ಬೆಂಗಳೂರು: ಪ್ರಕರಣ ದಾಖಲಿಸುವುದಾಗಿ ಬೆದರಿಸಿ 10 ಲಕ್ಷ ಸುಲಿಗೆ ಮಾಡಿದ ಪಿಎಸ್‌ಐ ಸೇರಿ ನಾಲ್ವರು ಪೊಲೀಸರು ಸಸ್ಪೆಂಡ್‌

|

Updated on: Apr 01, 2023 | 7:57 AM

ಪುಲಿಕೇಶಿನಗರ ಠಾಣೆಯ ಪಿಎಸ್‌ಐ ಸೇರಿ ಮೂವರು ಹೆಡ್ ಕಾನ್‌ಸ್ಟೆಬಲ್‌ಗಳು ಶಂಕಿತ ಆರೋಪಿಯನ್ನು ಅಕ್ರಮವಾಗಿ ಕೂಡಿ ಹಾಕಿ ಕೇಸ್‌ ದಾಖಲಿಸುವುದಾಗಿ ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು: ಪ್ರಕರಣ ದಾಖಲಿಸುವುದಾಗಿ ಬೆದರಿಸಿ 10 ಲಕ್ಷ ಸುಲಿಗೆ ಮಾಡಿದ ಪಿಎಸ್‌ಐ ಸೇರಿ ನಾಲ್ವರು ಪೊಲೀಸರು ಸಸ್ಪೆಂಡ್‌
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ‘ರೈಸ್ ಪುಲ್ಲಿಂಗ್’ ಹಗರಣದಲ್ಲಿ(Rice-Pulling Scam) ಜನರನ್ನು ವಂಚಿಸಿದ್ದ ಎಂಬ ಶಂಕಿತ ಆರೋಪಿಯಿಂದ 10 ಲಕ್ಷ ರೂಪಾಯಿ ಲಂಚ(Bribe) ಪಡೆದ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಮೂವರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರುಮನ್ ಪಾಷಾ ಮತ್ತು ಪುಲಿಕೇಶಿನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗಳಾದ ಲೆಪಾಕ್ಷಪ್ಪ, ಲಕ್ಷ್ಮಣ್ ಮತ್ತು ಜೆಸಿ ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಗಿರೀಶ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ.

ಪುಲಿಕೇಶಿನಗರ ಠಾಣೆಯ ಪಿಎಸ್‌ಐ ಸೇರಿ ಮೂವರು ಹೆಡ್ ಕಾನ್‌ಸ್ಟೆಬಲ್‌ಗಳು ಶಂಕಿತ ಆರೋಪಿಯನ್ನು ಅಕ್ರಮವಾಗಿ ಕೂಡಿ ಹಾಕಿ ಕೇಸ್‌ ದಾಖಲಿಸುವುದಾಗಿ ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಮಾರ್ಚ್ 20ರಂದು ರೈಸ್‌ ಪುಲ್ಲಿಂಗ್‌ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಕೊಂಡಯ್ಯ ಎಂಬುವವರನ್ನು ಪಿಎಸ್‌ಐ ರುಮಾನ್‌ ಪಾಷಾ ಮತ್ತು ತಂಡ ವಶಕ್ಕೆ ಪಡೆದಿತ್ತು. ಆದರೆ, ಈ ಬಗ್ಗೆ ಠಾಣಾ ಡೈರಿಯಲ್ಲಿ ನಮೂದಿಸಿರಲಿಲ್ಲ. ಪ್ರಕರಣವನ್ನೂ ದಾಖಲಿಸಿರಲಿಲ್ಲ. ಬದಲಿಗೆ ಕೊಂಡಯ್ಯ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕೇಸ್‌ ದಾಖಲಿಸುವುದಾಗಿ ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿ ಬಿಟ್ಟು ಕಳಿಸಿದ್ದರು.

ಇದನ್ನೂ ಓದಿ: ಮೇಡಹಳ್ಳಿಯಲ್ಲಿ ಅಗ್ನಿ ಅವಘಡ: ಚಿಕಿತ್ಸೆ ಫಲಿಸದೆ 7 ಕಾರ್ಮಿಕರು ಸಾವು, ಓರ್ವನ ಸ್ಥಿತಿ ಗಂಭೀರ,

ಇನ್ನು ಇತ್ತೀಜೆಗೆ ಕೊಂಡಯ್ಯ ಹೆಚ್ಚುವರಿ ಪೊಲೀಸ್‌ ಆಯುಕ್ತ, ಐಜಿಪಿ ಚಂದ್ರಶೇಖರ್‌ ಅವರನ್ನು ಭೇಟಿ ಮಾಡಿ ಈ ಬಗ್ಗೆ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಐಜಿಪಿ ಆಂತರಿಕ ತನಿಖೆ ನಡೆಸುವಂತೆ ಪೂರ್ವವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌ ಅವರಿಗೆ ಸೂಚಿಸಿದ್ದರು. ಡಿಸಿಪಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಪಿಎಸ್‌ಐ ರುಮಾನ್‌ ಮತ್ತು ಸಿಬ್ಬಂದಿ ತಪ್ಪು ಮಾಡಿರುವುದು ಕಂಡು ಬಂದಿದ್ದು, ಐಜಿಪಿಗೆ ವರದಿ ಸಲ್ಲಿಸಿದ್ದರು.

ಗುಳೇದ್ ಅವರ ವರದಿಯನ್ನು ಆಧರಿಸಿ, ಪೊಲೀಸ್ ಕಮಿಷನರ್, ಸಿ ಹೆಚ್ ಪ್ರತಾಪ್ ರೆಡ್ಡಿ ಅವರು ಪಿಎಸ್ಐ ಮತ್ತು ಮೂವರು ಹೆಡ್ ಕಾನ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಿದ್ದಾರೆ. ಒಬ್ಬ ವ್ಯಕ್ತಿಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ಲಂಚ ಪಡೆದು ಬಿಡುಗಡೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪ್ರತಾಪ್ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು. ಪೊಲೀಸ್ ಠಾಣೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:57 am, Sat, 1 April 23