Driverless Train: ನಮ್ಮ ಮೆಟ್ರೋ ಚಾಲಕ ರಹಿತ ರೈಲು ಸಂಚಾರ ಸಿಗ್ನಲಿಂಗ್ ಟೆಸ್ಟ್ ಶೀಘ್ರ

Namma Metro’s Driverless Train; ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೊ ರೈಲು ಸಂಚಾರಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಶೀಘ್ರದಲ್ಲೇ ಸಿಗ್ನಲಿಂಗ್ ಟೆಸ್ಟ್ ಆರಂಭವಾಗಲಿದ್ದು, ಈ ವರ್ಷಾಂತ್ಯದ ವೇಳೆಗೆ ರೈಲು ಸಂಚಾರ ಆರಂಭವಾಗಲಿದೆ. ಸಿಗ್ನಲಿಂಗ್ ಟೆಸ್ಟ್ ಮತ್ತು ಇತರ ಟೆಸ್ಟಿಂಗ್​ ಬಗ್ಗೆ ಬಿಎಂಅರ್​ಸಿಎಲ್ ಅಧಿಕಾರಿಗಳು ನೀಡಿದ ಮಾಹಿತಿ ಇಲ್ಲಿದೆ.

Driverless Train: ನಮ್ಮ ಮೆಟ್ರೋ ಚಾಲಕ ರಹಿತ ರೈಲು ಸಂಚಾರ ಸಿಗ್ನಲಿಂಗ್ ಟೆಸ್ಟ್ ಶೀಘ್ರ
ನಮ್ಮ ಮೆಟ್ರೋ ಚಾಲಕ ರಹಿತ ರೈಲು

Updated on: Jun 12, 2024 | 9:12 AM

ಬೆಂಗಳೂರು, ಜೂನ್ 12: ನಮ್ಮ ಮೆಟ್ರೋದ (Namma Metro) ಮೊದಲ ಚಾಲಕ ರಹಿತ ರೈಲು (Driverless Metro Train) ಶೀಘ್ರದಲ್ಲೇ ಹಳಿಗಿಳಿಯಲಿದೆ. ಸಿಗ್ನಲಿಂಗ್ ವ್ಯವಸ್ಥೆ ಮತ್ತು ಇಂಟಿಗ್ರೇಷನ್ ಟೆಸ್ಟಿಂಗ್​ ಯೆಲ್ಲೋ ಲೈನ್​ನಲ್ಲಿ ನಡೆಯಲಿದೆ ಎಂದು ಬಿಎಂಅರ್​ಸಿಎಲ್ (BMRCL) ತಿಳಿಸಿದೆ. ಚಾಲಕ ರಹಿತ ರೈಲಿನ ಆರು ಬೋಗಿಗಳ ಮೊದಲ ಸೆಟ್ ಫೆಬ್ರವರಿ 20ರಂದು ಚೀನಾದಿಂದ ಹೆಬ್ಬಗೋಡಿ ಮೆಟ್ರೋ ಡಿಪೋ ತಲುಪಿತ್ತು. ಪ್ರಸ್ತುತ ಸಿಗ್ನಲಿಂಗ್ ಟೆಸ್ಟ್ ಚಾಲಕ ರಹಿತ ರೈಲುಗಳ ಮುಖ್ಯ ಪರೀಕ್ಷೆಯ ಭಾಗವಾಗಿದೆ ಎಂದು ಯೋಜನೆಯ ಭಾಗವಾಗಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ, ಕೋಚ್‌ಗಳು ಸ್ಟ್ಯಾಟಿಕ್ ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್ ಪರೀಕ್ಷೆಗೆ ಒಳಗಾಗುತ್ತಿವೆ. ಶೀಘ್ರದಲ್ಲೇ, ಅವುಗಳನ್ನು ಮುಖ್ಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲನ್ನು ಒಟ್ಟು 37 ಟೆಸ್ಟಿಂಗ್​ಗೆ ಒಳಪಡಿಸಲಾಗುವುದು. ಮುಂಬರುವ ಟೆಸ್ಟಿಂಗ್​ಗಳು ಸಿಗ್ನಲಿಂಗ್, ಟೆಲಿಕಮ್ಯುನಿಕೇಷನ್ಸ್ ಮತ್ತು ವಿದ್ಯುತ್ ಪೂರೈಕೆಯೊಂದಿಗೆ ವ್ಯವಸ್ಥೆಯನ್ನು ವಿಲೀನಗೊಳಿಸುವ ಗುರಿಯನ್ನು ಹೊಂದಿವೆ. ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಮತ್ತು ಕಮಿಷನರ್ ಆಫ್ ಮೆಟ್ರೋ ರೈಲ್ ಸೇಫ್ಟಿಯಿಂದ ಸುರಕ್ಷತಾ ತಪಾಸಣೆಗಳು ನಡೆಯಬೇಕಿದೆ. ಸಂಚಾರ ಆರಂಭಿಸುವ ಮುನ್ನ ಆರ್‌ಡಿಎಸ್‌ಒ ಮತ್ತು ಸಿಎಮ್‌ಆರ್‌ಎಸ್‌ನಿಂದ ಸಲಹೆಗಳನ್ನು ಪಡೆಯುವ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆ ಪಡೆಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಅಗತ್ಯವಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಅಬುಧಾಬಿ ಮಧ್ಯೆ ಪ್ರತಿ ದಿನ ಸಂಚರಿಸಲಿದೆ ಏರ್ ಇಂಡಿಯಾ ಎಕ್ಸ್​ಪ್ರೆಸ್

ಸುಮಾರು 18.82 ಕಿಲೋಮೀಟರ್‌ ಉದ್ದ ಯೆಲ್ಲೋ ಲೈನ್ ಈ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಲಿದೆ. ಆರ್​ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕವನ್ನು ಕಲ್ಪಿಸುವ ಈ ಮಾರ್ಗದಲ್ಲಿ 16 ನಿಲ್ದಾಣಗಳು ಇವೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಭಾರೀ ಸಂಚಾರ ದಟ್ಟಣೆಯನ್ನು ನಿವಾರಿಸಲು ರಾಗಿ ಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ 3.13 ಕಿಲೋಮೀಟರ್ ಉದ್ದದ ಸಂಯೋಜಿತ ಮೆಟ್ರೋ ಮತ್ತು ರಸ್ತೆ ಮೇಲ್ಸೇತುವೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us