ಬೆಂಗಳೂರಿನಲ್ಲಿ ಡಿವೋರ್ಸ್ ಕೇಸ್ ಹೆಚ್ಚಳ, ಚಿಕ್ಕ ವಿಚಾರಕ್ಕೂ ದಾಂಪತ್ಯ ಜೀವನ ಅಂತ್ಯಗೊಳಿಸುತ್ತಿರುವ ಸಿಟಿ ಮಂದಿ

ಇತ್ತೀಚಿಗೆ ಮದುವೆಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಬೆಳ್ಳಗ್ಗೆ ಮದುವೆ ಸಂಜೆ ಡಿವೋರ್ಸ್ ಎನ್ನುವ ಪರಿಸ್ಥಿತಿ ಇದ್ದು, ಸಣ್ಣಪುಟ್ಟ ಕಾರಣಗಳಿಗೆಲ್ಲ ಡಿವೋರ್ಸ್ ನೀಡುವ ಕೇಸ್​ಗಳು ಹೆಚ್ಚಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷವು‌ ಡಿವೋರ್ಸ್ ಕೇಸ್ ಜಾಸ್ತಿಯಾಗಿದೆ.

ಬೆಂಗಳೂರಿನಲ್ಲಿ ಡಿವೋರ್ಸ್ ಕೇಸ್ ಹೆಚ್ಚಳ, ಚಿಕ್ಕ ವಿಚಾರಕ್ಕೂ ದಾಂಪತ್ಯ ಜೀವನ ಅಂತ್ಯಗೊಳಿಸುತ್ತಿರುವ ಸಿಟಿ ಮಂದಿ
ಸಾಂದರ್ಭಿಕ ಚಿತ್ರ
Poornima Agali Nagaraj Edited By: ಆಯೇಷಾ ಬಾನು

Updated on: Jun 09, 2024 | 7:33 AM

ಬೆಂಗಳೂರು, ಜೂನ್.09: ಮದುವೆ ಅನ್ನೋದು ಎರಡು ಸಂಬಂಧಗಳನ್ನ, ಎರಡು ಮನಸ್ಸುಗಳನ್ನ ಒಂದು ಮಾಡಿ, ಮೂರು ಗಂಟುಗಳಲ್ಲಿ ನೂರು ವರ್ಷಗಳ ಕಾಲ ಆ ಸಂಬಂಧವನ್ನ ಬೆಸೆಯುವುದಾಗಿದೆ. ಆದ್ರೆ ಇತ್ತೀಚೆಗೆ ಮದುವೆಗಳೆಂದರೆ ಬೆಳಗ್ಗೆ ಮದುವೆಯಾಗಿ ಸಂಜೆಗೆ ಡಿವೋರ್ಸ್ (Divorce) ತೆಗೆದುಕೊಳ್ಳುವಂತಹ ಸಂಪ್ರದಾಯ ಶುರುವಾಗಿದೆ. ಈ ವರ್ಷ ಸಿಲಿಕಾನ್ ಸಿಟಿಯಲ್ಲಿ‌ ಡಿವೋರ್ಸ್ ಕೇಸ್​ಗಳ ಸಂಖ್ಯೆ ಜಾಸ್ತಿಯಾಗಿದೆ.

ಬದಲಾಗುತ್ತಿರುವ ಜೀವನ‌ ಶೈಲಿಗೆ ತಕ್ಕಂತೆ ಮದುವೆಗಿರುವ ಬೆಲೆ ಬದಲಾಗುತ್ತಿದೆ. ಈ ಹಿಂದೆ ಸಂಬಂಧಗಳಲ್ಲಿ ಬಿರುಕು ಮೂಡಿದ್ರೆ ಎರಡು ಕುಟುಂಬಗಳು ಒಗ್ಗೂಡಿ ದಂಪತಿಯನ್ನು ಒಂದು ಮಾಡುತ್ತಿದ್ರು. ಆದರೆ ಈಗ ಸತಿ-ಪತಿಗಳೇ ಜೊತೆಯಾಗಿ ಬಂದು ಡಿವೋರ್ಸ್ ಕೇಳುವ ಯುಗಕ್ಕೆ ಬಂದಿದ್ದೇವೆ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಡಿವೋರ್ಸ್ ಕೇಸ್ ಗಳು ಹೆಚ್ಚಾಗುತ್ತಿದ್ದು, ನಗದಲ್ಲಿ 15 % ರಷ್ಟು ಡಿವೋರ್ಸ್ ಕೇಸ್​ಗಳು ಹೆಚ್ಚಾಗಿವೆ.‌ ಜೊತೆಗೆ ಈ ಹಿಂದೆ ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಡಿವೋರ್ಸ್ ಕೇಸ್​ಗಳು ಇತ್ತೀಚಿನ ದಿನಗಳಲ್ಲಿ ಸಮಾನ್ಯವರ್ಗದಲ್ಲಿ ಹೆಚ್ಚಾಗುತ್ತಿವೆ.‌ ಹೀಗಾಗಿ ಫ್ಯಾಮಿಲಿ ಕೋರ್ಟ್​ಗೆ ಬರುವ ಕೇಸ್​ಗಳು ಜಾಸ್ತಿಯಾಗಿವೆ.‌

ಅದ್ರಲ್ಲಿ ದುಡಿಯುವ ವರ್ಗ, ಐಟಿಬಿಟಿ ಕಂಪನಿಗಳ ಉದ್ಯೋಗಿಗಳು, ಸಿನಿಮಾ ಕ್ಷೇತ್ರಗಳಲ್ಲಿ ಹೆಚ್ಚಿನದಾಗಿ ಡಿವೋರ್ಸ್ ಕೇಸ್​ಗಳು ಬರುತ್ತಿದ್ದು, ಹೊಂದಾಣಿಕೆಯ ಕೊರತೆಯಿಂದಾಗಿ ಈ ರೀತಿಯ ಘಟನೆಗಳು ಹೆಚ್ಚಾಗಿವೆ. ಅಲ್ಲದೇ ಇತ್ತೀಚೆಗೆ ಹೆಣ್ಣು ಮಕ್ಕಳು ಗಂಡಿಗೆ ಸಮಾನಾಗಿ ದುಡಿಯುತ್ತಿರುವುದರಿಂದ ಹೆಣ್ಣು‌ಮಕ್ಕಳು ತಮಗೆ ನೋವಾದ್ರೆ ಅದನ್ನ ನ್ಯಾಯಾಲಯದ‌ ಮುಂದೆ ಹೇಳಿಕೊಳ್ಳುವ ಮನಸ್ಸು ಮಾಡುತ್ತಿರುವುದು ಒಂದು ಕಡೆಯ ಖುಷಿಯ ಸಂಗತಿಯಾದ್ರು ಕೂಡ ಸಣ್ಣ – ಸಣ್ಣ ಕಾರಣಗಳಿಗೆ ಡಿವೋರ್ಸ್ ಗಳು ಆಗುತ್ತಿರುವ ಬಗ್ಗೆ ಲಾಯರ್​ಗಳೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸಂತಾನ ಮತ್ತು ಸಂತೋಷಕ್ಕಾಗಿ ಸ್ಕಂದ ಷಷ್ಟಿ ಪೂಜೆಯನ್ನು ಹೀಗೆ ಮಾಡಿ.. ಒಳ್ಳೆಯ ಫಲಿತ ನಿಮ್ಮದಾಗುತ್ತದೆ

ಯಾವೆಲ್ಲ ಕಾರಣಗಳಿಗೆ ಡಿವೋರ್ಸ್ ನೀಡುವುದು ಹೆಚ್ಚಾಗುತ್ತಿದೆ?

  • ಹೆಣ್ಣು ಮಕ್ಕಳಲ್ಲಿರುವ ಆರೋಗ್ಯ ಸಮಸ್ಯೆ
  • ಕೌಟುಂಬಿಕ ಮೌಲ್ಯ ಕಡಿಮೆಯಾಗುತ್ತಿರುವುದು
  • ಲವ್ ಮ್ಯಾರೇಜ್ ಗಳಲ್ಲಿ ಅನ್ಯೋನ್ಯತೆ ಇಲ್ಲದೆ ಇರುವುದು
  • ಅನೈತಿಕ ಸಂಬಂಧಗಳು
  • ವರದಕ್ಷಿಣೆ ಕಿರುಕುಳ
  • ಕೌಟುಂಬಿಕ ಕಲಹ ಹೆಚ್ಚಾಗುತ್ತಿರುವುದು
  • ಸೆಲ್ಫ್ ಇಗೋ ಸಮಸ್ಯೆ
  • ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗುತ್ತಿರುವುದು

ಸಂಬಂಧಗಳಲ್ಲಿ ಹೊಂದಾಣಿಕೆ ಮುಖ್ಯ. ಜೊತೆಗೆ ಇತ್ತೀಚಿಗೆ ಮಾನಸಿಕ‌ ಕಾಯಿಲೆಗಳು ಹೆಚ್ಚಾಗಿವೆ.‌ ಇವುಗಳನ್ನ ಸರಿಪಡಿಸಿಕೊಳ್ಳುವಲ್ಲಿ‌ ನಮ್ಮ ಜನರು ಎಡವುತ್ತಿದ್ದಾರೆ.‌ ಇಂತಹ ಸಮಸ್ಯೆಗಳನ್ನ ಪರಿಹರಿಸಿಕೊಂಡ್ರೆ ಡಿವೋರ್ಸ್ ಕೇಸ್ ಗಳನ್ನ ಕಡಿಮೆ ಮಾಡಬಹುದಾಗಿದೆ.‌ ಕೋರ್ಟ್ ಮೆಟ್ಟಿಲೇರುವ ಮುನ್ನ ಅಲೋಚನೆ ಮಾಡಿ ಸಂಬಂಧಗಳನ್ನ ಗಟ್ಟಿಮಾಡಿಕೊಳ್ಳುವುದು ಒಳ್ಳೆಯದು ಅಂತ ಮನೋವೈದ್ಯರು ಸಲಹೆ ನೀಡ್ತಿದ್ದಾರೆ.

ಒಟ್ನಲ್ಲಿ, ಈ ಹಿಂದೆ ಒಂದು ಮದುವೆ ಮಾಡಿದ್ರೆ ಜವಾಬ್ದಾರಿ ಬರುತ್ತೆ ಎನ್ನುವ ಕಾಲ ಇತ್ತು‌. ಆದ್ರೀಗಾ ಕಾಲ ಬದಲಾಗಿ ಜವಾಬ್ದಾರಿಯೇ ತಿಳಿಯದೆ  ಮದುವೆಯಾದ್ರೆ ಕೋರ್ಟ್ ಮೆಟ್ಟಿಲೇರುವುದೇ ಪಕ್ಕಾ ಆಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Poornima Agali Nagaraj
Follow Us