ತಮಿಳುನಾಡಿಗೆ ಟಾಂಗ್! ಮೇಕೆದಾಟು ಯೋಜನೆ ಜಾರಿಗಾಗಿ ವಿಧಾನಸಭೆಯಲ್ಲಿ ಕರ್ನಾಟಕ ಸರ್ಕಾರದಿಂದಲೂ ನಿರ್ಣಯ

| Updated By: preethi shettigar

Updated on: Mar 24, 2022 | 7:21 PM

ಮೇಕೆದಾಟು ಯೋಜನೆಗೆ ಕೇಂದ್ರ ಕೂಡಲೇ ಅನುಮತಿ ನೀಡಬೇಕು. ಕಣಿವೆ ರಾಜ್ಯಗಳ ನ್ಯಾಯ ಸಮ್ಮತ ಪಾಲು ನಿರ್ಧಾರ ಆಗುವವರೆಗೆ ತಮಿಳುನಾಡಿನ ಕಾನೂನು ಬಾಹಿರ ಯೋಜನೆಗೆ ಅನುಮೋದಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಆಗ್ರಹಿಸಿದೆ.

ತಮಿಳುನಾಡಿಗೆ ಟಾಂಗ್! ಮೇಕೆದಾಟು ಯೋಜನೆ ಜಾರಿಗಾಗಿ ವಿಧಾನಸಭೆಯಲ್ಲಿ ಕರ್ನಾಟಕ ಸರ್ಕಾರದಿಂದಲೂ ನಿರ್ಣಯ
ವಿಧಾನ ಮಂಡಲ ಸದನ ನಾಯಕರ ಸಭೆ
Follow us on

ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ ಹಿನ್ನೆಲೆಯಲ್ಲಿ ಇಂದು ವಿಧಾನಸಭೆಯಲ್ಲಿ ಕರ್ನಾಟಕ ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ತಮಿಳುನಾಡಿಗೆ(Tamil nadu) ಯಾವುದೇ ಹಾನಿಯಾಗದ ಯೋಜನೆಗೆ ವಿರೋಧ ಹಿನ್ನಲೆಯಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಜತೆಗೆ ಮೇಕೆದಾಟು ಯೋಜನೆಗೆ(Mekedatu Project) ಕೇಂದ್ರ ಕೂಡಲೇ ಅನುಮತಿ ನೀಡಬೇಕು. ಕಣಿವೆ ರಾಜ್ಯಗಳ ನ್ಯಾಯ ಸಮ್ಮತ ಪಾಲು ನಿರ್ಧಾರ ಆಗುವವರೆಗೆ ತಮಿಳುನಾಡಿನ ಕಾನೂನು ಬಾಹಿರ ಯೋಜನೆಗೆ ಅನುಮೋದಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ(State Government) ಆಗ್ರಹಿಸಿದೆ.

ಕೇಂದ್ರ ಜಲಶಕ್ತಿ ಆಯೋಗ, ಪರಿಸರ, ಅರಣ್ಯ ಇಲಾಖೆಗೆ ರಾಜ್ಯ ಸರ್ಕಾರ ಈ ಕುರಿತಾಗಿ ಆಗ್ರಹಿಸಿದ್ದು, ಯಾವುದೇ ಯೋಜನೆಗಳಿಗೆ ಅನುಮೋದನೆ ನೀಡದಂತೆ ಆಗ್ರಹಿಸಿದೆ. ಕಣಿವೆ ರಾಜ್ಯಗಳ ನ್ಯಾಯ ಸಮ್ಮತ ಪಾಲು ನಿರ್ಧಾರ ಆಗುವವರೆಗೆ, ಗೋದಾವರಿ-ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ್ ಜೋಡಣೆ ಆಗುವವರೆಗೆ ಯೋಜನೆಯ ಡಿಪಿಆರ್ ಅಂತಿಮಗೊಳಿಸದಂತೆ ಕೇಂದ್ರದ ಮೇಲೆ ಕರ್ನಾಟಕ ಸರ್ಕಾರ ಒತ್ತಡ ಹೇರಿದೆ.

ಒತ್ತಡ ಹೇರುವ ಅಂಶಕ್ಕೆ ಕಾಂಗ್ರೆಸ್ ಶಾಸಕ ಹೆಚ್.ಕೆ.‌ಪಾಟೀಲ್ ಆಕ್ಷೇಪ

ಮೇಕೆದಾಟು ಯೋಜನೆಗೆ ಸೀಮಿತ ಆಗುವಂತೆ ನಿರ್ಣಯ ಕೈಗೊಳ್ಳೋಣ ಎಂದು ಒತ್ತಡ ಹೇರುವ ಅಂಶಕ್ಕೆ ಕಾಂಗ್ರೆಸ್ ಶಾಸಕ ಹೆಚ್.ಕೆ.‌ಪಾಟೀಲ್ ಆಕ್ಷೇಪಿಸಿದ್ದಾರೆ. ಹೆಚ್.ಕೆ.‌ಪಾಟೀಲ್ ಆಕ್ಷೇಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಈ ವೇಳೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ನಿರ್ಣಯಕ್ಕೆ ನಾವೆಲ್ಲಾ ಸರ್ವಾನುಮತದಿಂದ ಅನುಮತಿ ನೀಡಿದ್ದೇವೆ: ಹೆಚ್.ಡಿ.ಕುಮಾರಸ್ವಾಮಿ

ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ವಿರೋಧದ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ನಮ್ಮ ರಾಜ್ಯ ನಿರ್ಣಯ ತೆಗದುಕೊಳ್ಳಲು ಸರ್ವಾನುಮತದಿಂದ ಒಪ್ಪಿಗೆ ಕೊಡಲಾಗಿದೆ. ಈ ನಿರ್ಣಯ ನಮ್ಮ ಒಗ್ಗಟ್ಟು ಪ್ರದರ್ಶನ ನೀಡಲು ನಿರ್ಣಯ ಅಷ್ಟೇ. ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ. ಕೇಂದ್ರ ಫಾರೆಸ್ಟ್ ಕ್ಲಿಯರೆನ್ಸ್ ನೀಡಬೇಕಿದೆ. ಕೇಂದ್ರದಲ್ಲಿ ಅವರದ್ದೇ ಪಕ್ಷ ಸರ್ಕಾರದಲ್ಲಿದೆ. ಅನುಮತಿ ತರೋದಕ್ಕೆ ಅವರೇ ಬದ್ಧತೆ ತೋರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಳಿಕ ಮಾತನಾಡಿದ ಅವರು, ಜನತಾ ಪತ್ರಿಕೆ ಅಂತ ಮಂತ್ಲಿ ಮ್ಯಾಗ್ಸಿನ್ ಬಿಡುಗಡೆಯಾಗಿದೆ. ನದಿ ಜೋಡಣೆ ವಿಚಾರದಲ್ಲಿ ಕನ್ನಡಿಗರು ತಬ್ಬಲಿಯಾಗಿದ್ದಾರೆ ಎಂದು ಇದರಲ್ಲಿ ದೇವೇಗೌಡರು ತಮ್ಮ ಅಭಿಪ್ರಾಯ ಬರೆದಿದ್ದಾರೆ. ಈ ಸದ್ಯ ನೀರು ಹಂಚಿಕೆ ಬಗ್ಗೆ ಸಭೆ ಆಗಿದೆ. ಸಭೆಯಲ್ಲಿ ಯಾವುದೇ ವಿಚಾರ ಮಂಡನೆ ಮಾಡದೆ ಕರ್ನಾಟಕ, ತ‌ಮಿಳು ನಾಡು, ಪುದುಚೇರಿ ಸದಸ್ಯರ ಸಭೆಯಲ್ಲಿ ನೀರು ಹಂಚಿಕೆ ಚರ್ಚೆ ಆಗೋಗಿದೆ. ಕೇಂದ್ರ ಸರ್ಕಾರ ನೀರಿನ ಹಂಚಿಕೆ ಅಂತಿಮ ನಿರ್ಣಯ ಆಗೋಗಿದೆ. ಕೇಂದ್ರದ ಮನವೊಲಿಸಲು ಬಿಜೆಪಿ ಸರ್ಕಾರ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ನೋಡಬೇಕಿದೆ. ಇದನ್ನೇ ದೇವೇಗೌಡರು ಉಲ್ಲೇಖ ಮಾಡಿದ್ದಾರೆ. ಈ ನಿರ್ಣಯಕ್ಕೆ ನಾವೆಲ್ಲಾ ಸರ್ವಾನುಮತದಿಂದ ಅನುಮತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ವಿಪಕ್ಷ ನಾಯಕರು ನಮ್ಮನ್ನೆಲ್ಲ ಕರೆದು ನಿರ್ಣಯ ಮಾಡಬೇಕಿತ್ತು ಎಂದಿದ್ದಾರೆ. ನಮ್ಮ ನಿಲುವಲ್ಲಿ ಗಟ್ಟಿತನ ಇಲ್ಲದಿರೋದ್ರಿಂದಲೇ ನಮ್ಮ ಮೇಲೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ತೋರುತ್ತಿದೆ ಎಂದು ಕಾಂಗ್ರೆಸ್ ನಿಲುವಿಗೆ ಹೆಚ್​ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಪೂರಕ ಅಂದಾಜು ಮಂಡಿಸಿದ ಸರ್ಕಾರ

ರಾಜ್ಯ ಸರ್ಕಾರ ಪೂರಕ ಅಂದಾಜು ಮಂಡನೆ ಮಾಡಿದೆ. 26,953 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳ ಮಂಡನೆ ಮಾಡಿದೆ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಶಿಷ್ಯ ವೇತನಕ್ಕೆ 60 ಕೋಟಿ ರೂ. ಹೆಚ್ಚುವರಿ ಅನುದಾನ, ಹಾಲು ಉತ್ಪಾದಕರಿಗೆ ಸಹಾಯಧನದಡಿ ಬಿಲ್ಲು ಪಾವತಿಗೆ 200 ಕೋಟಿ ರೂಪಾಯಿ, ಹಾವೇರಿಯ ಯುಎಚ್‌ಟಿ ಹಾಲು ಪ್ಯಾಕಿಂಗ್ ಮತ್ತು ಸಂಸ್ಕರಣೆ ಘಟಕಕ್ಕೆ 15 ಕೋಟಿ ರೂಪಾಯಿ, ಅಬಕಾರಿ ಇಲಾಖೆಯ ವಾಹನಗಳ ದುರಸ್ತಿ ಮತ್ತು ಇಂಧನಕ್ಕೆ 1 ಕೋಟಿ ರೂಪಾಯಿ, ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳ ಇತರೇ ವೆಚ್ಚಕ್ಕೆ 11 ಕೋಟಿ ರೂಪಾಯಿ, ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ, ನಿವೃತ್ತಿ ಸೌಲಭ್ಯಕ್ಕೆ 13.7 ಕೋಟಿ ರೂಪಾಯಿ, ಬಿಎಂಟಿಸಿಗೆ 433 ಕೋಟಿ ರೂಪಾಯಿ, ನೂತನ ಜೈಲುಗಳ ನಿರ್ಮಾಣಕ್ಕೆ 133 ಕೋಟಿ‌ ರೂಪಾಯಿ, ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಮಾರ್ಟ್ ಫೋನ್.

ಫೋನ್ ಭತ್ಯೆಗೆ 4.9 ಕೋಟಿ ರೂಪಾಯಿ, ಕರ್ನಾಟಕ ಮಿನರಲ್ಸ್ ಕಾರ್ಪೊರೇಷನ್​​ನಿಂದ ಪಡೆದ ಸಾಲದ ಮರು ಪಾವತಿಗೆ 669 ಕೋಟಿ ರೂಪಾಯಿ, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿವಿಗೆ ಮೂಲಭೂತ ಸೌಕರ್ಯಕ್ಕೆ 40 ಕೋಟಿ ರೂಪಾಯಿ, ಹಾವೇರಿ‌ ನೂತನ ಜವಳಿ ಪಾರ್ಕ್​ಗೆ 10 ಕೋಟಿ ರೂಪಾಯಿ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯದ ಪಾಲು 500 ಕೋಟಿ ರೂಪಾಯಿ, ಬೆಳಗಾವಿ ಮಹಾನಗರ ಪಾಲಿಕೆ ವಿದ್ಯುತ್ ಬಿಲ್ ಪಾವತಿಗೆ 50 ಕೋಟಿ ರೂಪಾಯಿ, ಕೆರೆಗಳ ಆಧುನೀಕರಣ ಕಾಮಗಾರಿಗಳಿಗೆ 120 ಕೋಟಿ ರೂಪಾಯಿ, ಪಶ್ಚಿಮ ವಾಹಿನಿ ಯೋಜನೆಯ ಬಾಕಿ ಬಿಲ್ಲುಗಳಿಗೆ 10 ಕೋಟಿ ರೂಪಾಯಿ, ನೀರಾವರಿ ಪಂಪ್ ಸೆಟ್, ಕುಟೀರ ಭಾಗ್ಯ ಯೋಜನೆಗಳಡಿ ಸಹಾಯಧನಕ್ಕೆ 50 ಕೋಟಿ ರೂಪಾಯಿ, ಹಾವೇರಿಯ ಶಿಶುನಾಳ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 4 ಕೋಟಿ ರೂಪಾಯಿ, ವಿಧಾನಸಭೆ ಸ್ಪೀಕರ್ ಪ್ರಯಾಣ ವೆಚ್ಚ ಪಾವತಿಗೆ 7.5 ಲಕ್ಷ ರೂಪಾಯಿ, ವಿಧಾನಪರಿಷತ್ ಸಚಿವಾಲಯದ ವಿವಿಧ ವೆಚ್ಚಗಳಿಗೆ 1.3 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.

ಇದನ್ನೂ ಓದಿ:

ಪೊಲೀಸ್ ವೈಫಲ್ಯಕ್ಕೆ ಯಾರು ಹೊಣೆ: ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

ಎಂಪಿ ರೇಣುಕಾಚಾರ್ಯ ಪುತ್ರಿಯ ಜಾತಿ ಪ್ರಮಾಣ ಪತ್ರದ ಬಗ್ಗೆ ವಿಧಾನಸಭೆಯಲ್ಲಿ ಜಟಾಪಟಿ; ಏನಿದು ವಿಚಾರ?

Published On - 6:39 pm, Thu, 24 March 22