ನಮ್ಮ ಮೆಟ್ರೋ ಮೂರನೇ ಹಂತ; ಸರ್ಜಾಪುರ ಹೆಬ್ಬಾಳ ಮಾರ್ಗ ಕಾಮಗಾರಿಗೆ ಬಿಎಂಆರ್​​ಸಿಎಲ್ ಗಡುವು ಫಿಕ್ಸ್

ನಮ್ಮ ಮೆಟ್ರೋ ಮೂರನೇ ಹಂತದ ವಿವರವಾದ ಯೋಜನಾ ವರದಿಯನ್ನು ಬಿಎಂಆರ್​ಸಿಎಲ್ ರಾಜ್ಯ ಸರ್ಕಾರಕ್ಕೆ ಕಳೆದ ವಾರ ಸಲ್ಲಿಸಿತ್ತು. ಇದೀಗ, 3ಎ ಲೈನ್‌ ಕಾಮಗಾರಿಗೆ ಗಡುವನ್ನೂ ನಿಗದಿ ಮಾಡಿದೆ. 3ಎ ಲೈನ್​ ಕಾಮಗಾರಿಯ ಡೆಡ್​ಲೈನ್, ನಿಲ್ದಾಣಗಳು, ಪ್ರಯಾಣಿಕ ಸಾಮರ್ಥ್ಯ ಇತ್ಯಾದಿ ವಿವರಗಳು ಇಲ್ಲಿವೆ.

ನಮ್ಮ ಮೆಟ್ರೋ ಮೂರನೇ ಹಂತ; ಸರ್ಜಾಪುರ ಹೆಬ್ಬಾಳ ಮಾರ್ಗ ಕಾಮಗಾರಿಗೆ ಬಿಎಂಆರ್​​ಸಿಎಲ್ ಗಡುವು ಫಿಕ್ಸ್
ನಮ್ಮ ಮೆಟ್ರೋ ಮೂರನೇ ಹಂತ; ಸರ್ಜಾಪುರ ಹೆಬ್ಬಾಳ ಮಾರ್ಗ ಕಾಮಗಾರಿಗೆ ಬಿಎಂಆರ್​​ಸಿಎಲ್ ಗಡುವು ಫಿಕ್ಸ್ (ಸಾಂದರ್ಭಿಕ ಚಿತ್ರ)

Updated on: Jun 27, 2024 | 10:34 AM

ಬೆಂಗಳೂರು, ಜೂನ್ 27: ನಮ್ಮ ಮೆಟ್ರೋ ಮೂರನೇ ಹಂತದ 3ಎ ಲೈನ್‌ನ ಕಾಮಗಾರಿ 2031ಕ್ಕೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಬಿಎಂಆರ್​​ಸಿಎಲ್ ತಿಳಿಸಿದೆ. ಸರ್ಜಾಪುರದಿಂದ ಹೆಬ್ಬಾಳದವರೆಗಿನ 36.5 ಕಿ.ಮೀ ಉದ್ದದ 3ಎ ಲೈನ್‌ನ ಕಾಮಗಾರಿಗೆ 2031 ರ ಗಡುವು ನಿಗದಿಪಡಿಸಲಾಗಿದೆ. 18 ತಿಂಗಳ ವಿಳಂಬದ ನಂತರ, ಬಿಎಂಆರ್​​ಸಿಎಲ್ ಕಳೆದ ವಾರ ರಾಜ್ಯ ಸರ್ಕಾರಕ್ಕೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಿತ್ತು.

ಈ ಯೋಜನೆಗೆ 26,405 ಕೋಟಿ ರೂಪಾಯಿ ವೆಚ್ಚವಾಗಲಿದೆ ಮತ್ತು 28 ನಿಲ್ದಾಣಗಳನ್ನು ಹೊಂದಿರುತ್ತದೆ ಎಂದು ಬಹು ಮೆಟ್ರೋ ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23ರ ಬಜೆಟ್ ಭಾಷಣದಲ್ಲಿ ಈ ಮಾರ್ಗದ ಬಗ್ಗೆ ಘೋಷಣೆ ಮಾಡಿದ್ದು, ಡಿಪಿಆರ್ ಸಲ್ಲಿಸಲು ಎಂಟು ತಿಂಗಳ ಗಡುವನ್ನು ನಿಗದಿಪಡಿಸಿದ್ದರು. ಆಗ ಯೋಜನಾ ವೆಚ್ಚವನ್ನು 16,000 ಕೋಟಿ ರೂ. ಎಂದು ನಮೂದಿಸಲಾಗಿಯತ್ತು., ಆದರೆ ನಂತರ ಅದು ಹೆಚ್ಚಾಗಿದೆ.

ಈ ಯೋಜನೆಯು ಕೋರಮಂಗಲ ಎರಡನೇ ಬ್ಲಾಕ್‌ನಿಂದ ಪಶುವೈದ್ಯಕೀಯ ಕಾಲೇಜುವರೆಗಿನ 14.4-ಕಿಮೀ ಸುರಂಗ ಮಾರ್ಗದಲ್ಲಿ 11 ನಿಲ್ದಾಣಗಳನ್ನು ಹೊಂದಿರಲಿದೆ ಎಂದು ಮೂಲವೊಂದು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​’ ವರದಿ ತಿಳಿಸಿದೆ. ಇದು 22.1 ಕಿಮೀ ಕಾರಿಡಾರ್‌ನಲ್ಲಿ (ಸುರಂಗ ಮಾರ್ಗ ಹೊರತುಪಡಿಸಿ) 17 ನಿಲ್ದಾಣಗಳನ್ನು ಹೊಂದಿರಲಿದೆ. ಇದು ಸರ್ಜಾಪುರದಿಂದ ಕೋರಮಂಗಲ ಎರಡನೇ ಬ್ಲಾಕ್‌ಗೆ ವಿಸ್ತರಿಸಿರಲಿದ್ದು, ಪಶುವೈದ್ಯಕೀಯ ಕಾಲೇಜಿನಿಂದ ಹೆಬ್ಬಾಳದವರೆಗೆ ಸುರಂಗ ಮಾರ್ದಲ್ಲಿ ಮುಂದುವರಿಯಲಿದೆ.

ಲಕ್ಷಾಂತರ ಪ್ರಿಯಾಣಿಕರಿಗೆ ಅನುಕೂಲ

ಅಧ್ಯಯನ ವರದಿಯೊಂದರ ಪ್ರಕಾರ, ಈ ಮಾರ್ಗವು 2031 ರಲ್ಲಿ 6.21 ಲಕ್ಷ ದೈನಂದಿನ ಪ್ರಯಾಣಿಕರನ್ನು ಹೊಂದಲಿದೆ ಎಂದು ನಿರೀಕ್ಷಿಸಲಾಗಿದೆ. 2041 ರಲ್ಲಿ 7.2 ಲಕ್ಷ; 2051 ರಲ್ಲಿ 8.51 ಲಕ್ಷ ಮತ್ತು 2061 ರ ವೇಳೆಗೆ 9.5 ಲಕ್ಷ ದೈನಂದಿನ ಪ್ರಯಾಣಿಕರನ್ನು ಹೊಂದಲಿದೆ ಎಂದು ಭಾವಿಸಲಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹೊಸ ತಂತ್ರಜ್ಞಾನ ಬಳಕೆ; ಬಾಕ್ಸ್ ಆಕಾರದಲ್ಲಿ ಕಾಮಗಾರಿ

5,400 ಮರಗಳಿಗೆ ಕುತ್ತು

ನಮ್ಮ ಮೆಟ್ರೋ ಮೂರನೇ ಹಂತದ 3ಎ ಲೈನ್‌ನ ಕಾಮಗಾರಿಗಾಗಿ ಒಟ್ಟು 5,400 ಮರಗಳಿಗೆ ಕುತ್ತು ಬರಲಿದೆ. ಅವುಗಳಲ್ಲಿ ಅರ್ಧದಷ್ಟನ್ನು ಬೇರೆಡೆಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಉಳಿದವುಗಳನ್ನು ಕಡಿಯಲಾಗುವುದು ಎಂದು ಮೂಲಗಳು ತಿಳಿಸಿವೆ. ಮೆಟ್ರೊದ 3ಎ ಮಾರ್ಗವು ಎಂಟು ಇಂಟರ್‌ಚೇಂಜ್‌ಗಳನ್ನು ಹೊಂದಿರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us