ಬೆಂಗಳೂರು-ಪುಣೆಗೆ ಬರುತ್ತಿದೆ ‘ವಂದೇ ಭಾರತ್ ಸ್ಲೀಪರ್’: 18 ಗಂಟೆಯ ಪ್ರಯಾಣ ಇನ್ಮುಂದೆ ಕೇವಲ 13 ಗಂಟೆ!

ಬೆಂಗಳೂರು-ಪುಣೆ ನಡುವಿನ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಕೇಂದ್ರ ಅನುಮೋದನೆ ನೀಡಿದ್ದು, ಇದು ದೇಶದ ಎರಡನೇ ಸ್ಲೀಪರ್ ಸೇವೆಯಾಗಿದೆ. ಪ್ರಸ್ತುತ 18-19 ಗಂಟೆ ತೆಗೆದುಕೊಳ್ಳುವ ಪ್ರಯಾಣವನ್ನು 13 ಗಂಟೆಗೆ ಇಳಿಸಲಿದೆ. ಡಿಸೆಂಬರ್ 2026 ರಿಂದ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ. ಆಧುನಿಕ ಸೌಲಭ್ಯಗಳು ಮತ್ತು 'ಕವಚ' ಸುರಕ್ಷತಾ ವ್ಯವಸ್ಥೆಯೊಂದಿಗೆ, ಇದು ರಾತ್ರೋರಾತ್ರಿ ಆರಾಮದಾಯಕ ಪ್ರಯಾಣ ಒದಗಿಸಲ್ಲಿದೆ. ಟಿಕೆಟ್ ದರ ಸುಮಾರು 2,500 ರೂ.ನಿಂದ ಆರಂಭವಾಗುತ್ತದೆ.

ಬೆಂಗಳೂರು-ಪುಣೆಗೆ ಬರುತ್ತಿದೆ ವಂದೇ ಭಾರತ್ ಸ್ಲೀಪರ್: 18 ಗಂಟೆಯ ಪ್ರಯಾಣ ಇನ್ಮುಂದೆ ಕೇವಲ 13 ಗಂಟೆ!
ಸಾಂದರ್ಭಿಕ ಚಿತ್ರ

Updated on: Apr 17, 2026 | 9:51 AM

ಬೆಂಗಳೂರು, ಏ.17: ಬೆಂಗಳೂರು ಹಾಗೂ ಪುಣೆ ನಡುವಿನ ವಂದೇ ಭಾರತ್​​ ಎಕ್ಸ್​​ಪ್ರಸ್ ರೈಲು ಓಡಾಟದ ಕನಸು ಇಂದು ಪೂರ್ಣಗೊಂಡಿದೆ. ಬೆಂಗಳೂರು ಮತ್ತು ಪುಣೆ ನಡುವಿನ ಸಂಪರ್ಕ ಇನ್ಮುಂದೆ ಮತ್ತಷ್ಟು ವೇಗವಾಗಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಏಪ್ರಿಲ್ 5, 2026 ರಂದು ಮಾರ್ಗದಲ್ಲಿ ಸಂಚಾರಕ್ಕೆ ಅಧಿಕೃತವಾಗಿ ಅನುಮೋದನೆ ನೀಡಿದ್ದು, ಇದು ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ಸೇವೆಯಾಗಲಿದೆ.

ಪ್ರಸ್ತುತ ಬೆಂಗಳೂರು ಮತ್ತು ಪುಣೆ ನಡುವೆ ಸಂಚರಿಸುವ ಉದ್ಯನ್ ಎಕ್ಸ್‌ಪ್ರೆಸ್ 18 ಗಂಟೆ ಹಾಗೂ ಕೊಯಮತ್ತೂರು ಎಕ್ಸ್‌ಪ್ರೆಸ್ ಸುಮಾರು 19 ಗಂಟೆ ಸಮಯ ತೆಗೆದುಕೊಳ್ಳುತ್ತವೆ. ಆದರೆ, ಹೊಸ ವಂದೇ ಭಾರತ್ ಸ್ಲೀಪರ್ ರೈಲು ಈ ಸಮಯವನ್ನು 13 ಗಂಟೆಗೆ ಇಳಿಸಲಿದೆ. ಇದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಿಂದ ಹೊರಟು ಪುಣೆ, ಸೊಲ್ಲಾಪುರ ಮತ್ತು ವಾಡಿ ಮೂಲಕ ಬೆಂಗಳೂರು ತಲುಪಲಿದೆ. ದೌಂಡ್-ವಾಡಿ ಮತ್ತು ವಾಡಿ-ಗುಂತಕಲ್ ನಡುವಿನ ರೈಲ್ವೆ ಹಳಿಗಳನ್ನು ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸಲು ಅನುವಾಗುವಂತೆ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದಾಗಿ ರೈಲು ಅತಿ ವೇಗವಾಗಿ ಗುರಿ ತಲುಪಲು ಸಾಧ್ಯವಾಗಲಿದೆ.

ವೇಳಾಪಟ್ಟಿ ಮತ್ತು ವಿಶೇಷತೆಗಳು:

ಆರಂಭ: ಡಿಸೆಂಬರ್ 2026 ರಿಂದ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ.

ದಿನಗಳು: ವಾರದಲ್ಲಿ 6 ದಿನ ಸಂಚಾರ (ಒಂದು ದಿನ ನಿರ್ವಹಣೆಗಾಗಿ ಮೀಸಲು).

ಸಮಯ: ಎರಡೂ ನಗರಗಳಿಂದ ರಾತ್ರಿ 9 ಗಂಟೆಗೆ ರೈಲು ಹೊರಡಲಿದ್ದು, ರಾತ್ರೋರಾತ್ರಿ ಪ್ರಯಾಣಕ್ಕೆ ಅನುಕೂಲವಾಗಲಿದೆ.

ಬೋಗಿಗಳು: ಒಟ್ಟು 16 ಬೋಗಿಗಳಿದ್ದು, 823 ಪ್ರಯಾಣಿಕರಿಗೆ ಅವಕಾಶವಿದೆ (11 ಎಸಿ 3-ಟೈರ್, 4 ಎಸಿ 2-ಟೈರ್ ಮತ್ತು 1 ಫಸ್ಟ್ ಎಸಿ).

ಅಂದಾಜು ಟಿಕೆಟ್ ದರ (ಊಟದ ವ್ಯವಸ್ಥೆ ಒಳಗೊಂಡಿದೆ):

ಎಸಿ 3-ಟೈರ್: ಸುಮಾರು 2,500 ರೂ.

ಎಸಿ 2-ಟೈರ್: 3,000 ರೂ. ನಿಂದ 3,200 ರೂ.

ಫಸ್ಟ್ ಎಸಿ: 3,600 ರೂ. ನಿಂದ 3,900 ರೂ.

(ಗಮನಿಸಿ: ಕೇವಲ ಕನ್ಫರ್ಮ್ ಆದ ಟಿಕೆಟ್ ಪಡೆಯಲು ಮಾತ್ರ ಅವಕಾಶವಿದ್ದು, ಆರ್‌ಎಸಿ ಅಥವಾ ವೈಟಿಂಗ್ ಲಿಸ್ಟ್ ಸೌಲಭ್ಯ ಇರುವುದಿಲ್ಲ).

ಇದನ್ನೂ ಓದಿ: ಕಲಬುರ್ಗಿ, ಉಡುಪಿಯಲ್ಲಿ ಏರ್ ಕ್ವಾಲಿಟಿ ಪುನಃ ಕಳಪೆ ಮಟ್ಟಕ್ಕೆ!

ಆಧುನಿಕ ಸೌಲಭ್ಯಗಳು:

ರೈಲಿನಲ್ಲಿ ಓದುವ ದೀಪಗಳು (Reading lights), ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಆರ್ಥೋಪೆಡಿಕ್ ಬರ್ತ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳಿವೆ. ಸುರಕ್ಷತೆಗಾಗಿ ಭಾರತೀಯ ತಂತ್ರಜ್ಞಾನದ ‘ಕವಚ’ (Kavach) ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us