ವೋಟರ್ ಐಡಿ ಹಗರಣ: ವಕೀಲರ ಭೇಟಿಗೆ ಬಂದು ಸಿಕ್ಕಿಬಿದ್ದ ಚಿಲುಮೆ ಮುಖ್ಯಸ್ಥ ರವಿಕುಮಾರ್, ತನಿಖೆ ಚುರುಕು

ಡಿಜಿಟಲ್ ಌಪ್‌ ಡೆವಲಪ್‌ ಮಾಡಿದವರ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಇಂದಿನಿಂದ ಬಿಬಿಎಂಪಿಯ ಆರ್‌ಒಗಳ ವಿಚಾರಣೆ ಮಾಡಲಾಗುತ್ತೆ

ವೋಟರ್ ಐಡಿ ಹಗರಣ: ವಕೀಲರ ಭೇಟಿಗೆ ಬಂದು ಸಿಕ್ಕಿಬಿದ್ದ ಚಿಲುಮೆ ಮುಖ್ಯಸ್ಥ ರವಿಕುಮಾರ್, ತನಿಖೆ ಚುರುಕು
ಸಾಂದರ್ಭಿಕ ಚಿತ್ರ
Updated By: ಆಯೇಷಾ ಬಾನು

Updated on: Nov 21, 2022 | 7:30 AM

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿ ಮಾಡ್ತಿರುವ ವೋಟರ್ ಐಡಿ ಪಕರಣಕ್ಕೆ ಸಂಬಂಧಿಸಿ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್, ಸಹೋದರ ಕೆಂಪೇಗೌಡ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕೇಸ್​ ಸಂಬಂಧ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ವಿಚಾರಣೆ ಸಂಬಂಧ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.

ವಕೀಲರ ಭೇಟಿಗೆ ಬಂದಿದ್ದಾಗ ಲಾಲ್‌ಬಾಗ್‌ ಬಳಿ ಪ್ರಮುಖ ಆರೋಪಿ ರವಿಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಐವರನ್ನು ಬಂಧಿಸಲಾಗಿದೆ. ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್, ಸಹೋದರ, ಸಂಸ್ಥೆಯ ಮೇಲ್ವಿಚಾರಕ ಕೆಂಪೇಗೌಡ. ಚಿಲುಮೆ ಸಂಸ್ಥೆಯ ಸಿಬ್ಬಂದಿಯಾದ ಧರ್ಮೇಶ್, ರೇಣುಕಾ ಪ್ರಸಾದ್ ಹಾಗೂ ಇ-ಪ್ರಕ್ಯೂರ್ಮೆಂಟ್ ಮೇಲ್ವಿಚಾರಕ ಪ್ರಜ್ವಲ್‌ ಬಂಧಿತ ಆರೋಪಿಗಳು.

ಇದನ್ನೂ ಓದಿ: ವೋಟರ್ ಐಡಿ ‘ಚಿಲುಮೆ’: ಚಿಲುಮೆ ಸಂಸ್ಥೆ ಹೇಗೆ ಮತದಾರರ ಮಾಹಿತಿ ಕಲೆಹಾಕುತ್ತಿತ್ತು ಗೊತ್ತಾ? ಇಲ್ಲಿದೆ ಮಾಹಿತಿ

ಇನ್ನು ಕೇಸ್ ಸಂಬಂಧ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ಮಾಹಿತಿ ನೀಡಿದ್ದಾರೆ. ಇಂದಿನಿಂದ ಬಿಬಿಎಂಪಿಯ ಆರ್‌ಒಗಳ ವಿಚಾರಣೆ ಮಾಡಲಾಗುತ್ತೆ ಎಂದರು. ಮೊದಲಿಗೆ ಕೆಂಪೇಗೌಡ ಌಪ್ ಮೂಲಕ ಮಾಹಿತಿಯನ್ನ ಸಂಗ್ರಹಿಸಿ ರವಿಕುಮಾರ್‌ಗೆ ನೀಡುತ್ತಿದ್ದ. ಆದ್ರೆ ಈ ಮಾಹಿತಿಯನ್ನು ಬೇರೆ ರೀತಿಯಲ್ಲಿ ಬಳಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ವಿಚಾರಣೆ ವೇಳೆ ಆರೋಪಿ ಕೆಂಪೇಗೌಡ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಪ್ರಕರಣ ಸಂಬಂಧ ಈವರೆಗೆ 15 ಜನರನ್ನು ವಿಚಾರಣೆ ಮಾಡಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ತೀವ್ರಗೊಳಿಸಲಾಗಿದೆ.

ಡಿಜಿಟಲ್ ಌಪ್‌ ಡೆವಲಪ್‌ ಮಾಡಿದವರ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಇಂದಿನಿಂದ ಬಿಬಿಎಂಪಿಯ ಆರ್‌ಒಗಳ ವಿಚಾರಣೆ ಮಾಡಲಾಗುತ್ತೆ. ವಿಚಾರಣೆಗೆ ಬರುವಂತೆ ಕೆಲ ಆರ್‌ಒಗಳಿಗೆ ನೋಟಿಸ್ ನೀಡಲಾಗಿದೆ. ಌಪ್‌ನಲ್ಲಿ ಸರ್ವರ್ ಡೌನ್ ಮಾಡಲಾಗಿದೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆರೋಪಿ ಕೆಂಪೇಗೌಡ ದತ್ತಾಂಶಗಳ ಬಗ್ಗೆ ಕೆಲ ಮಾಹಿತಿ ನೀಡಿದ್ದಾನೆ. ಮತಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಸಂಗ್ರಹಿಸಿದ್ದು ಗೊತ್ತಾಗಿದೆ. ಜಾತಿ, ಉಪಜಾತಿ, ಲಿಂಗ ಸೇರಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದರು.

Published On - 7:30 am, Mon, 21 November 22