AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ವಿವಿ ಸಂಘರ್ಷ: 28 ಕೋಟಿ ಬಿಡುಗಡೆಗೆ ವಿವಿ ಅಧಿಕಾರಿಗಳಿಗೆ ಕುಲಪತಿ ಒತ್ತಡ, ಮತ್ತೊಂದು ಆದೇಶ

ತ್ವರಿತಗತಿಯಲ್ಲಿ ಹಣ ಬಿಡುಗಡೆ ಮಾಡುವಂತೆ ರಾತ್ರೋರಾತ್ರಿ ಬೆಂಗಳೂರು ವಿವಿ ಹಣಕಾಸು ವಿಭಾಗಕ್ಕೆ ಕುಲಪತಿ ಪತ್ರ ಬರೆದಿದ್ದಾರೆ.

ಬೆಂಗಳೂರು ವಿವಿ ಸಂಘರ್ಷ: 28 ಕೋಟಿ ಬಿಡುಗಡೆಗೆ ವಿವಿ ಅಧಿಕಾರಿಗಳಿಗೆ ಕುಲಪತಿ ಒತ್ತಡ, ಮತ್ತೊಂದು ಆದೇಶ
ಬೆಂಗಳೂರು ವಿಶ್ವವಿದ್ಯಾಲಯ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 01, 2022 | 2:32 PM

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 28 ಕೋಟಿ ರೂಪಾಯಿ ಅನುಮೋದನೆ ನೀಡಿರುವ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಹಣ ಬಿಡುಗಡೆಗಾಗಿ ಅಧಿಕಾರಿಗಳ ಮೇಲೆ ಕುಲಪತಿ ಪ್ರೊ.ವೇಣುಗೋಪಾಲ್ ನಿರಂತರ ಒತ್ತಡ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ತ್ವರಿತಗತಿಯಲ್ಲಿ ಹಣ ಬಿಡುಗಡೆ ಮಾಡುವಂತೆ ರಾತ್ರೋರಾತ್ರಿ ಬೆಂಗಳೂರು ವಿವಿ ಹಣಕಾಸು ವಿಭಾಗಕ್ಕೆ ಕುಲಪತಿ ಪತ್ರ ಬರೆದಿದ್ದಾರೆ. ಯುವಿಸಿಇ ಮೆಕ್ಯಾನಿಕಲ್ ವಿಭಾಗ ಮತ್ತು ರಾಮನಗರ ಸ್ನಾತಕೋತ್ತರ ಕೇಂದ್ರಗಳಿಗೆ ಬೇಗ ಹಣ ಬಿಡುಗಡೆ ಮಾಡಬೇಕು. ಈ ಅಧಿಕಾರವನ್ನು ಹಣಕಾಸು ವಿಭಾಗದ ಅಧೀಕ್ಷಕ ಸುರೇಶ್ ಅವರಿಗೆ ಕೊಡಬೇಕು ಎಂದು ವಿವಿ ವಿತ್ತಾಧಿಕಾರಿಗೆ ಕುಲಪತಿ ವೇಣುಗೋಪಾಲ್ ಎರಡು ದಿನಗಳ ಹಿಂದೆ ಪತ್ರ ಬರೆದಿದ್ದಾರೆ.

ಕುಲಪತಿ ವೇಣುಗೋಪಾಲ್ ಅವರ ಅಧಿಕಾರ ಅವಧಿ ಇದೇ ಜೂನ್ 12ಕ್ಕೆ ಅಂತ್ಯವಾಗಲಿದೆ. ಹೀಗಾಗಿ ಹಣ ಬಿಡುಗಡೆಗೆ ಪಟ್ಟು ಹಿಡಿದಿದ್ದಾರೆಂದು ಆರೋಪ ಮಾಡಲಾಗಿದೆ. ಈ ಪ್ರಕರಣವು ವಿದ್ಯಾರ್ಥಿಗಳಲ್ಲಿ ಆಕ್ರೋಶ ತಂದಿದೆ. ವಿದ್ಯಾರ್ಥಿಗಳ ಹೋರಾಟದ ಕೇಂದ್ರಬಿಂದುವೇ 28 ಕೋಟಿ ರೂಪಾಯಿ ಪ್ರಕರಣವಾಗಿದೆ. ಆಕ್ಷೇಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಹಣ ಬಿಡುಗಡೆ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.

ಕುಲಪತಿ, ವಿತ್ತಾಧಿಕಾರಿ ವಿರುದ್ಧ ವಿದ್ಯಾರ್ಥಿಗಳ ದೂರು

ಬೆಂಗಳೂರು (ಮೇ 28): ಬೆಂಗಳೂರು ವಿವಿ (Bengaluru University) ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬೆಂಗಳೂರು ವಿವಿ ತನ್ನ ವಿದ್ಯಾರ್ಥಿಗಳ (Sudent) ವಿರುದ್ಧವೇ ದೂರು ನೀಡಿದೆ. 3 ಕಡೆ ದೂರು ದಾಖಲಿಸಿದೆ. ರಾತ್ರೋ ರಾತ್ರಿ 28 ಕೋಟಿ ಅನುಮೋದನೆ ಇಲ್ಲದೆ ಅಪ್ರೂವಲ್ ಆರೋಪ ಹಿನ್ನೆಲೆ ನಿನ್ನೆ ವಿವಿ ವಿತ್ತಾಧಿಕಾರಿ ಕಚೇರಿಗೆ ನುಗ್ಗಿ ವಿದ್ಯಾರ್ಥಿಗಳು ಗಲಾಟೆ ಮಾಡಿದ್ದರು. ಹೀಗಾಗಿ ಬೆಂಗಳೂರು ವಿವಿ ವಿದ್ಯಾರ್ಥಿಗಳ ವಿರುದ್ಧ ವಿತ್ತಾಧಿಕಾರಿ ದೂರು ನೀಡಿದ್ದಾರೆ. ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ (Research Students) ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ವಿತ್ತಾಧಿಕಾರಿ ಜಯಲಕ್ಷ್ಮಿ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ವಿವಿ ಕುಲಪತಿ ಮತ್ತು ವಿವಿ ವಿತ್ತಾಧಿಕಾರಿ ವಿರುದ್ಧ ಸಂಶೋಧನ ವಿದ್ಯಾರ್ಥಿಗಳು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರು ಹಿಂಪಡೆಯುವಂತೆ ವಿದ್ಯಾರ್ಥಿಗಳ ಆಗ್ರಹ

ತಮ್ಮ ವಿರುದ್ಧ ನೀಡಿರುವ ದೂರು ಹಿಂಪಡೆಯಬೇಕು ಎಂದು ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಜ್ಞಾನಭಾರತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ವಿವಿ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಮೀಸಲಿಟ್ಟಿದ್ದ ಹಣವನ್ನು ಯುವಿಸಿಇ ಕಟ್ಟಡಕ್ಕೆ ವರ್ಗಾಯಿಸುವ ನಿರ್ಧಾರವನ್ನು ಅವರು ಖಂಡಿಸಿದರು. ಇತ್ತೀಚಿನ ದಿನಗಳಲ್ಲಿ ಹಣ ವರ್ಗಾವಣೆ ವಿಚಾರವು ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ಸಿಂಡಿಕೇಟ್ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು. ವಿತ್ತಾಧಿಕಾರಿ ಕೊಠಡಿಗೆ ನುಗ್ಗಿದ್ದ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಲಾಗಿತ್ತು.

ವಿಶ್ವವಿದ್ಯಾಲಯದ ಕುಲಪತಿ ಮತ್ತು ವಿವಿ ವಿತ್ತಾಧಿಕಾರಿ ವಿರುದ್ಧ ವಿದ್ಯಾರ್ಥಿಗಳೂ ದೂರು ನೀಡಿದ್ದರು. ವಿದ್ಯಾರ್ಥಿಗಳು ದೂರು ನೀಡುವ ಅಭಿಯಾನವನ್ನೇ ಆರಂಭಿಸಿದ್ದಾರೆ. ಅಭಿವೃದ್ಧಿ ಚಟುವಟಿಕೆಯ ಹಣವನ್ನು ಕಟ್ಟಡ ನಿರ್ಮಾಣಕ್ಕೆ ಬಳಸಬಾರದು ಎಂದು ಒತ್ತಾಯಿಸಿ ಕುಲಪತಿ ವೇಣುಗೋಪಾಲ್ ಹಾಗೂ ವಿತ್ತಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮಹಿಳಾ ಆಯೋಗಕ್ಕೂ ದೂರು

ಅಧಿಕಾರದಲ್ಲಿರುವ ಮಹಿಳಾ ಸಿಬ್ಬಂದಿಯನ್ನು ನಿಲ್ಲಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಿ ರಾಜ್ಯ ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ವಿವಿ ವಿತ್ತಾಧಿಕಾರಿ ದೂರು ನೀಡಿದ್ದಾರೆ. ಇಂಥ ಪ್ರಕರಣಗಳು ಈ ಹಿಂದೆಯೂ ಹಲವು ಬಾರಿ ನಡೆದಿವೆ. ಇದು 3ನೇ ಪ್ರಕರಣ ಎಂದು ಹೇಳಿದ್ದಾರೆ.

Published On - 2:32 pm, Wed, 1 June 22