ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದಿಂದ ನಾಳೆ ಬೆಂಗಳೂರು ಬಂದ್​ಗೆ ಕರೆ: ಪರ್ಯಾಯ ಮಾರ್ಗಗಳು ಹೀಗಿವೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 10, 2023 | 7:32 PM

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಬಂದ್​ಗೆ ಕರೆ ನೀಡಿದ್ದಾರೆ. ಹಾಗಾಗಿ ವಾಹನ ಸವಾರರು ಬದಲಿ ರಸ್ತೆ ಬಳಸುವಂತೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ. ಬೆಂಗಳೂರು ನಗರದಾದ್ಯಂತ ಅದರಲ್ಲಿಯೂ ನಗರದ ಪ್ರಮುಖ ಬಸ್​ ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದಿಂದ ನಾಳೆ ಬೆಂಗಳೂರು ಬಂದ್​ಗೆ ಕರೆ: ಪರ್ಯಾಯ ಮಾರ್ಗಗಳು ಹೀಗಿವೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಸೆಪ್ಟೆಂಬರ್​​ 10: ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರದ ಶಕ್ತಿಯೋಜನೆ ಜಾರಿಗೆ ಬಂದಾಗಿನಿಂದ ಖಾಸಗಿ ಸಾರಿಗೆ ಒಕ್ಕೂಟ ಕಿಡಿಕಾರುತ್ತ ಬಂದಿತ್ತು. ಇದೀಗ ಆಟೋ, ಕ್ಯಾಬ್, ಟ್ಯಾಕ್ಸಿ ಚಾಲಕರು ಸಿಡಿದೆದ್ದಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಬಂದ್​ಗೆ ಕರೆ ನೀಡಿದ್ದಾರೆ. ಇವತ್ತು ಮಧ್ಯರಾತ್ರಿಯಿಂದಲೇ ಖಾಸಗಿ ವಾಹನಗಳ ಸೇವೆ ಸ್ಥಗಿತ ಮಾಡಿ ಬಂದ್‌ ನಡೆಸಲು ಒಕ್ಕೂಟ ಸಜ್ಜಾಗಿದೆ. ಹಾಗಾಗಿ ವಾಹನ ಸವಾರರು ಬದಲಿ ರಸ್ತೆ ಬಳಸುವಂತೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.

ಬದಲಿ ರಸ್ತೆಗಳು ಹೀಗಿವೆ

  • ಖೋಡೆ ಸರ್ಕಲ್‌ಗೆ ಬರುವ ವಾಹನಗಳು ಆರ್.ಆರ್. ಜಂಕ್ಷನ್ ಮೂಲಕ-ಕೃಷ್ಣ ಫ್ಲೋರ್ ಮಲ್ಲೇಶ್ವರಂ ಕಡೆ ತೆರಳುವುದು.
  • ಗೂಡ್ ಶೆಡ್ ರಸ್ತೆ ಕಡೆಯಿಂದ ಬರುವ ವಾಹನಗಳು, ಜಿ.ಟಿ. ರಸ್ತೆ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್‌- ಓಕಳಿಪುರಂ – ಸುಜಾತ ಮೂಲಕ ತೆರಳಲು ಅವಕಾಶ
  • ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನಗಳು, ಹಳೇ ಜೆ.ಡಿ.ಎಸ್. ರಸ್ತೆ ಹಾಗೂ ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗುವುದು.
  • ಮೈಸೂರು ಬ್ಯಾಂಕಿನಿಂದ ಬರುವ ವಾಹನಗಳು, ಪ್ಯಾಲೆಸ್‌ ರಸ್ತೆ- ಮಹಾರಾಣಿ ಅಂಡರ್‌ಪಾಸ್-ಬಸವೇಶ್ವರ ಸರ್ಕಲ್ ಮುಖಾಂತರ ಸಂಚರಿಸುವುದು.

ಬೆಂಗಳೂರು ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್

ಬಂದ್​ಗೆ ಕರೆ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಅದರಲ್ಲಿಯೂ ನಗರದ ಪ್ರಮುಖ ಬಸ್​ ನಿಲ್ದಾಣಗಳಲ್ಲಿ  ಎಸಿಪಿ, ಇನ್ಸ್​​ಪೆಕ್ಟರ್​​​ ನೇತೃತ್ವದಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದೆ. ಶಾಂತಿನಗರ, ಮೌರ್ಯ ಸರ್ಕಲ್​, ಕೋರಮಂಗಲ, ಫ್ರೀಡಂಪಾರ್ಕ್​, ಶಿವಾನಂದ ಸರ್ಕಲ್​, ಕಲಾಸಿಪಾಳ್ಯ, ಪೀಣ್ಯ, ಮೈಸೂರು ರಸ್ತೆ ಸ್ಯಾಟ್​​ಲೈಟ್​​​ ಬಸ್ ನಿಲ್ದಾಣ, ಹೆಬ್ಬಾಳ, ಯಲಹಂಕ, ಕೆ.ಆರ್​.ಪುರಂ, ಕೆಂಗೇರಿ ಸೇರಿದಂತೆ ಬೆಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಭದ್ರತೆ ನಿಯೋಜಿಸಲಾಗಿದೆ.

ಕಾನೂನು ಬಾಹಿರ ಕೃತ್ಯಕ್ಕೆ, ಶಾಂತಿ ಕದಡುವ ಯತ್ನ ಮಾಡಿದರೆ ಕ್ರಮ: ಪೊಲೀಸ್​ ಆಯುಕ್ತ ಬಿ‌.ದಯಾನಂದ್​

ಇನ್ ಪ್ಯಾಂಟರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ನಗರ ಪೊಲೀಸ್​ ಆಯುಕ್ತ ಬಿ‌.ದಯಾನಂದ್​, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಕೈಗೊಳ್ಳಲಿದ್ದೇವೆ. ಕೆಎಸ್.ಆರ್.ಪಿ, ಸಿಎಆರ್​​ ಸೇರಿದಂತೆ ಪೊಲೀಸ್ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ: ಸೋಮವಾರ ಬೆಂಗಳೂರು ಬಂದ್, ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಿಎಂಟಿಸಿಯಿಂದ ಹೆಚ್ಚುವರಿ ಟ್ರಿಪ್

ನಗರದಲ್ಲಿ ಯಾವುದೇ ರ‍್ಯಾಲಿಗೆ ಅವಕಾಶವಿಲ್ಲ. ಕಾನೂನು ಬಾಹಿರ ಕೃತ್ಯಕ್ಕೆ, ಶಾಂತಿ ಕದಡುವ ಯತ್ನ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಆಟೋ ಚಾಲಕರ ಬೇಡಿಕೆಗಳು

  • ಆಟೋ ಚಾಲಕರಿಗೆ 10 ಸಾವಿರ ರೂ. ಮಾಸಿಕ ಪರಿಹಾರ
  • ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ
  • ರಾಜ್ಯ ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ಧಪಡಿಸಬೇಕು
  • ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಇಂದಿರಾ ಕ್ಯಾಂಟೀನ್ ಬೇಕು
  • ಎಲೆಕ್ಟ್ರಿಕ್ ಆಟೋಗಳಿಗೆ ಸಹ ರಹದಾರಿ ನೀಡಬೇಕು

ಟ್ಯಾಕ್ಸಿ ಚಾಲಕರ ಬೇಡಿಕೆಗಳು

  • ಜೀವಾವಧಿ ತೆರಿಗೆ ಕಂತುಗಳಲ್ಲಿ ಪಾವತಿಸುವ ಅವಕಾಶ ಕಲ್ಪಿಸಿ
  • ಟ್ಯಾಕ್ಸಿ ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು
  • ಮಕ್ಕಳಿಗೆ ವಿದ್ಯಾರ್ಥಿ ವೇತನ, ವಿದ್ಯಾಭ್ಯಾಸಕ್ಕೆ ಧನಸಹಾಯ

ಖಾಸಗಿ ಬಸ್ ಚಾಲಕರ ಬೇಡಿಕೆಗಳು

  • ಖಾಸಗಿ ಬಸ್​ಗಳಿಗೂ ‘ಶಕ್ತಿ’ ಯೋಜನೆಯನ್ನು ವಿಸ್ತರಿಸಬೇಕು
  • ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು
  • ಕಿ.ಮೀ. ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:30 pm, Sun, 10 September 23