ದರು. ಅದಲ್ಲದೆ ಆತನ ಬಳಿಯಿದ್ದ ಮೊಬೈಲ್, ಚೈನ್, ರಿಂಗ್ ಕಸಿದುಕೊಂಡು 4 ಲಕ್ಷ ರೂ.ಗೆ ಬೇಡಿಕೆ ಇಟ್ಟು, 15 ಸಾವಿರ ರೂ. ಹಣ ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿದ್ದಾರೆಂದು ಆತ ಆರೋಪಿಸಿದ್ದ. ಹಲ್ಲೆಯಿಂದ ಗಂಭೀಯವಾಗಿ ಗಾಯಗೊಂಡಿದ್ದ ಅಂಬರೀಶ್ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.

ಪತ್ನಿಯಿದ್ದರೂ ಪ್ರೇಯಸಿಯರನ್ನರಸಿ ಹೋಗಿದ್ದ ಪತಿ

ಇದಕ್ಕೆ ಪ್ರತಿಯಾಗಿ ನವವಿವಾಹಿತೆ ನಂದಿನಿ ತನ್ನ ಪತಿ ಮತ್ತು ಅತ್ತೆ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾಳೆ.ಮದುವೆಗೆ ಮೊದಲು ಹಾಗೂ ಮದುವೆಯ ನಂತರವೂ ಪತಿ ಮತ್ತೊಬ್ಬ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ತನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ನಂದಿನಿ ಆರೋಪಿಸಿದ್ದಾಳೆ.

ಪತಿ ಕುಡಿದು ಮನೆಗೆ ಬಂದು ನಿತ್ಯ ಹಲ್ಲೆ ನಡೆಸುತ್ತಿದ್ದನಲ್ಲದೆ, ಅತ್ತೆಯೂ ಆತನೊಂದಿಗೆ ಸೇರಿ ಕಿರುಕುಳ ನೀಡುತ್ತಿದ್ದರೆಂದು ನಂದಿನಿ ಹೇಳಿದ್ದಾಳೆ. ಪತಿಯ ರಾಸಲೀಲೆಗೆ ಅತ್ತೆಯೂ ಸಾಥ್ ಕೊಟ್ಟಿದ್ದಾರೆಂದು ಆರೋಪಿಸಿರುವ ನಂದಿನಿ, ತನ್ನ ಎಂಗೇಜ್ಮೆಂಟ್ ವೇಳೆ ನಂದಿನಿ ಧರಿಸಿದ್ದ ಸೀರೆಯನ್ನು ಪತಿಯ ತಾಯಿಯೇ ಐರನ್ ಮಾಡಿ ಮಗನ ಮೂಲಕ ಅವನ ಪ್ರೇಯಸಿಗೆ ಗಿಫ್ಟ್ ಕೊಟ್ಟಿದ್ದಾರೆಂದು ಹೇಳಿದ್ದಾಳೆ.

ಇದನ್ನೂ ಓದಿ ಕಪಾಳಮೋಕ್ಷ ಮಾಡಿದಕ್ಕೆ ನಾನೇ ನನ್ನ ಸ್ನೇಹಿತನನ್ನು ಕೊಂದೆ: ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ತಪ್ಪೊಪ್ಪಿಕೊಂಡ ಯುವಕ

ಇನ್ನು, ಮದುವೆಗೆ ಮೊದಲು ತನ್ನ ಜಾತಿ ಕುರಿತು ಪತಿ ಮತ್ತು ಅತ್ತೆಗೆ ಸಂಪೂರ್ಣವಾಗಿ ತಿಳಿದಿದ್ದರೂ, ಮದುವೆಯ ಬಳಿಕ ಪದೇ ಪದೇ ಜಾತಿ ನಿಂದನೆ ಮಾಡಿ ಕಿರುಕುಳ ನೀಡಲಾಗುತ್ತಿತ್ತು ಎಂದು ನಂದಿನಿ ದೂರಿದ್ದಾಳೆ. ಪತಿ ಹಾಗೂ ಅತ್ತೆಯ ಹಲ್ಲೆ ಮತ್ತು ಮಾನಸಿಕ ಪೀಡನೆಗೆ ಬೇಸತ್ತು ನಂದಿನಿ ನ್ಯಾಯಕ್ಕಾಗಿ ಮುಂದಾಗಿದ್ದು, ಈ ಪ್ರಕರಣ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published On - 2:48 pm, Sat, 24 January 26

Loading...
Unable to load recommendations.
Follow Us