ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ ಬೆಸ್ಕಾಂ: ವಿದ್ಯುತ್ ಬಿಲ್ ನೋಡಿ ಜನ ಬೇಸ್ತು

ಜನರು ಈಗಾಗಲೇ ಹಲವು ರೀತಿಯ ಬೆಲೆ ಏರಿಕೆಗಳ ಪರಿಣಾಮ ಹೈರಾಣಾಗಿ ಹೋಗಿದ್ದಾರೆ. ಇತ್ತೀಚೆಗಷ್ಟೇ ವಿದ್ಯುತ್ ದರ ಏರಿಕೆ ಆಗಿದ್ದು ಹೊರೆ ಆಗಿದೆ. ವಿಧಿ ಇಲ್ಲದೆ ಜನ ಸಹಿಸಿಕೊಳ್ಳುತ್ತಿದ್ದಾರೆ. ಆದರೆ ಇಂಧನ ಇಲಾಖೆಯ ಮತ್ತೊಂದು ಯಡವಟ್ಟು ಈಗ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ‘ಟಿವಿ9’ ವರದಿಗಾರ ಲಕ್ಷ್ಮಿ ನರಸಿಂಹ ಅವರ ವರದಿ ಇಲ್ಲಿದೆ.

ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ ಬೆಸ್ಕಾಂ: ವಿದ್ಯುತ್ ಬಿಲ್ ನೋಡಿ ಜನ ಬೇಸ್ತು
ಬೆಸ್ಕಾಂ ವಿದ್ಯುತ್ ಬಿಲ್ (ಸಾಂದರ್ಭಿಕ ಚಿತ್ರ)

Updated on: Jun 26, 2025 | 7:11 AM

ಬೆಂಗಳೂರು, ಜೂನ್ 26: ಕರ್ನಾಟಕ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ (Guarantee Schemes) ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಸಹಜವಾಗಿ ಸರ್ಕಾರಕ್ಕೆ ಇದು ಹೊರೆಯಾಗಿ ಪರಿಣಮಿಸಿದ್ದು, ಕೊನೆಗೆ ಆ ಹೊರೆಯನ್ನು ಜನಸಾಮಾನ್ಯರಿಂದಲೇ ವಸೂಲಿ ಮಾಡಲು ಮಾರ್ಗಗಳನ್ನು ಹುಡುಕಿದೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ವಿದ್ಯುತ್ ಬಿಲ್​​ನಲ್ಲಿ (Electricity Bill) ಇಂಧನ ಇಲಾಖೆ ಅಥವಾ ಕೆಪಿಟಿಸಿಎಲ್ ನೌಕರರ ಪಿಂಚಣಿ ಹಾಗೂ ಗ್ರಚ್ಯುಟಿ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ. ನೌಕರರಿಗೆ ಸರ್ಕಾರ ಹಾಗೂ ಇಲಾಖೆ ನೀಡಬೇಕಿದ್ದ ಸೌಕರ್ಯಗಳ ವೆಚ್ಚವನ್ನು ಗ್ರಾಹಕರ ತಲೆಗೆ ಕಟ್ಟಲಾಗುತ್ತಿದೆ. ಇದು ಈಗ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.

ಬೆಸ್ಕಾಂ ನೀಡುವ ಬಿಲ್​ನಲ್ಲಿ ಹೊಸದಾಗಿ ಸೃಷ್ಟಿ ಮಾಡಲಾಗಿರುವ ಕಾಲಂ ನೋಡಿ ಗ್ರಾಹಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಿನ ಸನ್ನಿವೇಶದಲ್ಲಿ ಬಳಸಿದ ವಿದ್ಯುತ್ ಬಿಲ್ ಕಟ್ಟುವುದೇ ಕಷ್ಟಕರವಾಗಿದೆ. ಇದರ ಜೊತೆಗೆ ಇಲಾಖೆಯ ನೌಕರರಿಗೆ ನೀಡಬೇಕಾದ ಪಿಂಚಣಿ ಹಣವನ್ನು ಭರಿಸಲು ಆಗದೆ, ಪ್ರತಿ ಯುನಿಟ್ ವಿದ್ಯುತ್ ಮೇಲೆ 36 ಪೈಸೆ ನಮ್ಮಿಂದ ವಸೂಲಿ ಮಾಡುವುದು ಯಾವ ರೀತಿ ನ್ಯಾಯ, ಇದು ಒಂದು ರೀತಿಯ ಹಗಲು ದರೋಡೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಮನೆ, ಆಫೀಸ್, ಅಂಗಡಿಯ ವಿದ್ಯುತ್​ ಮೀಟರ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಚಿವ ಕೆಜೆ ​ಜಾರ್ಜ್

ಇದನ್ನೂ ಓದಿ
ಇನ್ಮುಂದೆ ಐದು ಖಾಸಗಿ ಆ್ಯಪ್​ಗಳ ಮೂಲಕವೂ ಖರೀದಿಸಬಹುದು ಮೆಟ್ರೋ ಟಿಕೆಟ್!
ಮಾವು ಬೆಳೆಗಾರರಿಗೆ, ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ
ವಿದ್ಯುತ್ ಕನಿಷ್ಠ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ತೀರ್ಪು
ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿ ಬಳಕೆ ನಿರ್ಬಂಧಿಸಿದ ಆರೋಗ್ಯ ಇಲಾಖೆ

ಈ ರೀತಿಯ ವಿಚಿತ್ರ ವಸೂಲಿ ಮುಂದಿನ ಎರಡು ವರ್ಷಗಳ ಕಾಲ ಮುಂದುವರೆಯಲಿದೆ ಎಂಬುದು ದುರಂತ. ಇದಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕೂಡ ಅಸ್ತು ಎಂದಿದ್ದು, ಗ್ರಾಹಕರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣನೆ ಮಾಡಲಾಗಿದೆ.

ಒಟ್ಟಿನಲ್ಲಿ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯ್ಯಲ್ಲಿ ಕೊಟ್ಟು, ಈ ರೀತಿಯ ಬೇಕಾಬಿಟ್ಟಿ ವಸೂಲಿ ಮಾಡಿ ಜನಸಾಮಾನ್ಯರ ಜೀವನ ಮತ್ತಷ್ಟು ದುಸ್ತರ ಆಗುವಂತೆ ಮಾಡಿದೆ.

ವರದಿ: ಲಕ್ಷ್ಮಿ ನರಸಿಂಹ, ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ