ಬೆಂಗಳೂರು: ಮಿಸ್​ ಆಗಿ ಬೇರೆ ಕ್ಯಾಬ್ ಹತ್ತಿದ ಮಹಿಳೆ, ಸಿಟ್ಟಿಗೆದ್ದು ಹಲ್ಲೆ ಮಾಡಿದ ಚಾಲಕ: ಮುಂದೇನಾಯ್ತು?

Bengaluru News: ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಊಬರ್ ಬುಕ್​ ಮಾಡಿದ್ದ ಮಹಿಳೆ ಮೇಲೆ ಚಾಲಕ ಹಲ್ಲೆ ನಡೆಸಿದ ಘಟನೆ ನಗರದ ಬೋಗನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು: ಮಿಸ್​ ಆಗಿ ಬೇರೆ ಕ್ಯಾಬ್ ಹತ್ತಿದ ಮಹಿಳೆ, ಸಿಟ್ಟಿಗೆದ್ದು ಹಲ್ಲೆ ಮಾಡಿದ ಚಾಲಕ: ಮುಂದೇನಾಯ್ತು?
ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆಯ ದೃಶ್ಯ
Follow us
| Updated By: ಆಯೇಷಾ ಬಾನು

Updated on:Aug 10, 2023 | 9:08 AM

ಬೆಂಗಳೂರು, ಆ.10: ಬೆಂಗಳೂರು, ಆ.10: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಊಬರ್ ಬುಕ್​ ಮಾಡಿದ್ದ ಮಹಿಳೆ ಮೇಲೆ ಚಾಲಕ ಹಲ್ಲೆ ನಡೆಸಿದ ಘಟನೆ ನಗರದ ಬೋಗನಹಳ್ಳಿಯಲ್ಲಿ ನಡೆದಿದೆ. ಊಬರ್ ಚಾಲಕ (Uber Driver) ಮಹಿಳೆ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಅಪಾರ್ಟ್​​ಮೆಂಟ್​​ನ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Footage) ಸೆರೆಯಾಗಿದೆ. ಹಲ್ಲೆಗೊಳಗಾದ ಮಹಿಳೆಯ ಪತಿ ಅಜಯ್ ಅಗರ್ವಾಲ್ ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಬುಧವಾರ ಬೆಳಗ್ಗೆ ಮಹಿಳೆ ತನ್ನ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಊಬರ್ ಕ್ಯಾಬ್​ ಬುಕ್ ಮಾಡಿದ್ದರು. ಮಹಿಳೆ ಬುಕ್ ಮಾಡಿದ್ದ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದಿತ್ತು. ಆಸ್ಪತ್ರೆಗೆ ಹೋಗುವ ಅವಸರದಲ್ಲಿದ್ದ ಮಹಿಳೆ ಇದೇ ಕ್ಯಾಬ್ ಇರಬೇಕು ಎಂದು ಕ್ಯಾಬ್​ನಲ್ಲಿ ಮಗನೊಂದಿಗೆ ಕುಳಿತಿದ್ದಾಳೆ. ಬಳಿಕ ಇದು ಬೇರೆ ಕ್ಯಾಬ್ ತಾನು ಬುಕ್ ಮಾಡಿದ ಕ್ಯಾಬ್ ಇನ್ನು ಬಂದಿಲ್ಲ ಎಂಬ ಬಗ್ಗೆ ಗಮನಕ್ಕೆ ಬಂದಿದೆ. ಕೂಡಲೇ ಮಹಿಳೆ ಕಾರ್​ನಿಂದ ಇಳಿಯಲು ಮುಂದಾಗಿದ್ದಾರೆ. ಈ ವೇಳೆ ಚಾಲಕ ಕಾರು ಚಲಾಯಿಸಿದ್ದಾನೆ.

ಮಹಿಳೆ ಇಳಿಯಲು ಯತ್ನಿಸಿದರೂ ಕಾರ್ ನಿಲ್ಲಿಸದೇ ಚಲಾಯಿಸಿದ್ದಾನೆ. ಬಳಿಕ ದಿಢೀರನೆ ಕ್ಯಾಬ್ ನಿಲ್ಲಿಸಿ ಮಹಿಳೆ ಮೇಲೆ ಹಲ್ಲೆಗೈದಿದ್ದಾನೆ. ಇನ್ನು ತಾಯಿ ರಕ್ಷಣೆಗೆ ಮುಂದಾದ ಬಾಲಕನ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಘಟನೆ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಘಟನೆಯ ದೃಶ್ಯ ಅಪಾರ್ಟ್‌ಮೆಂಟ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನೆ ಬಗ್ಗೆ ಅಪಾರ್ಟ್‌ಮೆಂಟ್ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಯಚೂರಿನಲ್ಲಿ ಮರಳು ದಂಧೆಕೋರರ ಅಟ್ಟಹಾಸ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ

ವಿಚಾರಣೆ ವೇಳೆ ಚಾಲಕ ಹೇಳಿದ್ದೇನು?

ಸದ್ಯ ಬೆಳ್ಳಂದೂರು ಪೊಲೀಸರು ಕ್ಯಾಬ್ ಚಾಲಕ ಬಸವರಾಜ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಚಾಲಕ ನಡೆದ ಘಟನೆಯನ್ನು ವಿವರಿಸಿದ್ದಾನೆ. ಅದೇ ಅಪಾರ್ಟ್​ಮೆಂಟ್ ನಲ್ಲಿ ಎರಡು ಕ್ಯಾಬ್ ಬುಕ್ ಆಗಿದ್ದವು. ಮಹಿಳೆ ಬುಕ್ ಮಾಡಿದ್ದು ಬೇರೆಯ ಕ್ಯಾಬ್. ಆದರೆ ಅದೇ ಸಮಯಕ್ಕೆ ಬಂದ ಬಸವರಾಜ್ ಕ್ಯಾಬ್ ಹತ್ತಿದ್ದಾರೆ. ಕೇವಲ 100 ಮೀಟರ್ ದೂರದಲ್ಲಿ ಕ್ಯಾಬ್ ನಿಲ್ಲಿಸುವಂತೆ ಚಾಲಕನಿಗೆ ನಿಂದಿಸಿದ್ದಾರೆ. ಏಕ ವಚನದಲ್ಲೇ ನಿಂದಿಸಿದ್ದಾರೆ. ಈ ವೇಳೆ ಕಾರ್ ನಲ್ಲಿ ಮಾತಿನ ಚಕಮಕಿ ನಡೆದಿದ್ದು ನಂತರ ಕೆಳಗಿಳಿದು ಡೋರ್ ಜೋರಾಗಿ ಹಾಕಿದ್ದಾರೆ. ಇದರಿಂದ ಕೋಪಗೊಂಡ ಬಸವರಾಜ್ ಮಹಿಳೆಯನ್ನು ನೂಕಿದ್ದಾನೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಹಾವಳಿ

ನಗರದ ಬಾಣಸವಾಡಿ ರೈಲು ನಿಲ್ದಾಣ ರಸ್ತೆ ಬದಿ ಮೊಬೈಲ್ ನಲ್ಲಿ ಮಾತಾಡುತ್ತಾ ನಿಂತಿದ್ದ ಮಹಿಳೆಯಿಂದ ಮೊಬೈಲ್ ಕಸಿದು ಇಬ್ಬರು ಮೊಬೈಲ್ ಕಳ್ಳರು ಪರಾರಿಯಾದ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ಮಹಿಳೆಯಿಂದ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಮೊಬೈಲ್ ಕಸಿದುಕೊಳ್ಳವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆ ಮೊಬೈಲ್ ನಲ್ಲಿ ಮಾತನಾಡುತ್ತಿರುವುದು ಗಮನಿಸಿ ಕಳ್ಳರು ಕೃತ್ಯ ಎಸಗಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:01 am, Thu, 10 August 23